ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ಹೋಬಳಿ ಘಟಕವು ಹಮ್ಮಿಕೊಂಡಿರುವ “ಚಿಣ್ಣರೊಂದಿಗೆ ಚಿಲಿಪಿಲಿ ಗಾನ – ಕತಾ -ಯಾನ” ಸರಣಿ ಕಾರ್ಯಕ್ರಮದ ಆರನೇ ಕಾರ್ಯಕ್ರಮವು ಜು. 19 ರಂದು ಅರಂಬೂರಿನಲ್ಲಿರುವ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಇಡ್ಯಡ್ಕದಲ್ಲಿ ನಡೆಯಿತು.
















ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಪೂರ್ವಾಧ್ಯಕ್ಷ ರಮೇಶ್ ರವರು ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಶ್ರೀಮತಿ ಚಂದ್ರಾವತಿ ಬಡ್ಡಡ್ಕ ಕಾರ್ಯಕ್ರಮದ ಔಚಿತ್ಯವನ್ನು ವಿವರಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾವನಾ ಸಂಗೀತ ಶಾಲೆಯ ಸಂಚಾಲಕ ಕೆ.ಆರ್. ಗೋಪಾಲಕೃಷ್ಣ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿ ಮಮತಾ ರವೀಶ್ ಭಾಗವಹಿಸಿ ಮಕ್ಕಳಿಗೆ ಹಾಡು ಕತೆಗಳನ್ನು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕದ ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತಡ್ಕ ಹಾಗೂ ಸುಭಾಷ್ ಕೆ.ಎಸ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ ಸ್ವಾಗತಿಸಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕಲಾವತಿ ವಂದಿಸಿದರು. ಸಹ ಶಿಕ್ಷಕಿಯರಾದ ಮಲ್ಲಿಕ, ಮಾನಸ ಎ ಮತ್ತು ಕವಿತಾ ಕಾಂಚನ್ ಸಹಕರಿಸಿದರು. ಮಕ್ಕಳ ಪೋಷಕರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುಮಾರು ಒಂದೂವರೆ ಗಂಟೆಯ ಕಾಲ ನಡೆಸಿದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗಾಗಿ ಹಾಡುಗಳನ್ನು ಹಾಡಿ, ಕತೆಯನ್ನು ಹೇಳಿ ಮಕ್ಕಳಿಗೆ ರಂಜನೆಯೊಂದಿಗೆ ಜ್ಞಾನವನ್ನೂ ನೀಡಿದ್ದು ಮಕ್ಕಳು ಇದರಲ್ಲಿ ಸಂಪೂರ್ಣ ತೊಡಗಿ ಆನಂದಿಸಿದರು.
ಕಸಾಪ ಸುಳ್ಯ ಹೋಬಳಿ ಘಟಕವು ತನ್ನ ಹೋಬಳಿ ವ್ಯಾಪ್ತಿಯ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಈ ಕಾರ್ಯಕ್ರಮವನ್ನು ಯೋಜಿಸಿದ್ದು ಪ್ರತೀ ಶನಿವಾರ ಆಯ್ದ ಶಾಲೆಯಲ್ಲಿ ಕಾರ್ಯಕ್ರಮ ನೀಡುತ್ತಾ ಬರುತ್ತಿದೆ. ಈ ಮೊದಲು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಯ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಐವರ್ನಾಡು, ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೋಲ್ಚಾರು ಹಾಗೂ ಕೊಯಿಕುಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕಾಂತಮಂಗಲಗಳಲ್ಲಿ ಈ ಹಿಂದೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದೆ.










