ಸುಳ್ಯ ತಾಲೂಕು ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ

0

ಮೆಸ್ಕಾಂ ಸಿಬ್ಬಂದಿ ಕೊರತೆ ಮತ್ತು ಕಾರ್ಯವೈಖರಿ ಬಗ್ಗೆ ಗಂಭೀರ ಚರ್ಚೆ

ಸುಳ್ಯ ತಾಲೂಕು ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಇಂದು ಸುಳ್ಯ ತಾಲೂಕು ಪಂಚಾಯತ್ ಕಛೇರಿ ಸಭಾಂಗಣದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸುಳ್ಯದಲ್ಲಿ ವಿಪರೀತ ಗಾಳಿ ಮಳೆಯಿಂದಾಗಿ ವಿದ್ಯುತ್ ಲೈನ್, ಕಂಬಗಳು ಮುರಿದಿದ್ದು ದುರಸ್ಥಿ ಪಡಿಸುವ ಕಾರ್ಯ ನಿಧಾನಗತಿಯಲ್ಲಿ ನಡೆಯುತ್ತಿದೆ. ಕೆಲವು ಪ್ರದೇಶಗಳಿಗೆ 5 ದಿನಗಳಿಂದ ವಿದ್ಯುತ್ ಸಂಪರ್ಕ ಇಲ್ಲದೇ ಸಮಸ್ಯೆಯಲ್ಲಿರುವ ಬಗ್ಗೆ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಸಭೆಯಲ್ಲಿದ್ದ ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮೆಸ್ಕಾಂ ಅಧಿಕಾರಿ ಸಿಬ್ಬಂದಿ ಕೊರತೆಯಿಂದ ಕೆಲಸ ನಿಧಾನ ವಾಗುತ್ತಿದೆ ಎಂದು ಸಭೆಗೆ ತಿಳಿಸಿದರು.

ಸದಸ್ಯ ಭವಾನಿಶಂಕರ್ ಕಲ್ಮಡ್ಕ ಮಾತನಾಡಿ ಸುಳ್ಯದಲ್ಲಿ ಸಿಬ್ಬಂದಿ ಕೊರತೆ ಇಂದು ನಿನ್ನೆಯದಲ್ಲ ಮೆಸ್ಕಾಂ ಇಲಾಖೆ ಸುಳ್ಯಕ್ಕೆ ಅಗತ್ಯ ವಿರುವ ಲೈನ್ ಮ್ಯಾನ್ ಗಳ ಬೇಡಿಕೆ, ಗ್ಯಾಂಗ್ ಮ್ಯಾನ್ ಗಳ ಬೇಡಿಕೆಯ ಬಗ್ಗೆ ಎಷ್ಟು ಪ್ರಸ್ತಾವನೆ ಕಳಿಸಿದ್ದೀರಿ? ನಿನ್ನೆಯ ಪತ್ರಿಕೆಯಲ್ಲಿ ಸಹ ಸಿಬ್ಬಂದಿ ಕೊರತೆ ಬಗ್ಗೆ ವರದಿ ಬಂದಿದೆ. ಸುಳ್ಯಕ್ಕೆ ಈಗ ಕೇವಲ 9 ಲೈನ್ ಮ್ಯಾನ್ ಗಳು 180 ಟಿ ಸಿ ಗಳನ್ನು ನೋಡಿಕೊಳ್ಳಬೇಕಾಗಿದೆ. ಸುಳ್ಯಕ್ಕೆ ಬೇಕಿರುವ ಸಿಬ್ಬಂದಿಗಳ ಬಗ್ಗೆ ಬೇಡಿಕೆ ಪ್ರಸ್ತಾವನೆಯನ್ನು ಕಳುಹಿಸಿರುವ ಬಗ್ಗೆ ಸಭೆಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೆಸ್ಕಾಂ ಅಧಿಕಾರಿ ಇಲಾಖೆಯ ಪ್ರಸ್ತಾವನೆಯ ಪ್ರತಿಯನ್ನು ಮೇಲಧಿಕಾರಿಗಳಲ್ಲಿ ಕೇಳಿ ಸಮಿತಿಗೆ ನೀಡುವುದಾಗಿ ತಿಳಿಸಿದರು.

ಗ್ರಹ ಲಕ್ಷೀ ಯೋಜನೆಯ ಪ್ರಗತಿ ಬಗ್ಗೆ ಸಂಬಂಧಿಸಿದಂತೆ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ಸುಳ್ಯ ತಾಲೂಕಿನ ಆರು ಜನ ಬೆಡ್ ರಿಡನ್ ಪಲಾನುಭವಿಗಳು ಆಧಾರ್ ಸೀಡಿಂಗ್ ಆಗದೇ ಸಮಸ್ಯೆ ಎದುರಾಗಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಗೆ ಅಂಚೆ ಇಲಾಖೆಯ ಅಧಿಕಾರಿ ಮತ್ತು ಆಧಾರ್ ನೋಂದಣಿ ಸಿಬ್ಬಂದಿಯನ್ನು ಸಭೆಗೆ ಬರುವಂತೆ ಸದಸ್ಯ ಕಾರ್ಯದರ್ಶಿ ತಾ. ಪಂ. ಕಾರ್ಯನಿರ್ವಾಹನಾಧಿಕಾರಿ ರಾಜಣ್ಣ ತಿಳಿಸಿದರು. ಸಭೆಗೆ ಬಂದ ಅಂಚೆ ಇಲಾಖೆಯ ಸಿಬ್ಬಂದಿಗಳು ಈ 6 ಮಂದಿ ಪಲಾನುಭವಿಗಳ ಮನೆಗೆ ತೆರಳಿ ಆಧಾರ್ ಗೆ ಸಂಬಂಧಿಸಿದ ಸಮಸ್ಯೆ ಇದ್ದರೆ ಬಗೆಹರಿಸಲು ನಾವು ಸಿದ್ದರಿದ್ದೇವೆ ಎಂದು ತಿಳಿಸಿದರು.
ಇದಕ್ಕೆ ಉತ್ತರಿಸಿದ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆಯವರು 10 ದಿನಗಳ ಒಳಗೆ ಒಂದು ದಿನ ಸಮಯ ನಿಗದಿ ಮಾಡಿ ಬೆಡ್ ರಿಡನ್ ಸಿಬ್ಬಂದಿಗಳ ಸಮಸ್ಯೆ ಪರಿಹಾರಕ್ಕೆ ಸೂಚಿಸಿದರು.

ಸುಳ್ಯ -ಕೊಡಿಯಾಲಬೈಲು – ದುಗ್ಗಲಡ್ಕ ರಸ್ತೆಯಲ್ಲಿ ಬಸ್ಸು ಸಂಚಾರ ಪ್ರಾರಂಭವಾಗಿ ಮರುದಿನ ನಿಲ್ಲಿಸಿರುವ ಬಗ್ಗೆ ಸದಸ್ಯರು ಕೆ ಎಸ್ ಆರ್ ಟಿ ಸಿ ಅಧಿಕಾರಿಗಳಿಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಆಲೆಟ್ಟಿಗೆ, ಮಡಪ್ಪಾಡಿಗೆ ಬಸ್ಸು ಸಂಚಾರ ಪ್ರಾರಂಭಿಸಲಾಗಿದೆ. ಆದರೆ ಕೊಡಿಯಾಲ ಬೈಲು ದುಗ್ಗಲಡ್ಕ ರಸ್ತೆಯಲ್ಲಿ ರಸ್ತೆ ಸರಿ ಇಲ್ಲದಿರುವ ಕಾರಣಕ್ಕೆ ತಾತ್ಕಾಲಿಕ ನಿಲ್ಲಿಸಲಾಗಿದೆ. ಮುಂದೆ ರಸ್ತೆ ಸರಿಪಡಿಸಿದರೆ ಈ ರಸ್ತೆಯಲ್ಲಿ ಬಸ್ಸು ಸಂಚಾರ ಮುಂದುವರಿಸಲಾಗುವುದು ಎಂದು ಮಾಹಿತಿ ನೀಡಿದರು.

ಸುಳ್ಯದಿಂದ ತೋಡಿಕಾನಕ್ಕೆ ನೂತನ ಬಸ್ಸು ಪ್ರಾರಂಬಿಸುವ ಪ್ರಸ್ತಾವನೆ ಬಗ್ಗೆ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು ಸುಳ್ಯ -ತೋಡಿಕಾನ ರಸ್ತೆಯಲ್ಲಿ ನೂತನ ಬಸ್ಸು ಪ್ರಾರಂಭಿಸಲು ವಿಭಾಗೀಯ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಸುಳ್ಯಕ್ಕೆ ನೂತನವಾಗಿ 10 ಬಸ್ಸು ಬೇಡಿಕೆಯನ್ನು ಸರಕಾರಕ್ಕೆ ಕೂಡಲೇ ಪ್ರಸ್ತಾವನೆ ಮೂಲಕ ಕಳುಹಿಸುವಂತೆ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಾಳುಗೋಡಿಗೆ ಸುಳ್ಯದಿಂದ ಮತ್ತು ಪುತ್ತೂರು ಸವನೂರು ಪೈಲಾರ್ ಮೂಲಕ ಸುಬ್ರಮಣ್ಯಕ್ಕೆ ಬಸ್ಸು ಸಂಚಾರ ಪ್ರಾರಂಭಿಸಲು ನಾಗರಿಕರು ಮನವಿ ಸಲ್ಲಿರುವ ಬಗ್ಗೆ ಪ್ರಸ್ತಾಪಿಸಿದ ಸದಸ್ಯ ಭವಾನಿಶಂಕರ್ ಕಲ್ಮಡ್ಕ ಸರಕಾರದಿಂದ ಅನುಮೋದನೆ ಬಂದಕೂಡಲೇ ಪ್ರಾರಂಭಿಸುವಂತೆ ಒತ್ತಾಯಿಸಿದರು.

ಮಡಪ್ಪಾಡಿಗೆ ಬಸ್ಸು ಸಂಚಾರ ಪ್ರಾರಂಭಮಾಡಿರುವ ಬಗ್ಗೆ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳಿಗೆ ಮತ್ತು ಗ್ಯಾರಂಟಿ ಅನುಷ್ಠಾನ ಸಮಿತಿಯವರಿಗೆ ಸದಸ್ಯ ಸೋಮಶೇಖರ್ ಕೇವಳ ಅಭಿನಂದನೆ ಸಲ್ಲಿಸಿದರು.

ಅನ್ನಭಾಗ್ಯ, ಯುವನಿಧಿ ಯೋಜನೆ ಪ್ರಗತಿ ಬಗ್ಗೆ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಸದಸ್ಯರುಗಳಾದ ಧನುಷ್ ಕುಕ್ಕೇಟಿ, ವಿಜೇಶ್ ಹಿರಿಯಡ್ಕ, ರಾಜು ನೆಲ್ಲಿಕುಮೇರಿ, ಅಬ್ಬಾಸ್ ಅಡ್ಪಂಗಾಯ, ಲತೀಫ್ ಅಡ್ಕಾರ್, ಶಿಲ್ಪಾ ಇಬ್ರಾಹಿಂ, ಶ್ರೀಮತಿ ಭವಾನಿ ಬೊಮ್ಮಟ್ಟಿ, ರವಿ ಗುಂಡಡ್ಕ, ಶ್ರೀಮತಿ ಕಾಂತಿ ಬಿ ಎಸ್ ಮತ್ತು ಇಲಾಖಾಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಮಿತಿ ಸದಸ್ಯ ಕಾರ್ಯದರ್ಶಿ, ತಾ. ಪಂ. ಕಾರ್ಯನಿರ್ವಾಹನಾಧಿಕಾರಿ ರಾಜಣ್ಣ ಕಾರ್ಯಕಲಾಪ ನಡೆಸಿಕೊಟ್ಟರು.