ವೆಂಕಪ್ಪ ಗೌಡರದು ಕ್ಷುಲ್ಲಕ ಹೇಳಿಕೆ – ಕಾಂಗ್ರೆಸ್ ಕೃಷಿಕರ ದಾರಿ ತಪ್ಪಿಸಲು ಯತ್ನಿಸುತ್ತಿದೆ : ವೆಂಕಟ್ ವಳಲಂಬೆ ಪ್ರತಿಕ್ರಿಯೆ

0

” ಸುಳ್ಯದಲ್ಲಿ ನಿನ್ನೆ ಸಂಸದ ಕ್ಯಾ. ಬ್ರಿಜೇಶ್ ಚೌಟರ ವಿಶೇಷ ಕಾಳಜಿಯಿಂದ ಕಾಫಿ ಬೆಳೆಯುವ ಬಗ್ಗೆ ರೈತರಿಗಾಗಿ ಕಾಫಿಕೋ ಕಾರ್ಯಗಾರ ಅಯೋಜಿಸಿದ್ದೆವು. ಇಂತಹ ರೈತಪರ ವಿಚಾರದಲ್ಲಿ ಕಾಂಗ್ರೆಸ್ ಮುಖಂಡ ಎಂ. ವೆಂಕಪ್ಪ ಗೌಡರು ಕ್ಷುಲ್ಲಕ ಹೇಳಿಕೆ ನೀಡಿದ್ದಾರೆ. ಅದನ್ನು ಬಿಜೆಪಿ ಖಂಡಿಸುತ್ತದೆ ” ಎಂದು ಬಿ.ಜೆ.ಪಿ. ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ಎರಡೂವರೆ ವರ್ಷಗಳಿಂದ ನಿಮ್ಮದೇ ಸರ್ಕಾರ ರಾಜ್ಯದಲ್ಲಿದ್ದು ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಏನು ಕ್ರಮ ಕೈಗೊಂಡಿದೆ ಮೊದಲು ಸ್ಪಷ್ಟಪಡಿಸಿ. ಅಡಿಕೆ ಕೃಷಿಕರು ಹಳದಿ ರೋಗ, ಎಲೆ ಚುಕ್ಕಿ ರೋಗದಿಂದ ಕಷ್ಟಕ್ಕೆ ಸಿಲುಕಿದ್ದು ಈ ಹಿನ್ನೆಲೆಯಲ್ಲಿ ಕಾಫಿ ಕೃಷಿ ಬಗ್ಗೆ ತಾಲೂಕಿನ ಜನತೆಗೆ ಮಾಹಿತಿ ಕೊಡುವ ಕಾರ್ಯಕ್ರಮವಾಗಿದ್ದು ಅದು ಯಾವುದೇ ಪಕ್ಷದ ಕಾರ್ಯಕ್ರಮವಾಗಿರಲಿಲ್ಲ. ಬಿಜೆಪಿ ಅಡಿಕೆ ಕೃಷಿಕರ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದೆ. ಆದರೆ ಕಾಂಗ್ರೆಸ್ ಪಕ್ಷ ಕೃಷಿಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ರೈತರ ಅಳಿವು ಉಳಿವಿನ ಪ್ರಶ್ನೆ ಬಂದಾಗ ಪಕ್ಷ ರಾಜಕೀಯ ಮಾಡುವುದು ರೈತರಿಗೆ ಮಾಡಿದ ಅವಮಾನವಾಗುತ್ತದೆ. ಇದಕ್ಕೆ ಅಡಿಕೆ ಬೆಳೆಗಾರರು ಮುಂದಿನ ದಿನಗಳಲ್ಲಿ ಉತ್ತರ ನೀಡಲಿದ್ದಾರೆ ” ಎಂದು ವೆಂಕಟ್ ವಳಲಂಬೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.