ಅಡ್ಕಾರು ಬಳಿ ಬಸ್ ಗಳ ಅಪಘಾತ: ಹಲವರಿಗೆ ಗಾಯ, ಆಸ್ಪತ್ರೆಗೆ ದಾಖಲು

0

ಅಡ್ಕಾರು ಬಳಿ ಎರಡು ಸರಕಾರಿ ಬಸ್ ಗಳು ಪರಸ್ಪರ ಡಿಕ್ಕಿ ಹೊಡೆದು ಪ್ರಯಾಣಿಕರು ಗಾಯಗೊಂಡ ಘಟನೆ ವರದಿಯಾಗಿದೆ.

ಧರ್ಮಸ್ಥಳದಿಂದ ಮೈಸೂರಿಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಹಾಗೂ ಸುಳ್ಯದಿಂದ ಪುತ್ತೂರಿನ ಕಡೆಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿನ ನಡುವೆ ಈ ಅಪಘಾತ ಸಂಭವಿಸಿದೆ. ಅಡ್ಕಾರು ಬಸ್ಸು ತಂಗುದಾಣ ಸಮೀಪ ಈ ಅಪಘಾತ ಸಂಭವಿಸಿದೆ. ಸುಮಾರು 20ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿಗೆ ಗಾಯವಾಗಿದ್ದು, ಹೆಚ್ಚಿನದಾಗಿ ಮುಖದ ಭಾಗಕ್ಕೆ ಮತ್ತು ಎದೆ ಭಾಗಕ್ಕೆ ಪೆಟ್ಟಾಗಿದೆ.


ದೊಡ್ಡತೋಟ ನಿವಾಸಿ ಮೇಘನಾ ಎಂಬ ಯುವತಿಗೆ ತಲೆಯ ಭಾಗಕ್ಕೆ, ಪೆರಾಜೆಯ ಬಾಲಚಂದ್ರ ಹಾಗೂ ಪುಂಡರಿಕ ಎಂಬುವವರ ತಲೆ ಹಾಗೂ ಮೂಗು, ತುಟಿಯ ಭಾಗಕ್ಕೆ ಗಾಯವಾಗಿದೆ. ಅದೇ ರೀತಿ ಜುಬೈದ ಎಂಬುವರ ತಲೆ ಮತ್ತು ಹಲ್ಲಿಗೆ,ರವೀಂದ್ರ ಇರ್ದೆ ಪುತ್ತೂರು ಇವರಿಗೆ ಮೂಗು ಮತ್ತು ಹಲ್ಲಿನ ಭಾಗಕ್ಕೆ ಗಾಯವಾಗಿದ್ದು ಮಡಿಕೇರಿ ನಿವಾಸಿ ವಿದ್ಯಾ ಎಂಬವರ ತಲೆಗೆ ಪೆಟ್ಟಾಗಿದೆ. ಕಲ್ಗುಂಡಿ ನಿವಾಸಿ ಅನುರಾಧ ಎಂಬ ಮಹಿಳೆಗೆ ತಲೆ ಮತ್ತು ಮುಖದ ಭಾಗಕ್ಕೆ ಗಂಭೀರ ಪೆಟ್ಟಾಗಿದೆ. ಹಳೇಗೇಟು ನಿವಾಸಿ ಲಲಿತರಿಗೆ ತುಟಿ ಹಾಗೂ ಹಲ್ಲಿನ ಭಾಗಕ್ಕೆ ಗಾಯಗಳಾಗಿವೆ.

ಬಸ್ಸಿನಲ್ಲಿ ಕಾಲೇಜು ವಿದ್ಯಾರ್ಥಿಗಳು ಕೂಡ ಇದ್ದು ಕೆಲವು ವಿದ್ಯಾರ್ಥಿಗಳಿಗೂ ಕೂಡ ಸಣ್ಣಪುಟ್ಟ ಗಾಯ ಸಂಭವಿಸಿದೆ.

ಗಾಯಾಳುಗಳನ್ನು ಬೇರೆ ಬೇರೆ ವಾಹನಗಳಲ್ಲಿ ಸುಳ್ಯದ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತರಲಾಗಿದೆ.
ಆಸ್ಪತ್ರೆಗೆ ಕೆಎಸ್ಆರ್ಟಿಸಿ ಡಿಪೋ ಅಧಿಕಾರಿಗಳು ಭೇಟಿ ನೀಡಿ ಗಾಯಗಳು ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.