ಆನೆಗುಂಡಿಯಲ್ಲಿ ಕಸ ಎಸೆದವರಿಗೆ ಕನಕಮಜಲು ಗ್ರಾ.ಪಂ. ದಂಡ

0

ಕನಕಮಜಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಆನೆಗುಂಡಿ ಎಂಬಲ್ಲಿ ಕಸ ಎಸೆದವರನ್ನು ಪತ್ತೆ ಮಾಡಿದ ಪಂಚಾಯತ್ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು, ಕಸ ಎಸೆದವರನ್ನು ಕರೆಸಿ ದಂಡ ವಿಧಿಸಿ ಮುಚ್ಚಳಿಕೆ ಬರೆಸಿ‌ ಕಳುಹಿಸಿ ಕೊಟ್ಟ ಘಟನೆ ವರದಿಯಾಗಿದೆ.

ಆನೆಗುಂಡಿಯಲ್ಲಿ ಕಸದ ರಾಶಿ ಆಗಾಗ್ಗೆ ಬೀಳುತಿತ್ತು. ಗ್ರಾಮ ಸಭೆಯಲ್ಲಿ, ಸಾಮಾನ್ಯ ಸಭೆಯಲ್ಲಿ ಕಸ ಎಸೆದವರನ್ನು ಪತ್ತೆ ಹಚ್ಚುವಂತೆ ಆಗ್ರಹ ವ್ಯಕ್ತವಾಗಿತ್ತು.

ನ.13ರಂದು ಆನೆಗುಂಡಿಗೆ ಪಂಚಾಯತ್ ಉಪಾಧ್ಯಕ್ಷ ಶ್ರೀಧರ ಕುತ್ಯಾಳ, ಪಂಚಾಯತ್ ಪ್ರಭಾರ ಪಿಡಿಒ ಬಾಬು ನಾಯ್ಕ ಹಾಗೂ ಸಿಬ್ಬಂದಿಗಳು ಹೋದರು. ಕಸದ ರಾಶಿ ಇತ್ತು. ಆ ಕಸವನ್ನು ಪರಿಶೀಲಿಸಿದಾಗ ಆರ್ಲಪದವಿನ ಬೊಳ್ಳಿಂಬಲ ಅಬೂಬಕ್ಕರ್ ಸಿದ್ದಿಕ್ ಎಂಬವರ ಮನೆಯ ವಿಳಾಸವಿರುವ ಕವರ್, ಪುಸ್ತಕ ಲಭ್ಯವಾದವು. ಆ ಆಧಾರದಲ್ಲಿ ಪಂಚಾಯತ್ ನಿಂದ ಸಿದ್ದೀಕ್ ರನ್ನು ಸಂಪರ್ಕಿಸಿ, ನ.15ರಂದು ಪಂಚಾಯತ್ ಗೆ ಕರೆಸಲಾಯಿತು. ವಿಚಾರಣೆ ವೇಳೆ ಆ ವಸ್ತುಗಳು ತನ್ನ ಮನೆಯದ್ದೆಂದು ಸಿದ್ದಿಕ್ ಒಪ್ಪಿಕೊಂಡರೆಂದೂ, ತಾನು ತಂದು ಹಾಕಿದ್ದಲ್ಲ. ಯಾರೋ ಇಲ್ಲಿ ಎಸೆದಿದ್ದಾರೆಂದು ಹೇಳಿದರೆನ್ನಲಾಗಿದೆ. ಬಳಿಕ ಪಂಚಾಯತ್ ವತಿಯಿಂದ 4500 ದಂಡ ಹಾಕಲಾಯಿತೆಂದು ಹಾಗೂ ಅವರಿಂದಲೇ ತೆರವಿಗೊಳಿಸಲಾಯಿತು ಎಂದು ತಿಳಿದು ಬಂದಿದೆ.

“ಪಂಚಾಯತ್ ವ್ಯಾಪ್ತಿಯಲ್ಲಿ ಯಾರೂ ಕಸವನ್ನು ಎಸೆಯಬಾರದು. ಕಸ ಎಸೆದಿರುವುದು ಗೊತ್ತಾದರೆ ಅವರಿಗೆ ದಂಡ ವಿಧಿಸಲಾಗುವುದು” ಎಂದು ಪ್ರಭಾರ ಪಿಡಿಒ ಬಾಬು ನಾಯ್ಕ ರವರು ಸುದ್ದಿಗೆ ತಿಳಿಸಿದ್ದಾರೆ.