
ತಿರುಪತಿ ಯಾತ್ರೆಗೆ ತೆರಳಿದ್ದ ಬಿಳಿನೆಲೆ ಕೈಕಂಬದ ವಾಹನ ಕಾಳಹಸ್ತಿ ದೇವಳ ಸಮೀಪ ಅಪಘಾತಕ್ಕೀಡಾಗಿ ಬಿಳಿನೆಲೆ ಕೈಕಂಬದ ಶೇಷಮ್ಮ (70) ಮಹಿಳೆ ಮೃತಪಟ್ಟಿದ್ದಾರೆ. 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ತಿರುಪತಿಯ ಶ್ರೀ ಕಾಳಹಸ್ತಿ ಹೆದ್ದಾರಿಯಲ್ಲಿ ಬುಧವಾರ ಬೆಳಿಗ್ಗೆ ಘಟನೆ ಸಂಭವಿಸಿದೆ.
ಕಡಬ ತಾಲೂಕು ಬಿಳಿನೆಲೆ ಗ್ರಾಮದ ಕೈಕಂಬದ ಕುಟುಂಬ ಹಾಗೂ ಅವರ ಸಂಬಂಧಿಕರು ಪ್ಯಾಕೇಜ್ ಟೂರ್ ಯೋಜನೆಯಡಿ ಟಿ.ಟಿ.ಯಲ್ಲಿ ತಿರುಪತಿ ಯಾತ್ರೆ ಕೈಗೊಂಡಿದ್ದರು. ಒಟ್ಟು ಮೂರು ವಾಹನಗಳಲ್ಲಿ ಕರ್ನಾಟಕದ ಇತರ ಭಾಗದವರೂ ವಾಹನದಲ್ಲಿದ್ದರು.

ಮಂಗಳವಾರ ಗುಂಡ್ಯದಿಂದ ವಾಹನ ಹೊರಟಿತ್ತು. ಬುಧವಾರ ಸಂಜೆ ತಿರುಪತಿಯಲ್ಲಿ ದರ್ಶನ ನೆರವೇರಿಸುವುದಕ್ಕೂ ಮೊದಲು ಶ್ರೀಕಾಳಹಸ್ತಿಗೆ ಕರ್ನಾಟಕದ ತಂಡ ಹೊರಟಿತ್ತು.

ಕೈಕಂಬದವರು ಇದ್ದ ವಾಹನ ಮೇಲ್ಸೇತುವೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಬಡಿದು ಪಲ್ಟಿಯಾಗಿದೆ. ತೀವ್ರ ಗಾಯಗೊಂಡಿದ್ದ ಕೂಸಪ್ಪ ಅವರ ಪತ್ನಿ ಶೇಷಮ್ಮ (70) ಮೃತರಾಗಿದ್ದಾರೆ. ಕೈಕಂಬದ ತಿಲೇಶ್ (45), ಕಮಲಾಕ್ಷಿ (60) ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ನಿವೃತ್ತ ಯೋಧ ಸೋಮಶೇಖರ್, ಶೀನಪ್ಪ, ಕೂಸಪ್ಪ, ನಿಖಿಲ್, ತನುಷ್ ಇದ್ದಾರೆ ಎಂದು ತಿಳಿದುಬಂದಿದೆ.