ದಾಸನಕಜೆ ಕಾಲನಿಯಲ್ಲಿ ನೀರಿನ ಸಮಸ್ಯೆ

0

ನೆಲ್ಲೂರು ಕೆಮ್ರಾಜೆ ಗ್ರಾಮದ ದಾಸನಕಜೆ ಭಾಗದಲ್ಲಿ ನೀರಿನ ಸಮಸ್ಯೆ ಎದುರಾಗಿದೆ ಎಂದು ಅಲ್ಲಿಯ ನಿವಾಸಿಗಳು ದೂರಿಕೊಂಡ ಘಟನೆ ವರದಿಯಾಗಿದೆ.

ದಾಸನಕಜೆಯ ಪ.ಪಂಗಡ 4 ಮನೆಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಗಂಗಾ ಕಲ್ಯಾಣ ಯೋಜನೆಯಲ್ಲಿ ನೀರಿನ ಟ್ಯಾಂಕ್ ನಿರ್ಮಿಸಲಾಗಿತ್ತು. ಇದರಿಂದ ಈ 4 ಮನೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ಕಳೆದ ಕೆಲ ದಿನಗಳಿಂದ ನೀರಿನ ಸರಬರಾಜಾಗದೇ ಸಮಸ್ಯೆ ಎದುರಾಗಿದೆ. ಇದೇ ಟ್ಯಾಂಕ್ ಗೆ ಪರ್ಯಾಯವಾಗಿ ನಾರ್ಣಕಜೆಯಿಂದ ನೀರು ಹಾಕಲು ವ್ಯವಸ್ಥೆ ಮಾಡಲಾಗಿದ್ದರೂ ಇಲ್ಲಿಯೂ ನೀರಿನ‌ ಅಭಾವ ಎದುರಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪಂಚಾಯತ್ ಅಧ್ಯಕ್ಷ ಧನಂಜಯರವರನ್ನು ಸಂಪರ್ಕಿಸಿದಾಗ ಸಂಜೆ ಅಲ್ಲಿಗೆ ಭೇಟಿ ನೀಡಿ ನೀರಿನ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ.

ನಮಗೆ ಕಳೆದ 4 ದಿನಗಳಿಂದ ಟ್ಯಾಂಕ್ ಗೆ ನೀರು ಬರುತ್ತಿಲ್ಲ. ನೀರಿಲ್ಲದೇ ಸಮಸ್ಯೆಯಾಗುತ್ತಿದೆ. ನೀರಿನ ವ್ಯವಸ್ಥೆ ಆದಷ್ಟು ಬೇಗ ಮಾಡಬೇಕೆಂದು ನಮ್ಮ ಬೇಡಿಕೆ
-ಮುರಳಿ, ಸ್ಥಳೀಯರು