ಎಸ್.ಕೆ. ಕಾಂಪೌಂಡ್ ನಿವಾಸಿಗಳಿಗೆ ಕುಡಿಯುವ ನೀರು ಪೂರೈಕೆಯಾಗುವ ನಿರೀಕ್ಷೆ

0


ನ.ಪಂ. ಸದಸ್ಯ ಬುದ್ಧ ನಾಯ್ಕ್‌ರವರ ಸತತ ಪ್ರಯತ್ನ


ನಗರ ಪಂಚಾಯತ್ ಸದಸ್ಯ ಬುದ್ಧ ನಾಯ್ಕ್ ರವರ ಸತತ ಪ್ರಯತ್ನದಿಂದ ಹಳೆಗೇಟು ಎಸ್.ಕೆ. ಕಾಂಪೌಂಡ್ ಪರಿಸರಕ್ಕೆ ವಾರದೊಳಗೆ ನೀರು ಪೂರೈಕೆ ಆಗಲಿದೆ ಎಂದು ತಿಳಿದುಬಂದಿದೆ.


ಕಳೆದ ೨೦ ದಿನಗಳಿಂದ ಈ ಭಾಗದ ಜನರಿಗೆ ಕುಡಿಯುವ ನೀರು ನಲ್ಲಿಗಳಲ್ಲಿ ಬಾರದೆ ಸಮಸ್ಯೆ ಎದುರಿಸುತ್ತಿದ್ದರು.
ಇದಕ್ಕೆ ಕಾರಣ ಈ ಭಾಗಕ್ಕೆ ನೀರು ಸಂಪರ್ಕವಾಗುತ್ತಿದ್ದ ಹೊಸಗದ್ದೆ ಬಳಿ ಇದ್ದ ಬೋರ್ವೆಲ್ ನಲ್ಲಿ ನೀರು ಇಂಗಿದ ಕಾರಣ ಈ ಸಮಸ್ಯೆ ಎದುರಾಗಿತ್ತು.


ಸ್ಥಳೀಯ ನಿವಾಸಿಗಳ ಸಮಸ್ಯೆ ಅರಿತ ಸದಸ್ಯರು ಹಾಗೂ ನಗರ

ಪಂಚಾಯತಿನ ಮುಖ್ಯ ಅಧಿಕಾರಿ ಟ್ಯಾಂಕರ್ ಮೂಲಕ ಎರಡು ದಿನಕ್ಕೊಮ್ಮೆ ನೀರಿನ ವ್ಯವಸ್ಥೆ ಕಲ್ಪಿಸುವ ಮೂಲಕ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿದ್ದರು.
ಈ ನಡುವೆ ಬೋರ್ ಗುಂಡಿ ತೆಗೆಯಲು ಹೊಸ ಗದ್ದೆ ಪರಿಸರದಲ್ಲಿ ಎರಡು ಬಾರಿ ಪ್ರಯತ್ನಪಟ್ಟಿದ್ದು ಅಲ್ಲಿ ವಿಫಲವಾಗಿದ್ದರು.


ಆದರೆ ಪ್ರಯತ್ನವನ್ನು ಬಿಡದ ಸದಸ್ಯರು ಮೂರನೇ ಬಾರಿಗೆ ಹಳೆ ಗೇಟು ಅಡ್ಕ ಬಳಿ ರಂಗಮನೆಗೆ ಸಂಪರ್ಕಿಸುವ ರಸ್ತೆಯ ಬಳಿ ಮತ್ತೆ ಬೋರ್ ಕೊರೆಸಿದ್ದು ಯಶಸ್ವಿಯಾಗಿ ಇದರಿಂದ ಸುಮಾರು ಮೂರು ಇಂಚು ನೀರು ಲಭ್ಯವಾಗಿದೆ.


ಈ ಕೆಲಸ ಪೂರ್ಣಗೊಂಡಿದ್ದು ಇನ್ನು ಮೂರು ಅಥವಾ ನಾಲ್ಕು ದಿನಗಳೊಳಗೆ ಎಸ್ ಕೆ ಕಾಂಪೌಂಡ್ ಮತ್ತು ಪರಿಸರದ ನಿವಾಸಿಗಳಿಗೆ ಇದರಿಂದ ನೀರು ಪೂರೈಸುವ ಕಾರ್ಯ ಆರಂಭಿಸಲಾಗುತ್ತದೆ ಎಂದು ಸದಸ್ಯರು ತಿಳಿಸಿದ್ದಾರೆ. ಸದಸ್ಯರ ಈ ಕಾರ್ಯದಿಂದಾಗಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದ ನಿವಾಸಿಗಳಿಗೆ ನೆಮ್ಮದಿ ದೊರಕಿದಂತಾಗುತ್ತದೆ.