ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಯಶಸ್ವಿನಿ ಆನೆಗೆ ಅನಾರೋಗ್ಯ: ಕೆಲವು ಮಾಧ್ಯಮಗಳಲ್ಲಿ ವರದಿ

0

ಆನೆ ಆರೋಗ್ಯವಾಗಿದೆ; ಇದು ಅಪಪ್ರಚಾರ: ಕಾರ್ಯನಿರ್ವಹಣಾಧಿಕಾರಿ ಡಾl ನಿಂಗಯ್ಯ ಸ್ಪಷ್ಟನೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆನೆ ಯಶಸ್ವಿನಿ ಅನಾರೋಗ್ಯದಿಂದಿರುವುದಾಗಿಯೂ , ಇದಕ್ಕೆ ಮಾವುತರೊಳಗಿನ ವಿವಾದ ಕಾರಣವೆಂದೂ ಕೆಲವು ದೃಶ್ಯ ಮಾಧ್ಯಮಗಳಲ್ಲಿ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಕೃಷ್ಣಮೂರ್ತಿ ಭಟ್ ರವರ ಹೇಳಿಕೆ ಆಧರಿಸಿ ವರದಿಯಾಗಿದ್ದು, ಈ ವರದಿ ಸರಿಯಲ್ಲ, ಅಪಪ್ರಚಾರ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಡಾl ನಿಂಗಯ್ಯ ಸ್ಪಷ್ಟಪಡಿಸಿದ್ದಾರೆ.

ಕೆಲವು ದೃಶ್ಯ ಮಾಧ್ಯಮಗಳಲ್ಲಿ ಆನೆ ಕುರಿತಂತೆ ವರದಿ ಪ್ರಕಟವಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಕುರಿತಂತೆ ಡಾ. ನಿಂಗಯ್ಯ ಅವರನ್ನು ಸುದ್ದಿ ಸಂಪರ್ಕಿಸಿದಾಗ, ದೇವಸ್ಥಾನದ ಯಶಸ್ವಿನಿ ಆನೆ ಆರೋಗ್ಯವಾಗಿದೆ. ಸರ್ಕಾರದ ನಿರ್ದೇಶನದ ಮೇರೆಗೆ 10 ದಿನಗಳ ಹಿಂದೆ ಶಿವಮೊಗ್ಗದ ವೈದ್ಯ ಡಾ. ವಿನಯ್ ಎಂಬವರು ಬಂದು ಆನೆ ಆರೋಗ್ಯ ಪರಿಶೀಲಿಸಿದ್ದಾರೆ. ಅವರು ಆರೋಗ್ಯದಿಂದಿರುವುದಾಗಿ ವರದಿ ನೀಡಿದ್ದಾರೆ. ಯಾರೂ ಆನೆಯ ಆರೋಗ್ಯದ ಬಗ್ಗೆ ಆತಂಕಪಡಬೇಕಾಗಿಲ್ಲ.
ದುರುದ್ದೇಶದಿಂದ ಷಡ್ಯಂತರ ಮಾಡಲಾಗುತ್ತಿದೆ. ನಮ್ಮ ಆನೆಯನ್ನು ಮಾವುತರು ಚೆನ್ನಾಗಿ ನೋಡಿಕೊಳ್ಳುತಿದ್ದಾರೆ ಎಂದು ಡಾl ನಿಂಗಯ್ಯರವರು ತಿಳಿಸಿದ್ದಾರೆ.