ಹತ್ಯೆಯ ಬಳಿಕ ಕಾಸರಗೋಡಿನ ಮಸೀದಿಯೊಂದರ ಬಳಿ ಆಶ್ರಯ ಪಡೆದಿದ್ದ ಆರೋಪಿಗಳು
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ
ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಕುರಿತು ಎಡಿಜಿಪಿ ಅಲೋಕ್ ಕುಮಾರ್ ಮಂಗಳೂರಿನಲ್ಲಿ ಆ.11ರಂದು ಪತ್ರಿಕಾಗೋಷ್ಠಿ ನಡೆಸಿ ‘ಪ್ರವೀಣ್ ನೆಟ್ಟಾರು ಹತ್ಯೆಗೈದ ಮೂವರು ಆರೋಪಿಗಳನ್ನು ಬಂಧಿಸಿದ್ದೇವೆ. ಬಂಧಿತ ಮೂವರು ಸ್ಥಳೀಯರೇ ಆಗಿದ್ದಾರೆ. ಅಡಿಕೆ ಸರಬರಾಜು ಕೆಲಸ ಮಾಡುವ ಸುಳ್ಯದ ನಿವಾಸಿ ಶಿಯಾಬ್(33), ಚಿಕನ್ ಸಪ್ಲಯರ್ ರಿಯಾಜ್ ಅಂಕತ್ತಡ್ಕ(27), ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿರುವ ಬಶೀರ್ ಎಲಿಮಲೆ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು ” ಆರೋಪಿಗಳ ಬಗ್ಗೆ ಮಾಹಿತಿ ಮೊದಲೇ ಇತ್ತು. ಆದರೆ ಅವರು ಬೇರೆ ಬೇರೆ ಕಡೆ ಸ್ಥಳ ಬದಲಾಯಿಸುತ್ತಿದ್ದರಿಂದ ಪತ್ತೆ ಹಚ್ಚಲು ತಡವಾಯ್ತು. 15 ದಿನಗಳ ನಂತರ ಇದೀಗ ಪ್ರಮುಖ ಅರೋಪಿಗಳನ್ನು ಪತ್ತೆಹಚ್ಚಿದ್ದೇವೆ. ಇವರ ಮೇಲೆ ಹಳೆಯ ಯಾವುದೇ ಕೇಸ್ ಗಳು ಇಲ್ಲ. ಇವರಿಗೆ ಪಿ.ಎಫ್.ಐ ಲಿಂಕ್ ಇದೆಯ ಎಂಬುದರ ಕುರಿತು ಚಾರ್ಚ್ ಶೀಟ್ ನಲ್ಲಿ ದೃಢ ಪಡಿಸಲಿದ್ದೇವೆ. ಯಾವ ಕಾರಣಕ್ಕಾಗಿ ಹತ್ಯೆ ಮಾಡಲಾಗಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಹತ್ಯೆ ಮಾಡಿದ ಬಳಿಕ ಆರೋಪಿಗಳು ಕಾಸರಗೋಡಿನ ಮಸೀದಿಯೊಂದರಲ್ಲಿ ಆಶ್ರಯ ಪಡೆದಿದ್ದಾರೆ. ಆ ಬಳಿಕ ಎಲ್ಲಿಗೆ ತೆರಳಿದ್ದಾರೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ತನಿಖೆಯ ಬಳಿಕ ಖಚಿತ ಮಾಹಿತಿ ತಿಳಿಸುತ್ತೇವೆ. ಆರೋಪಿಗಳು ಬ್ಲ್ಯಾಕ್ ಕಲರ್ ಸ್ಪ್ಲೆಂಡರ್ ಬೈಕ್ ನಲ್ಲಿ ಬಂದು ಪ್ರವೀಣ್ ಹತ್ಯೆ ಮಾಡಿದ್ದಾರೆ.