ಕೇಸರಿ ಪಡೆಯ ಯುವಕರಿಂದ ಅಲ್ಲಲ್ಲಿ ಸಾಹಸಮಯ ಅಟ್ಟಿ ಮಡಿಕೆ ಒಡೆಯುವ ಸ್ಪರ್ಧೆ
ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡದ ಆಯೋಜನೆ
ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡ ಇದರ ಆಶ್ರಯದಲ್ಲಿ 9 ನೇ ವರ್ಷದ ಮೊಸರು ಕುಡಿಕೆ ಉತ್ಸವವು ಆ.29 ರಂದು ಸುಳ್ಯದಲ್ಲಿ ನಡೆಯಿತು.
ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಅಪರಾಹ್ನ ಮೊಸರು ಕುಡಿಕೆ ಉತ್ಸವಕ್ಕೆ ದೇವಸ್ಥಾನದ ಅನುವಂಶಿಕ ಮೊಕ್ತೇಸರರ ಡಾ.ಹರಪ್ರಸಾದ್ ತುದಿಯಡ್ಕ ರವರು ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ಮೀನುಗಾರಿಕೆ ಬಂದರು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ರವರು ಶೋಭಾಯಾತ್ರೆಗೆ ಕೇಸರಿ ಧ್ವಜ ಹಾರಿಸಿ ಚಾಲನೆ ನೀಡಿದರು.
ವೀರ ಕೇಸರಿ ಯುವಕರ ಅಟ್ಟಿ ಮಡಿಕೆ ಒಡೆಯುವ ಶೋಭಾಯಾತ್ರೆಯು ದೇವಸ್ಥಾನದಿಂದ ಹೊರಟು ಎ.ಪಿ.ಯಂ.ಸಿ ಚೆನ್ನಕೇಶವ ವೃತ್ತದ ಮೂಲಕ ಕುರುಂಜಿಭಾಗ್, ಅಂಬಟೆಡ್ಕ, ವಿವೇಕಾನಂದ ಸರ್ಕಲ್, ಜೂನಿಯರ್ ಕಾಲೇಜ್ ರಸ್ತೆಯಾಗಿ ಮುಳಿಯ ಮೈದಾನ, ಶಾಸ್ತ್ರಿ ವೃತ್ತ, ವಿಶ್ವ ಸೆಂಟ್ರಲ್ ಶ್ರೀ ರಾಂ ಪೇಟೆ , ಶ್ರೀ ಹರಿ ಕಾಂಪ್ಲೆಕ್ಸ್, ರಾಜಶ್ರೀ ಕಾಂಪ್ಲೆಕ್ಸ್, ಪಂಚಾಯತ್ ಬಸ್ ನಿಲ್ದಾಣ, ನಾಯರ್ ಕಾಂಪ್ಲೆಕ್ಸ್ ಗಾಂಧಿನಗರದಲ್ಲಿ ಮಡಿಕೆ ಒಡೆದು ಮತ್ತೆ ಹಿಂತಿರುಗಿ ರಥಬೀದಿ ಐಡಿಯಲ್ ಅಟೋ ವರ್ಕ್ಸ್ ಬಳಿ ಹಾಗೂ ದೇವಸ್ಥಾನದ ಕೌಸ್ತುಭ ಆರ್ಕೇಡ್ ಮುಂದೆ ಹಾಕಿರುವ ಸಾಲು ಅಟ್ಟಿ ಮಡಿಕೆ ಒಡೆಯುವುದರೊಂದಿಗೆ ಶೋಭಾಯಾತ್ರೆಯು ಸಮಾಪನಗೊಂಡಿತು.
ರಾತ್ರಿ ಸಭೆ ಮುಗಿದ ನಂತರ ದೇವಸ್ಥಾನದ ಮುಂಭಾಗದಲ್ಲಿ ಅಳವಡಿಸಿದ ಸುಮಾರು 150 ಮಿಕ್ಕಿ ಅಟ್ಟಿ ಮಡಿಕೆಗಳನ್ನು ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ತಡರಾತ್ರಿ ವರೆಗೆ ಯುವಕರು ಒಡೆಯುವ ಕಾಯಕದಲ್ಲಿ ಪಾಲ್ಗೊಂಡರು. ಶೋಭಾಯಾತ್ರೆಯು ಸಾಗಿ ಬರುವ ಸಂದರ್ಭದಲ್ಲಿ ನಗರದ ಎಲ್ಲಾ ಕಡೆಗಳಲ್ಲಿ ಮಹಿಳೆಯರು ಮಕ್ಕಳು ಸೇರಿದಂತೆ ಸಾವಿರಾರು ಮಂದಿ ಶೋಭಾಯಾತ್ರೆಯನ್ನು ವೀಕ್ಷಿಸಿದರು.