ಪೆರುವಾಜೆ : ದಿ.ಪ್ರವೀಣ್ ನೆಟ್ಟಾರು – ಸ್ಮೃತಿ ದಿನ, ರಕ್ತದಾನ ಶಿಬಿರ

0

ಬಿಜೆಪಿ ಸುಳ್ಯ ಮಂಡಲ ಹಾಗೂ ಬಿಜೆಪಿ ಯುವ ಮೋರ್ಚಾ ಸುಳ್ಯ ಮಂಡಲ ವತಿಯಿಂದ ಜಿಹಾದಿಗಳಿಂದ ಹತ್ಯೆಗೀಡಾದ ಬಿಜೆಪಿ ಯುವ ಮುಖಂಡ ದಿ.ಪ್ರವೀಣ್ ನೆಟ್ಟಾರು ಸ್ಮೃತಿ ದಿನ ,ರಕ್ತದಾನ ಶಿಬಿರವು ಪೆರುವಾಜೆ ಜೆ.ಡಿ.ಅಡಿಟೋರಿಯಂನಲ್ಲಿ ಜು.26 ರಂದು ನಡೆಯಿತು.
ದಿ.ಪ್ರವೀಣ್ ನೆಟ್ಟಾರು ಭಾವಚಿತ್ರದ ಎದುರು ಪ್ರವೀಣ್ ತಂದೆ ಶೇಖರ ಪೂಜಾರಿ ಹಾಗು ತಾಯಿ ರತ್ನಾವತಿಯವರು ದೀಪ ಬೆಳಗಿಸಿ ,ಪುಷ್ಪನಮನ ಸಲ್ಲಿಸಿದರು.


ಶಾಸಕಿ ಭಾಗೀರಥಿ ಮುರುಳ್ಯ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯಾಗಿ ಒಂದು ವರ್ಷವಾಯಿತು.
ಇವರನ್ನು ನೆನಪಿಸುವ ಕಾರ್ಯಕ್ರಮ ಇಂದು ಆಗಿದೆ.
ಪಕ್ಷದ ವತಿಯಿಂದ ನಳಿನ್ ಕುಮಾರ್ ಕಟೀಲ್ ರವರು ಬೆಂಬಲವಾಗಿ ನಿಂತು ಸುಂದರವಾದ ಮನೆಯನ್ನು ನಿರ್ಮಿಸಿಕೊಟ್ಟು ದಿ.ಪ್ರವೀಣ್ ನೆಟ್ಟಾರುರವರ ಕನಸನ್ನು ನನಸಾಗಿ ಮಾಡಿದ್ದಾರೆ.ಮನೆಯವರಿಗೆ ಸುರಕ್ಷಿತವಾಗಿ ಜೀವನ ಮಾಡಲು ಸಹಕಾರ ಮಾಡಿದ್ದಾರೆ.ಪಕ್ಷ ಯಾವಾಗಲೂ ನಿಮ್ಮೊಂದಿಗೆ ಇದೆ ಎಂದು ಹೇಳಿದರು.
ಕಾರ್ಗಿಲ್ ದಿನವಾದ ಇವತ್ತು ಕಾರ್ಗಿಲ್ ಯೋಧರನ್ನು ಕೂಡ ನೆನಪಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಸ್ವಾಗತಿಸಿ, ನಮ್ಮೊಂದಿಗೆ ಲವಲವಿಕೆಯಿಂದ ಕ್ರಿಯಾಶೀಲರಾಗಿದ್ದ ಪ್ರವೀಣ್ ನೆಟ್ಟಾರು ಅವರನ್ನು ಜಿಹಾದಿ ಶಕ್ತಿಗಳು ಹತ್ಯೆ ಮಾಡಿದೆ.


ಅಮಾಯಕನ ಹತ್ಯೆಯ ವಿರುದ್ಧ ಇಡೀ ಸಮಾಜ ಬೆಂಬಲವಾಗಿ ನಿಂತಿತು.
ಹಿಂದೂ ಸಮಾಜದಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಕೊಲೆ ಮಾಡಲಾಗಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಧಾಕೃಷ್ಣ ರೈ ಬೂಡಿಯರ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
ವೇದಿಕೆಯಲ್ಲಿ ತಾಲೂಕು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶ್ರೀಕೃಷ್ಣ ಎಂ.ಆರ್., ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ವ್ಯ.ಸ.ಅಧ್ಯಕ್ಷ ಪದ್ಮನಾಭ ಪೆರುವಾಜೆ , ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಗುರುದತ್ ನಾಯಕ್, ವಸಂತ ನಡುಬೈಲು, ಪ್ರವೀಣ್ ಪತ್ನಿ ನೂತನ ಉಪಸ್ಥಿತರಿದ್ದರು.


ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.
ಪುತ್ತೂರು ಬ್ಲಡ್ ಬ್ಯಾಂಕಿನವರು ರಕ್ತದಾನ ಶಿಬಿರದಲ್ಲಿ ಸಹಕರಿಸಿದರು.