ಸ್ನೇಹ ಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತ ಪ್ರಶಸ್ತಿ ಪ್ರದಾನ

0

ಒಂದನೆಯಿಂದ ಹತ್ತನೇ ವರೆಗಿನ ತರಗತಿಗಳಲ್ಲಿ ಗಣಿತದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶ್ರೀನಿವಾಸ ರಾಮಾನುಜನ್ ಪ್ರಶಸ್ತಿ ಹಾಗೂ ವಿಜ್ಞಾನದಲ್ಲಿ ಅತೀ ಹೆಚ್ಚು ಅಂಕ ಗಳಿಸಿದವರಿಗೆ ವಿಕ್ರಂ ಸಾರಾಭಾಯ್ ಪ್ರಶಸ್ತಿಗಳನ್ನು ವಿತರಿಸಲಾಯಿತು.


ಈ ಕಾರ್ಯಕ್ರಮದಲ್ಲಿ ಶ್ರೀನಿವಾಸ ರಾಮಾನುಜನ್ ಅವರ ಬಗ್ಗೆ ಶಾಲಾ ಗಣಿತ ಶಿಕ್ಷಕಿ ಕು. ಲಿಕ್ಷಿತಾ ರವರು ಮಾತನಾಡಿ “ಭಾರತೀಯರು ವಿಶ್ವಕ್ಕೆ ಶೂನ್ಯವನ್ನು ಪರಿಚಯಿಸಿದರು. ತಮ್ಮ ಅಗಾಧ ಜ್ಞಾನ ಶಕ್ತಿಯ ಮೂಲಕ ವಿಶೇಷ ಕೊಡುಗೆಗಳನ್ನು ನೀಡಿದರು. ಅಂತಹ ಶ್ರೇಷ್ಠ ಕೊಡುಗೆಯನ್ನು ನೀಡಿದ ಪ್ರಮುಖ ವ್ಯಕ್ತಿಗಳಲ್ಲಿ ಶ್ರೀನಿವಾಸ ರಾಮಾನುಜನ್ ಒಬ್ಬರು. ಫೇಸ್ಬುಕ್ಕಿನಲ್ಲಿ ಬಳಸಲಾಗಿರುವ ಸೂತ್ರ ಶ್ರೀ ರಾಮಾನುಜಂ ರವರು ಕಂಡುಹಿಡಿದಿರುವ ಸೂತ್ರವಾಗಿದೆ. ಕೇವಲ 32 ವರ್ಷ ಬದುಕಿದ್ದ ರಾಮಾನುಜನ್ ಅವರು ಗಣಿತೀಯ ಕ್ಷೇತ್ರದಲ್ಲಿ ಮಹತ್ತರ ಸಾಧನೆಯನ್ನು ಮಾಡಿ ಭಾರತವನ್ನು ವಿಶ್ವ ಪಥದಲ್ಲಿ ಕೊಂಡೊಯ್ದರು” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಕ್ರಂ ಸಾರಾಭಾಯಿಯವರ ಕೊಡುಗೆಯ ಬಗ್ಗೆ ಮಾತನಾಡಿದ ಶಿಕ್ಷಕಿ ಶ್ರೀಮತಿ ಅಮೃತ ಭಟ್ “ಬಾಹ್ಯಾಕಾಶ ವಿಜ್ಞಾನದ ಪಿತಾಮಹ ಎನಿಸಿಕೊಂಡಿರುವ ಭೌತಶಾಸ್ತ್ರಜ್ಞ ವಿಕ್ರಂ ಸಾರಾಭಾಯಿ ಅವರು ಇಸ್ರೋದ ಸ್ಥಾಪಕರು. ಇವರು ತಂತ್ರಜ್ಞಾನದ ಬಳಕೆಯ ಮೂಲಕ ಮಾನವ ಸಮುದಾಯಕ್ಕೆ ಇರುವ ತೊಂದರೆಗಳನ್ನು ಪರಿಹರಿಸುವ ಕಾರ್ಯವನ್ನು ಮಾಡಿದರು. ಆರ್ಯಭಟ ಉಪಗ್ರಹದ ಜನಕ ಎಂದು ಕರೆಯಲ್ಪಟ್ಟಿರುವ ಇವರ ಹೆಸರನ್ನು ಚಂದ್ರನ ಮೇಲಿರುವ ಕುಳಿಗೆ ಮಾತ್ರವಲ್ಲದೆ ಚಂದ್ರನಲ್ಲಿಗೆ ಕಳುಹಿಸಿದ ವ್ಯೋಮನೌಕೆಯ ಲ್ಯಾಂಡರ್ ಗೆ ಇವರ ಹೆಸರನ್ನು ನೀಡಿ ಗೌರವಿಸಲಾಗಿದೆ. ಇವರ ವೈಜ್ಞಾನಿಕ ಕೊಡುಗೆಗಳು ಅಪಾರ” ಎಂದು ಹೇಳಿದರು. ಈ ವಿಶೇಷ ಬಹುಮಾನಗಳನ್ನು ಬೆಂಗಳೂರಿನ ಪೋಷಕರಾದ ಶಂಭು ನಶಿಪುಡಿಯವರು ಪ್ರಾಯೋಜಿಸಿದ್ದರು.

ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಯವರು ಸ್ವಾಗತಿಸಿದರು.
ಶಾಲಾ ಶಿಕ್ಷಕ ಶ್ರೀದೇವಿಪ್ರಸಾದ ಜಿ.ಸಿ ಕಾಯರ್ತೋಡಿ ಇವರು ವಂದಿಸಿದರು.
ಶಾಲಾ ಶಿಕ್ಷಕಿ ಶ್ರೀಮತಿ ಪ್ರತಿಮಕುಮಾರಿ ಕೆ ಎಸ್ ಇವರು ನಿರೂಪಿಸಿದರು.