ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಆಗಮಿಸಿದ ನೂತನ ಬಂಡಿರಥ

0

ಆಡಳಿತಾಧಿಕಾರಿ, ಎ.ಸಿ ಜುಬಿನ್ ಮೊಹಪಾತ್ರರಿಂದ ಮೆರವಣಿಗೆಗೆ ಚಾಲನೆ

ಭವ್ಯ ಸ್ವಾಗತದೊಂದಿಗೆ ಎದುರುಗೊಂಡ ಜನತೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವೇಮೂ ಸಾಯಿ ಶ್ರೀನಿವಾಸ್ ರಾಮಲಿಂಗೇಶ್ವರ ರಾವ್ ಸೇವಾರೂಪದಲ್ಲಿ ಶ್ರೀ ದೇವರಿಗೆ ಸಮರ್ಪಿಸಲಿರುವ ನೂತನ ಬಂಡಿ ರಥವು ಭಕ್ತಿ ಸಡಗರದ ಭವ್ಯ ಮೆರವಣಿಗೆಯೊಂದಿಗೆ ಮೇ.20 ರ ಸಂಜೆ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಆಗಮಿಸಿತು. ಆನೆ, ಬಿರುದಾವಳಿ ಮತ್ತು ಬ್ಯಾಂಡ್ ವಾದ್ಯಗಳ ನಿನಾದದೊಂದಿಗೆ ರಥವನ್ನು ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು.

ಕ್ಷೇತ್ರಕ್ಕಾಗಮಿಸಿದ ರಥವನ್ನು ಭಕ್ತಿಪೂರ್ವಕವಾಗಿ ಕಾಶಿಕಟ್ಟೆ ಮಹಾಗಣಪತಿ ಸನ್ನಿಧಾನದಲ್ಲಿ ಸ್ವಾಗತಿಸಲಾಯಿತು.ಆರಂಭದಲ್ಲಿ ಶ್ರೀ ಮಹಾಗಣಪತಿಗೆ ಪೂಜೆ ನೆರವೇರಿಸಿದ ಬಳಿಕ ಪುರೋಹಿತ ಪ್ರಸಾದ್ ಕಲ್ಲೂರಾಯ ನೂತನ ಬಂಡಿ ರಥಕ್ಕೆ ಪೂಜೆ ನೆರವೇರಿಸಿದರು.

ಬಳಿಕ ಶ್ರೀ ದೇವಳದ ಆಡಳಿತಾಧಿಕಾರಿ ಮತ್ತು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ನೂತನ ರಥಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಕೋಟೇಶ್ವರ, ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ,ಗ್ರಾ.ಪಂ.ಸದಸ್ಯ ಹರೀಶ್.ಎಸ್.ಇಂಜಾಡಿ, ಸೇವಾರ್ಥಿಗಳ ಆಪ್ತರಾದ ಮೋಹನದಾಸ ರೈ, ರಥ ನೀಡುವಲ್ಲಿ ಸಹಕರಿಸಿದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಶ್ರೀವತ್ಸ ಬೆಂಗಳೂರು, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರುಗಳಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯೆ ವಿಮಲಾ ರಂಗಯ್ಯ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಕೃಷ್ಣಮೂರ್ತಿ ಭಟ್ ನೂತನ ರಥಕ್ಕೆ ಪುಷ್ಪಾರ್ಚನೆ ಮಾಡಿದರು.

ನಂತರ ಭಕ್ತಿ ಪೂರ್ವಕವಾದ ಭವ್ಯ ಮೆರವಣಿಗೆಗೆ ಶ್ರೀ ದೇವಳದ ಆಡಳಿತಾಧಿಕಾರಿ ಜುಬಿನ್ ಮೊಹಪಾತ್ರ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ದೇವರ ಸೇವೆ ಮಾಡುವುದು ಪುಣ್ಯದ ಕಾರ್ಯ.ಪುಣ್ಯ ತಾಣ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂಡಿ ರಥ ನೀಡುವಂತಹ ಸೇವೆಯನ್ನು ನೀಡಿದುದು ಶ್ರೀ ದೇವರ ಕೃಪಾಶೀರ್ವಾದಕ್ಕೆ ಬುನಾದಿಯಾಗುತ್ತದೆ.ಸೇವಾರ್ಥಿಗಳಿಗೆ ಮತ್ತು ಇದಕ್ಕೆ ಸಹಕರಿಸಿದ ಅವರ ಆಪ್ತರಿಗೂ ಕೃತಜ್ಞತೆಗಳು. ಇದೇ ರೀತಿ ಹೆಚ್ಚಿನ ಇನ್ನೂ ಹೆಚ್ಚಿನ ದಾನಿಗಳು ಶ್ರೀ ದೇವಳಕ್ಕೆ ಸೇವೆ ನೆರವೇರಿಸಲು ಮುಂದೆ ಬಂದರೆ ಸಂತಸಕರ. ಅಲ್ಲದೆ ಸುಬ್ರಹ್ಮಣ್ಯದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯಬೇಕಾಗಿದೆ.ಇಲ್ಲಿ ಪ್ರಗತಿ ಕಾರ್ಯಗಳ ಅನುಷ್ಠಾನಕ್ಕೆ ಕೂಡಾ ದಾನಿಗಳು ಸಹಕರಿಸಿ ಕೊಡುಗೆ ನೀಡಲು ಮುಂದೆ ಬಂದರೆ ಹೆಚ್ಚು ಅನುಕೂಲಕರ ಎಂದರು.

ಡಾ.ನಿಂಗಯ್ಯ ಅವರು ಮಾತನಾಡಿ
ಕ್ಷೇತ್ರದ ಬ್ರಹ್ಮರಥ ಸೇರಿದಂತೆ ಅನೇಕ ರಥಗಳನ್ನು ನಿರ್ಮಿಸಿದ ರಥಶಿಲ್ಪಿ ಕೋಟೇಶ್ವರದ ರಾಜಗೋಪಾಲ ಆಚಾರ್ಯ ರಥವನ್ನು ಶೀಘ್ರವಾಗಿ ನಿರ್ಮಿಸಿಕೊಟ್ಟಿದ್ದಾರೆ.ಕೇವಲ ಎರಡು ತಿಂಗಳಲ್ಲಿ ರಥ ನಿರ್ಮಿಸಿಕೊಟ್ಟ ಇವರ ಶ್ರಮವು ಅಭಿನಂದನೀಯ ಎಂದು ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಹೇಳಿದರು.

.ಶ್ರೀ ದೇವಳದ ಗೋಪುರದ ಬಳಿ ಕ್ಷೇತ್ರ ಪುರೋಹಿತ ವೇದಮೂರ್ತಿ ಮಧುಸೂದನ ಕಲ್ಲೂರಾಯರು ರಥಕ್ಕೆ ಪೂಜೆ ನೆರವೇರಿಸಿದರು.ಅಲ್ಲದೆ ತೆಂಗಿನ ಕಾಯಿ ಸಮರ್ಪಿಸಿದರು. ಮೆರವಣಿಗೆಯಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರುಗಳು, ಮಾಸ್ಟರ್ ಪ್ಲಾನ್ ಸಮಿತಿಯ ಮಾಜಿ ಸದಸ್ಯರುಗಳು, ಶ್ರೀ ದೇವಳದ ಸಿಬಂಧಿಗಳು, ಜನಪ್ರತಿನಿಧಿಗಳು, ಭಕ್ತಾಧಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.