ಕನಕಮಜಲು ಗ್ರಾಮದಲ್ಲಿ ನಡೆಯುವ ಸರಣಿ ಕಳ್ಳತನದ ಬಗ್ಗೆಸ್ವರ್ಣ ಮಹಿಳಾ ಮಂಡಲದಿಂದ ಮಹಿಳಾ ಆಯೋಗಕ್ಕೆ ದೂರು

0

ಸೂಕ್ತ ತನಿಖೆ ನಡೆಸುವಂತೆ ಸುಳ್ಯ ಪೊಲೀಸ್ ಠಾಣೆಗೆ ನಿರ್ದೇಶನ

ಕನಕಮಜಲಿನಲ್ಲಿ ೨೦೨೩ರಿಂದ ಇದುವರೆಗೆ ನಡೆದ ಸರಣಿ ಕಳ್ಳತನ ಕನಕಮಜಲಿನ ಸ್ವರ್ಣ ಮಹಿಳಾ ಮಂಡಲ ಕರ್ನಾಟಕ ಮಹಿಳಾ ಆಯೋಗಕ್ಕೆ ಹಾಗೂ ದ.ಕ ಎಸ್.ಪಿ ಯವರಿಗೆ ಮನವಿ ಸಲ್ಲಿಸಿದ್ದು ಶೀಘ್ರವಾಗಿ ಅಪರಾಧಿಗಳನ್ನು ಪತ್ತೆಹಚ್ಚಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದ್ದು, ಮನವಿಗೆ ಸ್ಪಂದಿಸಿದ ಮಹಿಳಾ ಆಯೋಗ ಪೋಲಿಸ್ ವರಿಷ್ಠಾಧಿಕಾರಿಯವರ ಮೂಲಕ ಸುಳ್ಯ ಠಾಣೆಗೆ ಶೀಘ್ರವಾಗಿ ತನಿಖೆ ನಡೆಸುವಂತೆ ಆದೇಶಿಸಿದೆ ಎಂದು ತಿಳಿದು ಬಂದಿದೆ.
ಕಳೆದ ೨೦೨೩ರ ಏಪ್ರಿಲ್ ತಿಂಗಳಿನಿಂದ ೨೦೨೪ರ ಏಪ್ರಿಲ್ ತಿಂಗಳವರೆಗೆ ಕನಕಮಜಲು ಗ್ರಾಮದಲ್ಲಿ ಸರಣಿ ಕಳ್ಳತನಗಳು ನಡೆಯುತ್ತಿದ್ದು, ಗ್ರಾಮದಲ್ಲಿ ಹೆಚ್ಚಾಗಿ ಒಂಟಿಯಾಗಿರುವ ಮನೆಗಳಿದ್ದು, ಮಹಿಳೆಯರು ಒಬ್ಬಂಟಿಯಾಗಿ ವಾಸ್ತವ್ಯ ಮಾಡುವುದಕ್ಕೆ ಭಯಭೀತರಾಗಿದ್ದಾರೆ. ಸರಣಿ ಕಳ್ಳತನದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಮಹಿಳಾ ಆಯೋಗವು ಮೇ. ೨೮ ರಂದು ಸುಳ್ಯ ಪೊಲೀಸ್ ಠಾಣೆಗೆ ಪತ್ರ ಬರೆದು, ಕನಕಮಜಲು ಗ್ರಾಮದಲ್ಲಿ ಮಹಿಳೆಯರಿಗೆ ಸೂಕ್ತ ರಕ್ಷಣೆ ಒದಗಿಸಿ ಕೈಗೊಂಡ ಕ್ರಮದ ವರದಿಯನ್ನು ಆಯೋಗಕ್ಕೆ ೧೫ ದಿನಗಳ ಒಳಗೆ ಕಳಿಸಿಕೊಡುವಂತೆ ಸೂಚಿಸಿತ್ತು.
ಇದಕ್ಕೆ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯಿಂದ ಪ್ರತ್ಯುತ್ತರ ನೀಡಿದ್ದು, ಕಳ್ಳತನ ಪತ್ತೆ ಬಗ್ಗೆ ಲಭ್ಯ ಇರುವ ಎಲ್ಲ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡು ತನಿಖೆ ನಡೆಸಿದೆ. ಸಂಶಯಿತ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು ಆರೋಪಿಗಳ ಪತ್ತೆಗೆ ಪ್ರಯತ್ನಿಸಲಾಗಿದೆ. ತನಿಖೆ ಮುಂದುವರೆದಿದ್ದು ಆರೋಪಿ ಮತ್ತು ಸೊತ್ತು ಪತ್ತೆ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮುಂದುವರಿದಿದೆ ಎಂದು ಹಿಂಬರಹ ನೀಡಿದ್ದಾರೆ. ಅಲ್ಲದೆ ಮಹಿಳಾ ಮಂಡಲದ ಪದಾಧಿಕಾರಿಗಳನ್ನು ಠಾಣೆಗೆ ಕರೆಯಿಸಿ, ಸರಣಿ ಕಳ್ಳತನದ ಬಗ್ಗೆ ಅಪರಾಧ ವಿಭಾಗ ಮತ್ತು ಸುಳ್ಯ ವೃತ್ತದ ನುರಿತ ಅಧಿಕಾರಿ ಸಿಬ್ಬಂದಿಗಳನ್ನು ವಿಶೇಷ ಕರ್ತವ್ಯದಲ್ಲಿ ನೇಮಿಸಿಕೊಂಡು ಕಳವಾದ ಸೊತ್ತು ಮತ್ತು ಅಪರಾಧಿಗಳ ಪತ್ತೆಗೆ ಪ್ರಾಮಾಣಿಕ ಪ್ರಯತ್ನ ನಡೆಸಿzವೆ ಹಾಗೂ ತನಿಖೆ ಪ್ರಗತಿಯಲ್ಲಿದೆ ಎಂದು ಎಸ್.ಐ. ಕು. ಸರಸ್ವತಿಯವರು ತಿಳಿಸಿದ್ದಾರೆ.
ಮಹಿಳಾ ಮಂಡಲದ ತಂಡದಲ್ಲಿ ಅಧ್ಯಕ್ಷೆ ಶ್ರೀಮತಿ ಕುಸುಮ ಅಡ್ಕಾರು ,ಕಾರ್ಯದರ್ಶಿ ಶ್ರೀಮತಿ ಶ್ಯಾಮಲಾ ಪೆರುಂಬಾರು ,ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಾರದಾ ಉಗ್ಗಮೂಲೆ ,ಶ್ರೀಮತಿ ಸುಮತಿ ಕುತ್ಯಾಳ ,ಶ್ರೀಮತಿ ರೇಖಾ ಅಡ್ಕಾರು ,ಶ್ರೀಮತಿ ಭವಾನಿ ಬುಡ್ಲೆಗುತ್ತು ,ಶ್ರೀಮತಿ ಪದ್ಮಾವತಿ ಬುಡ್ಲೆಗುತ್ತು ,ಶ್ರೀಮತಿ ಕಮಲ ಕುತ್ಯಾಳ ಇವರುಗಳು ಪೋಲೀಸ್ ಠಾಣೆಗೆ ಹೋದ ನಿಯೋಗದಲ್ಲಿದ್ದರು.