ಆಲೆಟ್ಟಿ ಗ್ರಾಮದ ಅರಂಬೂರು ಮಜಿಗುಂಡಿ ಎಂಬಲ್ಲಿ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.12 ರಂದು ವರದಿಯಾಗಿದೆ.
ಅರಂಬೂರಿನ ಮಜಿಗುಂಡಿ ನಿವಾಸಿ ನಾರಾಯಣ ನಾಯ್ಕ (52) ಎಂಬವರು ಮೃತ ಪಟ್ಟ ವ್ಯಕ್ತಿ.
ನಾರಾಯಣ ನಾಯ್ಕ ರವರು ಎಂದಿನಂತೆ ಅವರ ಮನೆಯ ಪಕ್ಕದ ತೋಟಕ್ಕೆ ಕೆಲಸಕ್ಕೆ ಹೋದವರು ಸಂಜೆ ಕೆಲಸ ಮುಗಿಸಿ ಅವರ ಮನೆಗೆ ಬಂದವರು ಮನೆಯಲ್ಲಿ ತೋಟಕ್ಕೆ ಸಿಂಪಡಿಸುವ ಕೀಟ ನಾಶಕ ಔಷಧಿ ಸೇವಿಸಿದ್ದರೆಂದು ತಿಳಿದು ಬಂದಿದೆ. ವಿಷಯ ತಿಳಿದ ನೆರೆಯ ಮನೆಯವರಾದ ಉಮೇಶ್ ನಾಯ್ಕ್ ಮತ್ತು ಪುಷ್ಪರಾಜ್ ಹಾಗೂ ಅರಂಬೂರು ಸೇತುವೆ ಬಳಿ ಮಹೋತ್ಸವದ ಶ್ರಮದಾನ ಕೆಲಸ ಮಾಡುತ್ತಿದ್ದ ಯುವಕರು ಸೇರಿ ಅವರನ್ನು ಸ್ಥಳೀಯರಾದ ಉದಯ ನಾರಾಯಣ ಭಟ್ ರವರ ಜೀಪಿನಲ್ಲಿ ಸುಳ್ಯದ ಕೆ.ವಿ.ಜಿ ಆಸ್ಪತ್ರೆಗೆ ಕರೆ ತಂದು ದಾಖಲಿಸಿದ್ದರು.
ವಿಪರೀತ ಪ್ರಮಾಣದಲ್ಲಿ ವಿಷಸೇವನೆ ಮಾಡಿದ್ದಲ್ಲದೆ ಸಮಯ ಮೀರಿದ ಕಾರಣದಿಂದಾಗಿ ಅವರು ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿಮೃತಪಟ್ಟರೆಂದು ತಿಳಿದು ಬಂದಿದೆ.
ಮೃತರು ಪತ್ನಿ ಶ್ರೀಮತಿ ಜಾನಕಿ, ಪುತ್ರ ಆದರ್ಶ, ಪುತ್ರಿಪೂರ್ಣಿಮಾ,
ಸಹೋದರ ಚಂದ್ರಶೇಖರ ಮತ್ತು ಸಹೋದರಿಯನ್ನು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.