ಸಿಬ್ಬಂದಿಗಳನ್ನು ಪ್ರವಾಸ ಕರೆದೊಯ್ದು ವಿಮಾನ ಯಾನ ಮಾಡಿಸಿದ ಸ್ವಾಗತ್ ಐಸ್ ಕ್ರೀಂ ಸಂಸ್ಥೆ

0

ಮೈಸೂರು, ಬೆಂಗಳೂರು ಪ್ರವಾಸದ ಬಳಿಕ 14 ಸಿಬ್ಬಂದಿಗಳಿಗೆ ವಿಮಾನ ಯಾನ ಭಾಗ್ಯ !

ತನ್ನ ಸಂಸ್ಥೆಯ 14 ಸಿಬ್ಬಂದಿಗಳನ್ನು ಮೈಸೂರು, ಬೆಂಗಳೂರು ಪ್ರವಾಸಕ್ಕೆ ಕರೆದೊಯ್ದ ಸುಳ್ಯದ ಸ್ವಾಗತ್ ಐಸ್‌ಕ್ರೀಂ ಸಂಸ್ಥೆ ಆ ಎಲ್ಲಾ ಸಿಬ್ಬಂದಿಗಳನ್ನು ಬೆಂಗಳೂರಿನಿಂದ ಮಂಗಳೂರಿಗೆ ವಿಮಾನದ ಮೂಲಕ ಕರೆ ತಂದು ವಿಶೇಷತೆ ಮೆರೆದಿದೆ.

ಸುಳ್ಯದ ಕುರುಂಜಿಭಾಗ್‌ನಲ್ಲಿ ಕಳೆದ 27 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದು, ಐಸ್ ಕ್ರೀಂ ಉದ್ಯಮದಲ್ಲಿ ಪ್ರಸಿದ್ಧವಾಗಿರುವ ಕೆ. ಪ್ರಭಾಕರನ್ ನಾಯರ್ ಮಾಲಕತ್ವದ ಈ ಸಂಸ್ಥೆಯು ತನ್ನ ಸಿಬ್ಬಂದಿಗಳನ್ನು ಕಳೆದ ಹಲವು ವರ್ಷಗಳಿಂದ ವರ್ಷಕ್ಕೊಂದು ಬಾರಿ ಬೇರೆ ಬೇರೆ ಕಡೆ ಪ್ರವಾಸಕ್ಕೆ ಕರೆದೊಯ್ಯುವ ವ್ಯವಸ್ಥೆ ಮಾಡುತ್ತಿದೆ. ಆದರೆ ಈ ಬಾರಿ ಅವರಿಗೆ ವಿಮಾನ ಯಾನದ ವಿಶೇಷ ಅವಕಾಶವೂ ದೊರೆಯಿತು.

ಜೂ. 20 ರಂದು 20 ಜನರಿರುವ ಈ ತಂಡ ಸುಳ್ಯದಿಂದ ಮಿನಿ ಬಸ್ ನಲ್ಲಿ ಮೈಸೂರಿಗೆ ತೆರಳಿ ಅಲ್ಲಿ ಅರಮನೆ ಸೇರಿದಂತೆ ಪ್ರೇಕ್ಷಣೀಯ ಸ್ಥಳಗಳನ್ನು ಸಂದರ್ಶಿಸಿ ಬಳಿಕ ಬೆಂಗಳೂರಿಗೆ ತೆರಳಿದರು. ಬೆಂಗಳೂರಿನಲ್ಲೂ ಹಲವು ಸ್ಥಳಗಳನ್ನು ವೀಕ್ಷಣೆ ನಡೆಸಿದ ಬಳಿಕ 14 ಮಂದಿ ಸಿಬ್ಬಂದಿಗಳನ್ನು ಬೆಂಗಳೂರು ಏರ್‌ಪೋರ್ಟ್‌ನಿಂದ ಮಂಗಳೂರಿಗೆ ವಿಮಾನದಲ್ಲಿ ಕಳುಹಿಸಿದರು. ಪ್ರಭಾಕರನ್ ನಾಯರ್ ಸೇರಿದಂತೆ ಇತರರು ಅದೇ ಮಿನಿ ಬಸ್‌ನಲ್ಲಿ ಸುಳ್ಯಕ್ಕೆ ಮರಳಿದರು. ರಾತ್ರಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಸಿಬ್ಬಂದಿಗಳನ್ನು ಮತ್ತೊಂದು ವಾಹನದ ಮೂಲಕ ಸುಳ್ಯಕ್ಕೆ ಕರೆ ತರಲಾಯಿತು.

ಸಂಸ್ಥೆಯ ಮಾಲಕ ಕೆ. ಪ್ರಭಾಕರನ್ ನಾಯರ್ , ಅವರ ಪತ್ನಿ ಶ್ರೀಮತಿ ಶಶಿಕಲಾ ಎಂ.ಆರ್., ಪುತ್ರ ಪ್ರಮೋದ್ ಕೆ., ಸೊಸೆ ಅರುಣಾ ಪಿ.ಜಿ., ಮೊಮ್ಮಕ್ಕಳಾದ ಆದಿತ್ಯ, ದೈವಿಕ್ ಈ ಪ್ರವಾಸದಲ್ಲಿ ಜೊತೆಗಿದ್ದರೆ, ಸಿಬ್ಬಂದಿಗಳು ಮತ್ತು ವಾಹನ ಚಾಲಕರಾದ ವಿಜಯ, ಚರಣ್ ಬಳ್ಪ, ಚರಣ್ ಎಲಿಮಲೆ, ತೇಜಸ್, ಚೇತನ್, ಪುರುಷೋತ್ತಮ್, ಯೋಗೀಶ್, ವೆಂಕಟ್ರಮಣ, ಪ್ರವೀಣ್, ಅಜಿತ್‌ಕುಮಾರ್, ವಾಮನ, ಭರತ್‌ ಕುಮಾರ್, ಯಶೋಧಾ, ತಿರುಮಲೇಶ್ವರಿಯವರು ಪ್ರವಾಸದ ಜೊತೆಗೆ ವಿಮಾನಯಾನದ ಅವಕಾಶ ಪಡೆದರು.

ಪ್ರಭಾಕರನ್ ನಾಯರ್ ಅವರ ಈ ನಡೆ ಪ್ರಶಂಸೆಗೆ ಪಾತ್ರವಾಗಿದೆ. ಸುಳ್ಯದ ಉದ್ಯಮ ಕ್ಷೇತ್ರದಲ್ಲಿ ಪ್ರಸಿದ್ಧರಾಗಿರುವ ಅವರು ರೋಟರಿ ಕ್ಲಬ್ ಸೇರಿದಂತೆ ಹಲವು ಸಂಘ ಸಂಸ್ಥೆಯಲ್ಲಿ ಮುಂಚೂಣಿಯಲ್ಲಿದ್ದಾರೆ.

” ನನ್ನ ಸಂಸ್ಥೆಯ ಯಶಸ್ಸಿಗೆ ಸಿಬಂದಿಗಳ ಶ್ರಮವೂ ಕಾರಣ. ಮುಂದೆ ಈ ಸಿಬ್ಬಂದಿಗಳಿಗೆ ವಿಮಾನದಲ್ಲಿ ಹೋಗುವ ಅವಕಾಶ ಸಿಗುತ್ತದೆಯೋ ಗೊತ್ತಿಲ್ಲ. ಆದರೆ ವಿಮಾನದಲ್ಲಿ ಹೋಗಬೇಕೆಂಬ ಕನಸು ಅವರಲ್ಲಿರುತ್ತದೆ. ಅದನ್ನು ನಮ್ಮ ಸಂಸ್ಥೆ ಈಡೇರಿಸಿಕೊಟ್ಟಿದೆ ” ಎಂದು ಪ್ರಭಾಕರ ನಾಯರ್ ಪ್ರತಿಕ್ರಿಯಿಸಿದ್ದಾರೆ.