ಚೆಂಬು ಕುದ್ರೆಪಾಯ ಉಸ್ಮಾನ್ ಕೊಲೆ ಪ್ರಕರಣ : ಆರೋಪಿ ಸಹೋದರರು ಪೊಲೀಸ್ ಕಸ್ಟಡಿಗೆ

0

ಚೆಂಬು ಗ್ರಾಮದ ಕುದ್ರೆಪಾಯ ಎಂಬಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿ ಸಹೋದರರಿಂದ ಕೊಲೆಯಾದ ಉಸ್ಮಾನ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಆರೋಪಿ ಸಹೋದರರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.


ಉಸ್ಮಾನ್‌ರ ಸಹೋದರರಾದ ರಫೀಕ್ ಮತ್ತು ಸತ್ತಾರ್ ಆಸ್ತಿ ವಿವಾದಕ್ಕೆ ಸಂಬಂಧಿಸಿ ಅಣ್ಣ ಉಸ್ಮಾನ್‌ರನ್ನು ಚೂರಿಯಿಂದ ಇರಿದು ಜು.14ರಂದು ಕೊಲೆ ಮಾಡಿದ್ದರು.
ಬಳಿಕ ಅವರು ರಿಕ್ಷಾದಲ್ಲಿ ಅರಂತೋಡುವರೆಗೆ ಬಂದು ಮತ್ತೊಂದು ರಿಕ್ಷಾದಲ್ಲಿ ಸುಳ್ಯಕ್ಕೆ ಬಂದು ಕೇರಳ ಕಡೆಗೆ ಪರಾರಿಯಾಗಿದ್ದರು.


ಅವರನ್ನು ಕೊಡಗು ಪೊಲೀಸರು ಜು.15 ರಂದು ರಾತ್ರಿ ಕೇರಳದಲ್ಲಿ ಬಂಧಿಸಿ, ಕರೆತಂದು ನ್ಯಾಯಾಧೀಶರೆದುರು ಹಾಜರುಪಡಿಸಿದ್ದರು. ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಧೀಶರು ಸೂಚಿಸಿದ್ದರು. ಇಂದು ಮಡಿಕೇರಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.