ಮರ್ಕಂಜ : ವನಮಹೋತ್ಸವ, ಬಿತ್ತೋತ್ಸವ ಹಾಗೂ ವಿಶ್ವ ಪರಿಸರ ದಿನಾಚರಣೆ

0

ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವಿಭಾಗ, ಸುಬ್ರಹ್ಮಣ್ಯ ಉಪವಿಭಾಗ, ಸಾಮಾಜಿಕ ಅರಣ್ಯ ವಿಭಾಗ, ಮಂಗಳೂರು, ದ.ಕ ಜಿ.ಪಂ ಮಂಗಳೂರು, ಸಾಮಾಜಿಕ ಅರಣ್ಯ ವಲಯ ಸುಳ್ಯ ಇದರ ಜಂಟಿ ಆಶ್ರಯದಲ್ಲಿ ಮರ್ಕಂಜ ಸರಕಾರಿ ಪ್ರೌಢಶಾಲೆಯಲ್ಲಿ ಜೂ. 21 ರಂದು ವನಮಹೋತ್ಸವ, ಬಿತ್ತೋತ್ಸವ ಹಾಗೂ ವಿಶ್ವ ಪರಿಸರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮರ್ಕಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಗೀತಾ ಹೊಸೊಳಿಕೆ ವಹಿಸಿದ್ದರು.


ಸುಳ್ಯ ಸಾಮಾಜಿಕ ಅರಣ್ಯ ವಲಯ ಅರಣ್ಯಾಧಿಕಾರಿ ಶೈಲಜಾ ಎಲ್. ಬೀಜವನ್ನು ಬಿತ್ತುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸುಳ್ಯ ವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ ಎನ್. ಪರಿಸರವನ್ನು ನಾವು ಹೇಗೆ ರಕ್ಷಿಸಬೇಕು. ಪರಿಸರವನ್ನು ಶುಚಿಯಾಗಿ ಯಾಕೆ ಇಡಬೇಕು. ಗಿಡಗಳನ್ನು ನೆಡುವ ಉದ್ದೇಶಗಳೇನು ಎಂಬುದಾಗಿ ವಿವರಿಸಿದರು.


ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸುಮಾರು ೫೦ ವಿವಿಧ ಹಣ್ಣಿನ ಗಿಡಗಳನ್ನು ವಿತರಿಸಿದರು ಹಾಗೂ ಶಾಲಾ ಆವರಣ ಹಾಗೂ ಶಾಲಾ ವನದಲ್ಲಿ ೫೦ ವಿವಿಧ ಹಣ್ಣಿನ ಗಿಡಗಳನ್ನು ನೆಡಲಾಯಿತು.


ಕಾರ್ಯಕ್ರಮದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ವಿ.ಹೆಚ್. ಕರಣೀಮರ್ ಹಾಗೂ ಚಂದ್ರು ಬಿ.ಜಿ. ಹಾಗೂ ಸಿಬ್ಬಂದಿಗಳು ಭಾಗವಹಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಎಂ.ಟಿ. ಸ್ವಾಗತಿಸಿದರು. ಮರ್ಕಂಜ ಗ್ರಾಮ ಪಂಚಾಯತ್ ಪಿ.ಡಿ.ಒ ವಿದ್ಯಾಧರ, ಶಾಲಾ ಎಸ್ ಡಿ ಎಂ ಸಿ ಸದಸ್ಯ ನಿತ್ಯಾನಂದ ಭೀಮಗುಳಿ, ಶಾಲಾ ನಾಯಕ ಮೋಕ್ಷಿತ್ ಪಿ.ವಿ ವೇದಿಕೆಯಲ್ಲಿದ್ದರು.


ಶಾಲಾ ವಿದ್ಯಾರ್ಥಿನಿಯರು ಪರಿಸರ ಗೀತೆ ಹಾಡಿದರು. ಶಾಲಾ ಆಂಗ್ಲಭಾಷಾ ಶಿಕ್ಷಕಿ ಮಲ್ಲಿಕಾ ಟಿ. ಕಾರ್ಯಕ್ರಮ ನಿರೂಪಿಸಿ, ಗಣಿತ ಶಿಕ್ಷಕಿ ಪ್ರವೀಣ ಕುಮಾರಿ ಇ. ವಂದಿಸಿದರು. ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.