ವಿನೋಬನಗರ: ಕ್ಷುಲ್ಲಕ ಕಾರಣಕ್ಕೆ ಪತಿ -ಪತ್ನಿ ಮಧ್ಯೆ ಜಗಳ ಹಿನ್ನೆಲೆ

0

ಪತಿಯಿಂದ ಪತ್ನಿಗೆ ಚೂರಿ ಇರಿತ – ಪೊಲೀಸ್ ದೂರು ದಾಖಲು

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಮಹಿಳೆ

ಪತಿ ಪತ್ನಿ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಮನೆಯಲ್ಲಿ ಜಗಳ ನಡೆದು ಪತಿಯೇ ಪತ್ನಿಗೆ ಚೂರಿಯಿಂದ ಇರಿದಿದ್ದು, ಬೆನ್ನಿನ ಭಾಗಕ್ಕೆ ಗಂಭೀರ ಗಾಯಗೊಂಡಿದ್ದ ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದು, ಪೊಲೀಸ್ ಕೇಸು ದಾಖಲಾದ ಘಟನೆ ಜಾಲ್ಸೂರು ಗ್ರಾಮದ ವಿನೋಬನಗರದಿಂದ ವರದಿಯಾಗಿದೆ.

ವಿನೋಬನಗರದ ನವೀನ ಹಾಗೂ ಅವರ ಪತ್ನಿ ಅಶ್ವಿನಿ ಅವರ ಮಧ್ಯೆ ಜೂ.29ರಂದು ರಾತ್ರಿ ಮನೆಯಲ್ಲಿ ಜಗಳ ನಡೆದಿದ್ದು, ಈ ವೇಳೆ ನವೀನ ಅವರು ಪತ್ನಿ ಅಶ್ವಿನಿ ಅವರಿಗೆ ಚೂರಿಯಿಂದ ಇರಿದಿದ್ದರೆನ್ನಲಾಗಿದೆ.

ಈ ವೇಳೆ ಅಶ್ವಿನಿ ಅವರು ತಪ್ಪಿಸಲು ಯತ್ನಿಸಿದ ವೇಳೆ ಅವರ ಬೆನ್ನಿನ ಭಾಗಕ್ಕೆ ಚೂರಿ ಇರಿತವಾಗಿದ್ದು, ಅವರು ಸುಳ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.
ಘಟನೆಯ ಕುರಿತಂತೆ ಅಶ್ವಿನಿ ಅವರ ತಂದೆ ವಾಸುದೇವ ನಾಯ್ಕ ಅವರು ನವೀನ ಅವರ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೆಂದು ತಿಳಿದುಬಂದಿದೆ.
ಆದರೆ ನವೀನ ಅವರು ಆ ಬಳಿಕ ಮನೆಗೂ ಬಾರದೆ ಪೊಲೀಸರಿಂದ ತಪ್ಪಿಸಿಕೊಂಡಿದ್ದರು. ಇದೀಗ ಅಶ್ವಿನಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿ ಮನೆಯಲ್ಲಿ ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿದುಬಂದಿದೆ.