ಸವಣೂರು ವಿದ್ಯಾರಶ್ಮಿಯ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ

0

ಶಿಕ್ಷಕರ ಶ್ರಮ ಫಲಿತಾಂಶದಲ್ಲಿ ಪ್ರಕಟಗೊಂಡಿದೆ : ಸವಣೂರು ಸೀತಾರಾಮ ರೈ

” 2025ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಎಸ್.ಎಸ್.ಎಲ್.ಸಿ.ಯಲ್ಲಿ ರಾಜ್ಯಮಟ್ಟದ 8, 9 ಮತ್ತು10ನೇ ಸ್ಥಾನ ಪಡೆದಿರುವುದು ಮತ್ತು ಎರಡೂ ಸಂಸ್ಥೆಗಳು ಶೇ. 100 ಫಲಿತಾಂಶ ದಾಖಲಿಸುವಲ್ಲಿ ಶಿಕ್ಷಕರ ಶ್ರಮ ಮಹತ್ತರವಾದದ್ದು. ಆ ನಿಟ್ಟಿನಲ್ಲಿ ಇವತ್ತು ಶಿಕ್ಷಕರನ್ನು ಅಭಿನಂದಿಸುವ ಉದ್ದೇಶದಿಂದ ಭೋಜನ ಕೂಟವನ್ನು ಏರ್ಪಡಿಸಲಾಗಿದೆ ” ಎಂದು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಕೆ. ಸೀತಾರಾಮ ರೈ ಸವಣೂರು ಹೇಳಿದರು.


ಅವರು ಮೇ. 23ರಂದು ಪುತ್ತೂರಿನ ಪ್ರಶಾಂತ್ ಮಹಲ್ ನಲ್ಲಿ ನಡೆದ ಶಿಕ್ಷಕರಿಗೆ ಅಭಿನಂದನೆ ಕಾರ್ಯಕ್ರಮದ ಭೋಜನ ಕೂಟದಲ್ಲಿ ಅಭಿನಂದನಾ ಮಾತುಗಳನ್ನಾಡಿದರು.
ಇದೇ ಸಂದರ್ಭ ಸಹಕಾರಿ ರತ್ನ, ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಸ್ಥಾಪಕ, ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರೂ ಆಗಿರುವ ಕೆ.ಸೀತಾರಾಮ ರೈಯವರ 49 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.

ಅಂದು ಬೆಳಿಗ್ಗೆ
ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಸರಸ್ವತಿ ಪೂಜೆ, ಗಣಹೋಮ ನಡೆದು ಮಧ್ಯಾಹ್ನ ಪುತ್ತೂರಿನ ಪ್ರಶಾಂತ್ ಮಹಲ್ ನಲ್ಲಿ ಭೋಜನಕೂಟ ನಡೆಯಿತು. ಸೀತಾರಾಮ ರೈಯವರ ಧರ್ಮಪತ್ನಿ ಶ್ರೀಮತಿ ಕಸ್ತೂರಿಕಲಾ ರೈ ವೇದಿಕೆಯಲ್ಲಿದ್ದು ಪರಸ್ಪರ ಹಾರ ಬದಲಾಯಿಸಿ ಕೇಕ್ ಕತ್ತರಿಸಿ ಸಂಭ್ರಮಿಸಿದರು. ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ, ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷ ಸುಂದರ ರೈ, ವಿದ್ಯಾರಶ್ಮಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜಲಕ್ಷ್ಮಿ, ವಿದ್ಯಾರಶ್ಮಿ ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶಶಿಕಲಾ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ, ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘ ಮತ್ತು ಪ್ರಶಾಂತ್ ಮಹಲ್ ವತಿಯಿಂದ ಸೀತಾರಾಮ ರೈ ದಂಪತಿಗಳನ್ನು ಹೂಗುಚ್ಚ ನೀಡಿ ಗೌರವಿಸಲಾಯಿತು. ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಪ್ರಧಾನ ಕಚೇರಿ ವ್ಯವಸ್ಥಾಪಕ ಸುನಾದ್ ರಾಜ್ ಶೆಟ್ಟಿ ವಂದಿಸಿದರು. ಬಳಿಕ ಸಹಭೋಜನ ನಡೆಯಿತು.

2026 ನೇ ವರ್ಷ ನಮಗೆ ಸಂಭ್ರಮದ ವರ್ಷ. ವಿದ್ಯಾರಶ್ಮಿ ವಿದ್ಯಾಸಂಸ್ಥೆ ಸ್ಥಾಪನೆಯಾಗಿ ಮೇ.1ಕ್ಕೆ 25 ವರ್ಷ, ಆದರ್ಶ ಸೊಸೈಟಿ ಮಾ.22ಕ್ಕೆ 25ನೇ ವರ್ಷಕ್ಕೆ ಪಾದಾರ್ಪಣೆ ಮತ್ತು ನನ್ನ ವಿವಾಹವಾಗಿ ಮೇ. 23ಕ್ಕೆ 50 ವರ್ಷ ಆಗುತ್ತದೆ. ಈ ಸಂಭ್ರಮವನ್ನು ಮೂರೂ ಸಂಸ್ಥೆಗಳು ಜೊತೆಯಾಗಿ ಆಚರಿಸಬೇಕು. ಮುಂದಿನ ತಿಂಗಳಲ್ಲಿ ಸಭೆ ಕರೆದು ವಿವಿಧ ಸಮಿತಿಗಳನ್ನು ರಚಿಸಿ ಆ ಮೂಲಕ ಕಾರ್ಯಪ್ರವೃತ್ತರಾಗಬೇಕು. ಸಮಾಜಕ್ಕೆ ಮಾದರಿಯಾಗುವ ಕಾರ್ಯಕ್ರಮಗಳ ಅಯೋಜನೆಯಾಗಬೇಕು. ಅಶಕ್ತರಿಗೆ ನೆರವಾಗುವ ಪ್ರೊಜೆಕ್ಟ್ ತಯಾರಿಸಬೇಕು. ನಮ್ಮೆಲ್ಲಾ ಬಳಗ ಒಟ್ಟಾಗಿ ಸಂಭ್ರಮಿಸಬೇಕು – ಸೀತಾರಾಮ ರೈ ಸವಣೂರು