ಕಲ್ಲುಗುಂಡಿ : ಸಮಸ್ತ ಮುಅಲ್ಲಿಂ ಡೇ ಆಚರಣೆ

0

ಧಾರ್ಮಿಕ ಮೌಲ್ಯಗಳನ್ನು ಕಲಿಸಿಕೊಡುವ ಮುಅಲ್ಲಿಂಗಳು ಸುಸಂಸ್ಕೃತ ಸಮಾಜದ ನಿರ್ಮಾತೃಗಳು : ಅಹ್ಮದ್ ನ‌ಈಂ ಫೈಝಿ

ಸಮಸ್ತ ಮದ್ರಸಾ ಅಧ್ಯಾಪಕರ ಒಕ್ಕೂಟವಾದ ಎಸ್‌.ಕೆ.ಜೆ.ಎಂ‌.ಸಿ.ಸಿ ಇದರ ಕಾರ್ಯಯೋಜನೆಗಳ ಭಾಗವಾಗಿ ಕಲ್ಲುಗುಂಡಿ ಹಯಾತುಲ್ ಇಸ್ಲಾಂ ಮದ್ರಸಾ ಸಭಾಂಗಣದಲ್ಲಿ ಮುಅಲ್ಲಿಂ ಡೇ ವಿಶೇಷ ಕಾರ್ಯಕ್ರಮ ನಡೆಸಲಾಯಿತು. ಕಲ್ಲುಗುಂಡಿ ಜಮಾಅತ್ ಅಧ್ಯಕ್ಷರಾದ ಹಾಜಿ ಎಚ್‌.ಎ ಅಬ್ಬಾಸ್ ಸಂಟ್ಯಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಹಯಾತುಲ್ ಇಸ್ಲಾಂ ಮದ್ರಸಾ ಸದರ್ ಮುಅಲ್ಲಿಂ ಇಬ್ರಾಹಿಂ ಫೈಝಿ ಮಾಡನ್ನೂರ್ ಉದ್ಘಾಟಿಸಿದರು .

ಸ್ಥಳೀಯ ಖತೀಬ್ ಅಹ್ಮದ್ ನ‌ಈಂ ಫೈಝಿ ಮುಖ್ಯ ಭಾಷಣ ನಡೆಸಿ , ಮುಅಲ್ಲಿಂ ಡೇ ಎಂಬುದು ಮದ್ರಸಾಗಳಲ್ಲಿ ನಿಸ್ವಾರ್ಥ ಭಾವದಿಂದ ಧಾರ್ಮಿಕ ಶಿಕ್ಷಣವನ್ನು ಬೋಧಿಸುತ್ತಿರುವ ಅಧ್ಯಾಪಕರನ್ನು ವಿಶೇಷವಾಗಿ ಗುರುತಿಸುವ ಒಂದು ದಿನವಾಗಿದೆ . ಈ ಮುಅಲ್ಲಿಮರು ಎಳೆಯ ಮಕ್ಕಳ ಮನಸ್ಸಿಗೆ ಧಾರ್ಮಿಕ ನೈತಿಕ ಮೌಲ್ಯಗಳನ್ನು ತುಂಬುವುದರ ಮೂಲಕ ಸುಸಂಸ್ಕೃತ ಸಮಾಜ ಕಟ್ಟಲು ಕಾರಣರಾಗುತ್ತಿದ್ದಾರೆ . ಅವರ ನಿಸ್ವಾರ್ಥ ಸೇವೆಯನ್ನು ಅರ್ಹ ಗೌರವದಿಂದ ಕಾಣುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು . ಮದ್ರಸಾ ಅಧ್ಯಾಪಕರಾದ ಇಬ್ರಾಹಿಂ ವಹಬಿ ಪೈಂಬಚ್ಚಾಲ್ , ಸಾಜಿದ್ ಅಝ್‌ಹರಿ ಪೇರಡ್ಕ ಅಬ್ದುಲ್ ಹಮೀದ್ ಮುಸ್ಲಿಯಾರ್ ಕಲ್ಲುಗುಂಡಿ ಹಾಗೂ ಪೋಷಕರ ಪರವಾಗಿ ಎಚ್‌.ಎ ಅಶ್ರಫ್ ಬಾಲೆಂಬಿ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಮದ್ರಸಾ ವಿದ್ಯಾರ್ಥಿ ಘಟಕವಾದ ಎಸ್‌.ಕೆ.ಎಸ್‌.ಬಿ.ವಿ ವತಿಯಿಂದ ಶಿಕ್ಷಕರಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು . ವಿದ್ಯಾರ್ಥಿಗಳ ಪರವಾಗಿ ಎಸ್‌.ಕೆ.ಎಸ್.ಬಿ.ವಿ ಅಧ್ಯಕ್ಷರಾದ ನಬ್‌ಹಾನ್ ಕೃತಜ್ಞತಾ ನುಡಿ ಸಲ್ಲಿಸಿದರು. ವಿದ್ಯಾರ್ಥಿ ಅಯಾನ್ ಕುರ್‌ಆನ್ ಪಠಿಸಿ ಮದ್ರಸಾ ಲೀಡರ್ ಅಜ್ಮಲ್ ಸಿನಾನ್ ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದ ಮೊದಲು ಖಬರ್ ಝಿಯಾರತ್ ನಡೆಯಿತು.ಜಮಾಅತ್ ಕಾರ್ಯದರ್ಶಿ ರಝಾಕ್ ಸೂಪರ್, ಸಿರಾಜುಲ್ ಇಸ್ಲಾಂ ಅಸೋಸಿಯೇಷನ್ ಅಧ್ಯಕ್ಷರಾದ ಎ‌.ಕೆ ಇಬ್ರಾಹಿಂ ಹಾಗೂ ಜಮಾಅತ್ ಸಮಿತಿ ಪದಾಧಿಕಾರಿಗಳು , ಪೋಷಕರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು .