ವಿದ್ಯಾರ್ಥಿನಿಯೊಂದಿಗೆ ಬಸ್‌ನಲ್ಲಿ ಅನುಚಿತ ವರ್ತನೆ

0

ಯುವಕನಿಗೆ ಥಳಿತ, ಆಸ್ಪತ್ರೆಗೆ ದಾಖಲು

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳೊಡನೆ ಅನುಚಿತವಾಗಿ ವರ್ತಿಸಿದ ಯುವಕನೊಬ್ಬನಿಗೆ ಹಿಂದೂ ಸಂಘಟನೆಯ ಯುವಕರು ಧರ್ಮದೇಟು ನೀಡಿದ ಘಟನೆ ವರದಿಯಾಗಿದೆ.

ಬೆಂಗಳೂರಿನಿಂದ ಸುಬ್ರಹ್ಮಣ್ಯ ಮಾರ್ಗವಾಗಿ ಸುಳ್ಯಕ್ಕೆ ಬರುತ್ತಿದ್ದ ಸರಕಾರಿ ಬಸ್‌ಗೆ ಬಿಸಿಲೆ ಘಾಟ್ ಬಳಿ ಸುಳ್ಯದ ಕಾಲೇಜೊಂದರ ವಿದ್ಯಾರ್ಥಿನಿ ಹತ್ತಿದ್ದರು. ಯುವಕನೊಬ್ಬ ಕುಳಿತಿದ್ದ ಸೀಟಿನ ಪಕ್ಕದ ಸೀಟು ಖಾಲಿ ಇದ್ದುದರಿಂದ ಆಕೆ ಅದರಲ್ಲಿ ಕುಳಿತರೆನ್ನಲಾಗಿದೆ. ಸ್ವಲ್ಪ ದೂರ ಬರುವಾಗ ಪಕ್ಕದಲ್ಲಿದ್ದ ಯುವಕ ಆಕೆಯೊಡನೆ ಅನುಚಿತವಾಗಿ ವರ್ತಿಸತೊಡಗಿದನೆನ್ನಲಾಗಿದೆ. ಅದನ್ನು ಆಕೆ ವಿರೋಧಿಸಿದಳು. ಆ ಸಂದರ್ಭ ಬಸ್‌ನಲ್ಲಿದ್ದ ಇತರರು ಯುವಕನನ್ನು ಆಕ್ಷೇಪಿಸಿ ತರಾಟೆಗೆತ್ತಿಕೊಂಡರೆಂದು ತಿಳಿದು ಬಂದಿದ್ದು, ಬಳಿಕ ಬಸ್ ಸುಬ್ರಹ್ಮಣ್ಯದ ಕಡೆಗೆ ಬಂದಾಗ ಆತ ಸುಬ್ರಹ್ಮಣ್ಯದಲ್ಲಿ ಬಸ್‌ನಿಂದ ಇಳಿದ. ವಿದ್ಯಾರ್ಥಿನಿ ಬೆಂಗಳೂರು ಬಸ್‌ನಲ್ಲೇ ಸುಳ್ಯಕ್ಕೆ ಬಂದಳು.


ಸುಬ್ರಹ್ಮಣ್ಯದಲ್ಲಿ ಬಸ್‌ನಿಂದ ಇಳಿದ ಆ ಯುವಕ ಅನ್ಯಮತೀಯ ಯುವಕ ಎಂಬುದು ಸಹ ಪ್ರಯಾಣಿಕರಿಗೆ ಗೊತ್ತಾಗಿತ್ತೆನ್ನಲಾಗಿದೆ. ಆತ ಸುಬ್ರಹ್ಮಣ್ಯದಿಂದ ಬೇರೊಂದು ಬಸ್ಸಲ್ಲಿ ಹತ್ತಿ ಸುಳ್ಯದ ಕಡೆಗೆ ಬಂದ. ಆ ವೇಳೆಗೆ ವಿಷಯ ತಿಳಿದ ಹಿಂದೂ ಸಂಘಟನೆಯ ಯುವಕರು ಕಾರಲ್ಲಿ ಆ ಬಸ್ಸನ್ನು ಹಿಂಬಾಲಿಸಿಕೊಂಡು ಬಂದರು. ಆ ಯುವಕ ಕೇರಳದ ಪಲ್ಲಂಗೋಡಿಗೆ ತೆರಳುವವನಾದ ಕಾರಣ ಪೈಚಾರಿನಲ್ಲಿ ಬಸ್‌ನಿಂದ ಇಳಿದನೆನ್ನಲಾಗಿದೆ. ಹಿಂಬಾಲಿಕೊಂಡು ಬಂದಿದ್ದ ಹಿಂದೂ ಸಂಘಟನೆಯ ಯುವಕರು ಆತ ಪೈಚಾರಲ್ಲಿ ಬಸ್‌ನಿಂದ ಇಳಿದ ಕೂಡಲೇ ಆತನನ್ನು ಹಿಡಿದು ಕರಲ್ಲಿ ಕೂರಿಸಿಕೊಂಡು ಸುಳ್ಯ ಬಸ್‌ನಿಲ್ದಾಣಕ್ಕೆ ಕರೆದೊಯ್ದರು.

ಆ ವೇಳೆಗೆ ಬಸ್ ನಿಲ್ದಾಣದಲ್ಲಿ ತೊಂದರೆಗೊಳಗಾದ ಆ ವಿದ್ಯಾರ್ಥಿನಿ ಮತ್ತು ಆಕೆಯ ಕಾಲೇಜು ಸಹಪಾಠಿಗಳು ಕಾದು ನಿಂತಿದ್ದರೆನ್ನಲಾಗಿದೆ. ಬಸ್‌ಸ್ಟ್ಯಾಂಡ್‌ಗೆ ಆತನನ್ನು ಕರೆತಂದ ಕೂಡಲೇ ಎಲ್ಲರೂ ಸೇರಿ ಆತನಿಗೆ ಬಾರಿಸಿದರೆಂದೂ, ಆ ವೇಳೆಗೆ ಅಲ್ಲಿಗೆ ಬಂದ ಪೊಲೀಸರು ಗುಂಪಿನಿಂದ ಯುವಕನನ್ನು ಬಿಡಿಸಿ ಆಸ್ಪತ್ರೆಗೆ ಕಳುಹಿಸಿದರೆಂದು ತಿಳಿದು ಬಂದಿದೆ. ಯುವಕ ಈಗ ಆಸ್ಪತ್ರೆಯಲ್ಲಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.