ಮನೆ ನವೀಕರಣ ಮಾಡಿದ ಕೆವಿಜಿ ವಿದ್ಯಾ ಸಂಸ್ಥೆಯ ಯುವಕರು
ಸುಳ್ಯ ಕೆವಿಜಿ ನರ್ಸಿಂಗ್ ಕಾಲೇಜಿನಲ್ಲಿ ಕಳೆದ 16 ವರ್ಷಗಳಿಂದ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ತಿಮ್ಮಪ್ಪ ನಾಯ್ಕ್ ಅವರ ಮನೆ ಶಿಥಿಲಾವಸ್ಥೆಯಲ್ಲಿದ್ದ ಹಿನ್ನೆಲೆಯಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಅವರ ನೇತೃತ್ವದಲ್ಲಿ ನವೀಕರಣಗೊಳಿಸಿ ಅದನ್ನು ಹಸ್ತಾಂತರಿಸಲಾಯಿತು.









ತಿಮ್ಮಪ್ಪ ನಾಯ್ಕ್ ಅವರು ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳೊಂದಿಗೆ ಸುಳ್ಯ ಸಮೀಪದ ಅರಂಬೂರು ಬಳಿಯ ಪರಿವಾರಕಾನದಲ್ಲಿ ವಾಸವಿದ್ದಾರೆ. ವರ್ಷದ ಹಿಂದೆ ಅವರು ಕಾಯಿಲೆಗೊಳಗಾಗಿದ್ದರು. ಇದರಿಂದಾಗಿ ಸಾಕಷ್ಟು ಆರ್ಥಿಕ ಹೊಡೆ ತಿಮ್ಮಪ್ಪ ಅವರ ಕುಟುಂಬ ಅನುಭವಿಸಿತ್ತು. ಅವರು ವಾಸಿಸುತ್ತಿದ್ದ ಮನೆ ಕೂಡಾ ತೀರಾ ಶಿಥಿಲಾವಸ್ಥೆಯಲ್ಲಿತ್ತು. ಮಳೆಗಾಲದಲ್ಲಿ ಅಲ್ಲಲ್ಲಿ ಸೋರುತ್ತಿದ್ದು ಮನೆ ಕುಸಿಯುವ ಭೀತಿ ಎದುರಾಗಿತ್ತು. ಈ ವಿಚಾರವನ್ನು ಕೆವಿಜಿ ವಿದ್ಯಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಕೆಲವು ಯುವಕರು ಅಕ್ಷಯ್ ಕೆ.ಸಿ ಅವರ ಗಮನಕ್ಕೆ ತಂದರು.

ತಕ್ಷಣ ಅವರು ಈ ಮನೆಗೆ ಹೊಸ ಕಾಯಕಲ್ಪ ನೀಡುವ ನಿರ್ಧಾರ ತೆಗೆದುಕೊಂಡರು. ಇದಕ್ಕೆ ತಗಲುವ ವೆಚ್ಚವನ್ನು ಕೂಡ ಅಕ್ಷಯ್ ಕೆ.ಸಿ ಅವರು ಭರಿಸಿದರು. ಇವರ ಜೊತೆಗೆ ಹಲವಾರು ಮಂದಿ ಕೆವಿಜಿಯಲ್ಲಿ ಕೆಲಸ ಮಾಡುವ ಯುವಕರು ಕೆಲಸ ನಿರ್ವಹಿಸಿ ಸಹಕಾರ ನೀಡಿದರು.
ಮನೆಯ ಹಸ್ತಾಂತರ ಕಾರ್ಯಕ್ರಮದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಉಪಾಧ್ಯಕ್ಷೆ ಶೋಭಾ ಚಿದಾನಂದ, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ನೀಲಾಂಬಿಕೈ ನಟರಾಜನ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.










