ಚೆಂಬು ಮಿನುಂಗೂರಿನ ನಾಪತ್ತೆಯಾಗಿದ್ದ ವ್ಯಕ್ತಿ ಪಯಸ್ವಿನಿ ನದಿಯಲ್ಲಿ ಶವವಾಗಿ ಪತ್ತೆ..!

0

ಸುಳ್ಯದ ಅರಂಬೂರು ಬಳಿಯ ಪಯಸ್ವಿನಿ ನದಿಯಲ್ಲಿ ಪತ್ತೆಯಾಗಿರುವ ವ್ಯಕ್ತಿಯ ಶವವನ್ನು ಗುರುತಿಸಲಾಗಿದೆ. ಮೃತ ವ್ಯಕ್ತಿಯನ್ನು ಮಡಿಕೇರಿ ತಾಲೂಕು ಎಂ ಚೆಂಬು ಗ್ರಾಮದ ಬಾಲಕೃಷ್ಣ ಯಾನೆ ಬಡ್ಡ ಬಾಲ (೬೫ ವರ್ಷ) ಎಂದು ಗುರುತಿಸಲಾಗಿದೆ.

ಚೆಂಬು ಗ್ರಾಮದ ಮಿನುಂಗೂರು ಮನೆಯ ಬಾಲಕೃಷ್ಣ ಕಳೆದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಆಗಸ್ಟ್ ೮ರಂದು ಚೆಂಬುವಿನಲ್ಲಿರುವ ತನ್ನ ಮನೆಯಿಂದ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸುವುದಕ್ಕೆ ಅರಂತೋಡಿಗೆ ತೆರಳಿದ್ದರು. ಹಾಗೆ ಬಂದವರು ಅರಂತೋಡಿನಿಂದ ವ್ಯಾನ್ ಹತ್ತಿ ಸುಳ್ಯಕ್ಕೆ ಹೋಗಿದ್ದಾರೆ ಎನ್ನಲಾಗಿತ್ತು. ಆದರೆ ಅವರು ಮರಳಿ ವಾಪಸ್ ಮನೆಗೆ ಬಂದಿರಲಿಲ್ಲ. ಎಲ್ಲಿ ಹೋದರು ಏನು ಆದರು ಅನ್ನುವ ಬಗ್ಗೆ ಮಾಹಿತಿ ಇರಲಿಲ್ಲ. ಈ ಕುರಿತಂತೆ ಮನೆಯವರು ತೀವ್ರ ಆತಂಕಗೊಂಡು ಪೊಲೀಸರಿಗೆ ದೂರು ನೀಡಿದ್ದರು.

ಕಾಣೆಯಾಗಿದ್ದ ಬಾಲಕೃಷ್ಣರವರು ಆ. 13 ರಂದು ಅರಂಬೂರಿನ ಪಾಲಡ್ಕ ಬಳಿ ಪಯಸ್ವಿನಿ ನದಿಯಲ್ಲಿ ಶವವಾಗಿ ಪತ್ತೆಯಾಗಿದೆ. ಶವವನ್ನು ಗುರುತಿಸಲು ಮನೆಯವರು ಬಂದು ಪರಿಶೀಲಿಸಿದಾಗ ಬಾಲಕೃಷ್ಣರವರ ಶವ ಎಂದು ದೃಢಪಟ್ಟಿತು. ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.