‘ಟೀಂ ಮಿತ್ತೂರು’ ಕಾರ್ಯಕ್ಕೆ ಮೆಚ್ಚುಗೆ
ತನ್ನೂರಿನ ರಸ್ತೆ ಸರಿ ಇಲ್ಲ, ಸಂಚಾರ ಕಷ್ಟ ವಾಗುತ್ತಿದೆ ಎಂದು ಜನರು ಪ್ರತಿಭಟನೆ ನಡೆಸುವುದು, ಜನಪ್ರತಿನಿಧಿಗಳಿಗೆ ಮನವಿ ನೀಡುವುದನ್ನು ಅಲ್ಲಲ್ಲಿ ಕಾಣುತಿದ್ದೇವೆ. ಆದರೆ ಉಬರಡ್ಕ ಗ್ರಾಮದ ಮಿತ್ತೂರು ಭಾಗದ ಜನರು ಟೀಂ ಮಿತ್ತೂರು ಸಂಘಟನೆ ಕಟ್ಟಿಕೊಂಡು ತಾವು ನಡೆದಾಡುವ ಎರಡು ಕಿ.ಮೀ ರಸ್ತೆಯನ್ನು ಊರವರಿಂದ ಹಣ ಸಂಗ್ರಹಿಸಿ ಸಂಚಾರ ಯೋಗ್ಯವನ್ನಾಗಿಸಿದ್ದಾರೆ. ಊರವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಉಬರಡ್ಕದಿಂದ ಮಿತ್ತೂರಿಗೆ ಹೋಗುವ ರಸ್ತೆ ಹದಗೆಟ್ಟಿದ್ದು ಸಂಚಾರ ದುಸ್ತರವಾಗಿತ್ತು. ರಸ್ತೆ ಸರಿಪಡಿಸುವಂತೆ ಶಾಸಕರು, ಸರಕಾರದ ಪ್ರತಿನಿಧಿಗಳಿಗೆ, ಗ್ರಾ.ಪಂ. ಗಳಿಗೆ ಮನವಿ ಮಾಡಲಾಗಿತ್ತು. ಆದರೆ ರಸ್ತೆ ದುರಸ್ತಿ ಆಗದೇ ಇರುವುದರಿಂದ ಊರವರು ಕೆಲ ತಿಂಗಳ ಹಿಂದೆ ಸಭೆ ಸೇರಿದರು. ಮಿತ್ತೂರು ಭಾಗದ ಸುಮಾರು 40 ಕ್ಕೂ ಅಧಿಕ ಮನೆಯವರು ಸಭೆಯಲ್ಲಿ ಭಾಗವಹಿಸಿದರು. ರಾಜೇಶ್ ಭಟ್ ನೆಕ್ಕಿಲ, ಅಶ್ವಥ್ ನಾರ್ಕೋಡು, ಜಯರಾಮ, ವೆಂಕಟ್ರಾಮ ಯು.ಎಸ್.,ಪಿ.ಎಸ್.ಗಂಗಾಧರ್ ಮೊದಲಾದವರು ಸಭೆಯಲ್ಲಿದ್ದು ಅಭಿಪ್ರಾಯ ವ್ಯಕ್ತ ಪಡಿಸಿ, ಊರವರಿಂದ ಹಣ ಸಂಗ್ರಹಿಸಿ, ರಸ್ತೆ ದುರಸ್ತಿಗೆ ನಿರ್ಧರಿಸಿದರು. ಟೀಂ ಮಿತ್ತೂರು ಸಂಘಟನೆ ಮಾಡಿಕೊಂಡು ಮುಂದುವರಿದರು.















ನ.10ರಂದು ಮುಂಜಾನೆಯಿಂದ ಸುಮಾರು 85 ಮಂದಿ ರಸ್ತೆ ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮಿತ್ತೂರಿನ ಶ್ಯಾಂ ಸುಂದರ ಭಟ್ ರ ಜಾಗದಿಂದ ಮುರ ಮಣ್ಣನ್ನು ಜೆಸಿಬಿಯಿಂದ ತೆಗೆದು, ಈಚರ್ ವಾಹನ, ಟ್ರ್ಯಾಕ್ಟರ್ ನಲ್ಲಿ ತುಂಬಿ ರಸ್ತೆಗೆ ಹಾಕಿ ಸಮತಟ್ಟು ಮಾಡಲಾಗಿದೆ. ಮಳೆ ನೀರು ಹರಿದು ಹೋಗಲು ರಸ್ತೆಯ ಬದಿಗೆ ಚರಂಡಿ ವ್ಯವಸ್ಥೆ ಮಾಡಲಾಗಿದೆ. ರಸ್ತೆ ಬದಿಯ ಪೊದೆಗಳನ್ನು ಕಡಿಯಲಾಗಿದೆ. ಹೀಗೆ ಊರಿನ ರಸ್ತೆಯ ದುರಸ್ತಿಯನ್ನು ಊರವರೇ ಸೇರಿಕೊಂಡು ಮಾಡುವ ಮೂಲಕ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ. ಇವರ ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.

ಟೀಂ ಮಿತ್ತೂರು ಕಾರ್ಯ : ರಸ್ತೆ ಅಭಿವೃದ್ಧಿ ಆಗಬೇಕೆಂದು ಮನವಿ ಮಾಡಿದ್ದೇವೆ. ಆದರೆ ನಾವು ಯಾರನ್ನೂ ದೂರುವುದಿಲ್ಲ. ರಸ್ತೆ ದುರಸ್ತಿ ಕುರಿತು ಮಾಡುವ ಕುರಿತು ಸಭೆ ಸೇರಿ ಚರ್ಚಿಸಿದೆವು. ಎಲ್ಲರೂ ಒಪ್ಪಿಕೊಂಡರು. ಅದರಂತೆ ಊರವರೇ ಹಣ ಹಾಕಿ ರಸ್ತೆ ದುರಸ್ತಿ ಪಡಿಸಿದ್ದೇವೆ. ಮುಂದೆ ರಸ್ತೆ, ವಿದ್ಯುತ್ ಸಮಸ್ಯೆ ಗಳಾದಾಗ ಊರವರೆಲ್ಲ ಸೇರಿಕೊಂಡು ಕೆಲಸ ಮಾಡುತ್ತೇವೆ” ಎಂದು ಶ್ರಮದಾನದ ನೇತೃತ್ವದ ವಹಿಸಿದ ರಾಜೇಶ್ ಭಟ್ ನೆಕ್ಕಿಲ ಹೇಳಿದರು.
ಉತ್ತಮ ಕಾರ್ಯ : ಉಬರಡ್ಕ – ಮಿತ್ತೂರು ರಸ್ತೆ ಅಭಿವೃದ್ಧಿ ಆಗಬೇಕಾಗಿದೆ. ನಮ್ಮ ಬೇಡಿಕೆಯ ಪಟ್ಟಿಯಲ್ಲಿ ಈ ರಸ್ತೆ ಇದೆ. ಈಗ ಊರವರೇ ಸೇರಿಕೊಂಡು ದುರಸ್ತಿ ಕಾರ್ಯ ಮಾಡಿದ್ದಾರೆ. ಅವರ ಕೆಲಸವನ್ನು ನಾವು ಅಭಿನಂದಿಸುತ್ತೇವೆ. ನಾವು ಕೂಡಾ ಅವರ ಜತೆಗೆ ಇದ್ದೇವೆ ಎಂದು ಶ್ರಮದಾನ ಸ್ಥಳಕ್ಕೆ ಭೇಟಿ ನೀಡಿದ ಉಬರಡ್ಕ ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ ಸೂಂತೋಡು ಹೇಳಿದರು.











