ನಗರ ಪಂಚಾಯತ್ ನ ಶಶಿಕಲಾ ಮಯ್ಯರಿಗೆ ವಯೋನಿವೃತ್ತಿ

0

ನ.ಪಂ. ವತಿಯಿಂದ ಬೀಳ್ಕೊಡುಗೆ

ಸುಳ್ಯ ನಗರ ಪಂಚಾಯತ್ ನಲ್ಲಿ 37 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಶ್ರೀಮತಿ ಶಶಿಕಲಾ ಮಯ್ಯರವರಿಗೆ ಬೀಳ್ಕೊಡುಗೆ ನ.ಪಂ. ವತಿಯಿಂದ ನ.29 ರಂದು ನಡೆಯಿತು.

ಅಧ್ಯಕ್ಷತೆಯನ್ನು ಮುಖ್ಯಾಧಿಕಾರಿ ಬಸವರಾಜ್ ವಹಿಸಿದ್ದರು. ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ, ನ.ಪಂ. ಮಾಜಿ ಅಧ್ಯಕ್ಷರುಗಳಾದ ಎಂ.ವೆಂಕಪ್ಪ ಗೌಡ ಹಾಗೂ ವಿನಯ ಕುಮಾರ್ ಕಂದಡ್ಕ, ಪೌರಸೇವಾ ನೌಕರರ ಸಂಘದ ಅಧ್ಯಕ್ಷ ತಿಮ್ಮಪ್ಪ ಪಾಟಾಳಿ ಮುಖ್ಯ ಅತಿಥಿಗಳಾಗಿದ್ದರು. ಅವರು ಶಶಿಕಲಾರನ್ನು ಅಭಿನಂದಿಸಿ ಮಾತನಾಡಿದರು. ನ.ಪಂ.ಮಾಜಿ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಮಾಜಿ ಸದಸ್ಯರುಗಳಾದ ಡೇವಿಡ್ ಧೀರ ಕ್ರಾಸ್ತ ಮತ್ತು ಕೆ.ಎಸ್.ಉಮ್ಮರ್, ಕರ್ನಾಟಕ ಕಾರ್ಮಿಕರ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್, ವರ್ತಕರ ಸಂಘದ ಮಾಜಿ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಸಿಬ್ಬಂದಿ ಸುದೇವ ಜಯನಗರ ಮಾತನಾಡಿ ಶಶಿಕಲಾರಿಗೆ ಶುಭಹಾರೈಸಿದರು.

ನಿವೃತ್ತಿಗೊಳ್ಳುತ್ತಿರುವ ಶ್ರೀಮತಿ ಶಶಿಕಲಾ ಶಂಕರ ಮಯ್ಯರವರು ಮಾತನಾಡಿ ” ನಗರ ಪಂಚಾಯತ್ ನ ಸಂಬಳ ಪಡೆಯುವ ನಾವು ನ.ಪಂ.ಗೆ ಲೋಪ ಬಾರದಂತೆ ಸರಿಯಾದ ರೀತಿಯಲ್ಲಿ ಕೆಲಸ ಮಾಡಬೇಕು. ಮಾಡಿದ್ದೇನೆ ಎಂಬ ತೃಪ್ತಿ ಇದೆ. ನನ್ನ ಜತೆಗೆ ಕಚೇರಿಯಲ್ಲಿ ಕೆಲಸ ಮಾಡುವವರನ್ನು ನನ್ನ ಸಹೋದರ ಸಹೋದರಿಯರಂತೆ ಕಂಡಿದ್ದೇನೆ ” ಎಂದರು. ದಿಲೀಪ್ ಕೊಡಿಯಾಲಬೈಲ್ ಕಾರ್ಯಕ್ರಮ ನಿರೂಪಿಸಿದರು. ನ.ಪಂ.ನ ಎಲ್ಲ ಸಿಬ್ಬಂದಿಗಳು, ಸದಸ್ಯರುಗಳು ಶಶಿಕಲಾಮಯ್ಯರನ್ನು ಗೌರವಿಸಿ ಸತ್ಕರಿಸಿ ನಿವೃತ್ತ ಜೀವನಕ್ಕೆ ಶುಭಕೋರಿದರು.

ಅಕ್ವಾಗಾರ್ಡ್‌ ಕೊಡುಗೆ:

ನಿವೃತ್ತರಾಗುತ್ತಿರುವ ಶಶಿಕಲಾ ಮಯ್ಯರವರು ನಗರ ಪಂಚಾಯತ್‌ ಕಛೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಅನುಕೂಲವಾಗಲೆಂದು ಕುಡಿಯುವ ನೀರನ್ನು ಶುದ್ಧಿಗೊಳಿಸಿ ಕೊಡುವ ಅಕ್ವಾಗಾರ್ಡ್‌ ಯಂತ್ರವನ್ನು ಕೊಡುಗೆಯಾಗಿ ನೀಡಿದರು.