ಹೂವಪ್ಪ ಗೌಡ ಕಣ್ಕಲ್ ರಿಗೆ ಶ್ರದ್ಧಾಂಜಲಿ ಸಭೆ

0

ಜನರ ಮನಗೆದ್ದ ಗೃಹರಕ್ಷಕ ಹೂವಪ್ಪ: ಡಾ|| ಚೂಂತಾರು

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಇದರ ಬೆಳ್ಳಾರೆ ಘಟಕದ, ಗೃಹರಕ್ಷಕರಾದ ಹೂವಪ್ಪ ಗೌಡ, ಮೆ.ನಂ 722 ಇವರು ಇಲಾಖೆಯ ಸದಸ್ಯರಾಗಿ 15 ವರ್ಷಗಳಿಂದ ಸೇವೆಸಲ್ಲಿಸಿ ಅಲ್ಪಕಾಲದ ಅನಾರೋಗ್ಯದಿಂದ ಜು. 26 ರಂದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದು, ಇವರಿಗೆ ಶ್ರದ್ಧಾಂಜಲಿ ಸಭೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಜು. 27ರಂದು ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿ, ಇವರೋರ್ವ ನಿಷ್ಠಾವಂತ, ಪ್ರಾಮಾಣಿಕ ಮತ್ತು ಮಾದರಿ ಗೃಹರಕ್ಷಕರಾಗಿದ್ದರು.

ಇವರು 15 ವರ್ಷಗಳ ಕಾಲ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಕೆಲಸವನ್ನು ಮಾಡಿರುತ್ತಾರೆ. ಬಂದೋಬಸ್ತ್ ಕರ್ತವ್ಯ, ಪೊಲೀಸ್ ಇಲಾಖೆ, ಚುನಾವಣ ಕರ್ತವ್ಯ, ಅಗ್ನಿಶಾಮಕದಳ, ನೆರೆ ಕರ್ತವ್ಯ ಹೀಗೆ ಹತ್ತು ಹಲವು ಇಲಾಖೆಗಳಲ್ಲಿ ಬಹಳ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದ್ದರು. ಬಹಳಷ್ಟು ಜನರ ಪ್ರೀತಿಯನ್ನು ಸಂಪಾದಿಸಿದ್ದರು. ತನ್ನ ನಗುಮೊಗದ ನಿಷ್ಕಾಮ ಸೇವೆಯಿಂದ ಸಾವಿರಾರು ಜನರ ಮನಸ್ಸನ್ನು ಗೆದ್ದು ಜನಾನುರಾಗಿ ಗೃಹರಕ್ಷಕರಾಗಿ ಹೊರಹೊಮ್ಮಿದ್ದರು. ಸಾಮಾಜಿಕವಾಗಿ ಬದ್ಧತೆಯಿಂದ ಕೆಲಸ ಮಾಡುತ್ತಿದ್ದರು. ಅಂತಹ ಹೂವಪ್ಪ ಅವರ ಅಕಾಲಿಕ ಮರಣದಿಂದ ನಮ್ಮ ಇಲಾಖೆಗೆ ಬಹಳ ದೊಡ್ಡ ನಷ್ಟ, ಇವರ ಸಾವಿನಿಂದ ನಮ್ಮ ಇಲಾಖೆ ಬಡವಾಗಿದೆ. ಅವರ ಕೆಲಸವನ್ನು ಮೆಚ್ಚಿ 2019 ರಲ್ಲಿ ಅವರಿಗೆ ಮುಖ್ಯ ಮಂತ್ರಿ ಚಿನ್ನದ ಪದಕವನ್ನು ಸರಕಾರ ನೀಡಿ ಗೌರವಿಸಿತು. ಇವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಸಾವಿನ ನೋವನ್ನು ಭರಿಸುವ ಶಕ್ತಿಯನ್ನು ಅವರ ಹೆಂಡತಿ ಮತ್ತು ಮಕ್ಕಳಿಗೆ ಭಗವಂತ ಕರುಣಿಸಲಿ ಎಂದು ನುಡಿದರು.


ಈ ಸಂದರ್ಭದಲ್ಲಿ ಜಿಲ್ಲಾ ಉಪ ಸಮಾದೇಷ್ಟರಾದ ಶ್ರೀ ರಮೇಶ್, ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಶ್ಯಾಮಲ, ಮೀನಾಕ್ಷಿ ಗೃಹರಕ್ಷಕರಾದ ಸುನಿಲ್, ಜ್ಞಾನೇಶ್, ಧನಂಜಯ್, ಕೇಶವ ಶೆಟ್ಟಿಗಾರ್, ನಿಖಿಲ್, ದಿವಾಕರ್, ಸಂದೇಶ್, ಸುಲೋಚನ, ಜಯಲಕ್ಷ್ಮೀ ಮುಂತಾದವರು ಉಪಸ್ಥಿತರಿದ್ದರು.