ನನಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ಕಡೆಗಣಿಸಿದ್ದಕ್ಕಾಗಿ ರಾಜೀನಾಮೆ ನೀಡಿದ್ದೇನೆ : ಎನ್.ಎ.ರಾಮಚಂದ್ರ

0

ಹರೀಶ್ ಕಂಜಿಪಿಲಿ, ಸುಬೋಧ್ ಶೆಟ್ಟಿ ಕಾರಣ : ಆರೋಪ

ಅಭ್ಯರ್ಥಿಗಳ ಆಯ್ಕೆ ಮಾಡುವ ಸಂದರ್ಭದಲ್ಲಿ ಅಧ್ಯಕ್ಷತೆ ಕೊಡುವುದಾಗಿ ನನಗೆ ಭರವಸೆ ನೀಡಿ ಈಗ ಕೊಡದೆ ಕಡೆಗಣಿಸಿದ್ದರಿಂದ ಬೇಸರಗೊಂಡು ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನನಗೆ ಅಧ್ಯಕ್ಷತೆ ಕೈ ತಪ್ಪಲು ಹರೀಶ್ ಕಂಜಿಪಿಲಿ ಮತ್ತು ಸುಬೋಧ್ ಶೆಟ್ಟಿ ಕಾರಣ ಎಂದು ಎನ್.ಎ.ರಾಮಚಂದ್ರ ತಿಳಿಸಿದ್ದಾರೆ.ಅಭ್ಯರ್ಥಿಗಳ ಪಟ್ಟಿ ಮಾಡಲು ನನ್ನ ಮನೆಗೆ ಬಂದಿದ್ದರು. ಮೊದಲು ನನ್ನ ಹೆಸರು ಪಟ್ಟಿಯಲ್ಲಿ ಇರಲಿಲ್ಲ. ನನ್ನ ಹೆಸರನ್ನು ಸುಬೋಧ್ ಶೆಟ್ಟಿಯೇ ಸೇರಿಸಿದ್ದು. ನನಗೆ ಅಧ್ಯಕ್ಷತೆ ಕೊಡುವುದಿದ್ದರೆ ಮಾತ್ರ ಸ್ಪರ್ಧಿಸುವುದಾಗಿ ಆ ಸಂದರ್ಭ ಹೇಳಿದ್ದೆ. ಅದಕ್ಕವರು ಒಪ್ಪಿದ್ದರು. ಆದರೆ ಈಗ ಅಜ್ಜಾವರಕ್ಕೆ ಕೊಡಬೇಕು ಎಂಬ ನೆಲೆಯಲ್ಲಿ ವಿಕ್ರಮ್‌ಗೆ ನೀಡಿದ್ದಾರೆ. ವಿಕ್ರಮ್‌ಗೆ ನೀಡಿದ್ದಕ್ಕೆ ನನಗೆ ಬೇಸರವಲ್ಲ. ನನಗೆ ಕೊಡುವುದಾಗಿ ಹೇಳಿ ಈಗ ಕೊಡದಿರುವುದು ಬೇಸರ ತಂದಿದೆ ಎಂದು ಅವರು ಹೇಳಿದರು. ನಾನು ಇವತ್ತು ಪಕ್ಷದ ಸಭೆಯಲ್ಲಿ ಮೊದಲ ಒಂದು ವರ್ಷ ನನಗೆ ಅಧ್ಯಕ್ಷತೆ ಕೊಡಿ, ನಂತರ ಬದಲಾಯಿಸಿ ಎಂದು ಹೇಳಿದೆ. ಆದರೂ ಉದ್ದೇಶಪೂರ್ವಕವಾಗಿ ನನಗೆ ಅಧ್ಯಕ್ಷತೆ ಕೊಡದೆ ಕಡೆಗಣಿಸಿದ್ದಾರೆ. ನನ್ನ ಪರವಾಗಿ ಯಾರೂ ಮಾತನಾಡದಂತೆ ಮೊದಲೇ ಸೆಟ್ಟಿಂಗ್ ಮಾಡಿದ್ದಾರೆ. ಇವರೇ ಮೂರ್‍ನಾಲ್ಕು ಮಂದಿ ಸೇರಿ ತೀರ್ಮಾನ ಮಾಡುವುದಿದ್ದರೆ ನಾವು ಯಾಕೆ ಇರುವುದು? ಮುಂದಿನ ನಡೆಯ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ಎನ್.ಎ. ತಿಳಿಸಿದರು.