ಸೋಣಂಗೇರಿ: ಬಸ್ ತಂಗುದಾಣ ನಿರ್ಮಿಸಲು ಆಗ್ರಹ

0

40,000 ರೂ. ವೆಚ್ಚದಲ್ಲಿ ಶೀಘ್ರದಲ್ಲಿ ನೂತನ ಬಸ್ ಸ್ಟ್ಯಾಂಡ್ ನಿರ್ಮಾಣ -ಗ್ರಾ.ಪಂ. ಅಧ್ಯಕ್ಷೆ ತಿರುಮಲೇಶ್ವರಿ ಡಿ. ಭರವಸೆ

ಜಾಲ್ಸೂರು ಗ್ರಾಮದ ಸೋಣಂಗೇರಿಯಲ್ಲಿ ಬಸ್ ತಂಗುದಾಣ ನಿರ್ಮಾಣವಾಗದೆ ಪ್ರಯಾಣಿಕರು ಬಿಸಿಲಿನಿಂದ ಬಸವಳಿಯುತ್ತಿದ್ದು ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿ ಬರುತ್ತಿದೆ.

ಮೂರು ಮಾರ್ಗ ಸೇರುವ ಈ ಸೋಣಂಗೇರಿಯಲ್ಲಿ ಸಾಕಷ್ಟು ಜನರು ಬಸ್‌ಗೆ ಕಾಯುತ್ತಾರೆ. ಹೊಸ ರಸ್ತೆಯ ನಿರ್ಮಾಣವಾದ ಹಿನ್ನಲೆಯಲ್ಲಿ ಜಾಗದ ಅಗಲೀಕರಣದ ವೇಳೆ ಹಳೆ ಬಸ್ ತಂಗುದಾಣವನ್ನು ತೆಗೆಯಲಾಗಿತ್ತು. ಆದರೆ ರಸ್ತೆ ಕೆಲಸ ಪೂರ್ಣಗೊಂಡು ೮ ತಿಂಗಳು ಕಳೆದರೂ, ಬಸ್ ಸ್ಟ್ಯಾಂಡ್ ಮತ್ತೆ ನಿರ್ಮಿಸದೆ ಇರುವುದರಿಂದ ಜನರು, ಶಾಲಾ ಮಕ್ಕಳು ಬಿಸಿಲಿನಲ್ಲಿ ನಿಂತು ಕೊಂಡೆ ಬಸ್‌ಗೆ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.

ಸುಳ್ಯದಿಂದ ಬೆಳ್ಳಾರೆ, ಸುಬ್ರಹ್ಮಣ್ಯ, ಜಾಲ್ಸೂರು ಹೋಗುವ ಜನರು, ಮುಂಜಾನೆ, ಸಂಜೆ ಶಾಲೆ, ಕಾಲೇಜಿಗೆ ಹೋಗುವ ಪ್ರಯಾಣಿಕರಿಗೆ ಇದೀಗ ಅಂಗಡಿ, ಹೋಟೆಲ್‌ಗಳೇ ಆಸರೆಯಾಗಿದೆ.

ಹಾಗಾಗಿ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಆದಷ್ಟು ಶೀಘ್ರದಲ್ಲಿ ನೂತನ ಬಸ್ ತಂಗುದಾಣ ನಿರ್ಮಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ಇಲ್ಲಿ ಸುಸಜ್ಜಿತ ಬಸ್ ತಂಗುದಾಣದ ಅಗತ್ಯವಿದೆ. ವಿದ್ಯಾರ್ಥಿಗಳು, ವೃದ್ಧರು ಬಿಸಿಲಿಗೆ ರಸ್ತೆ ಬದಿಯಲ್ಲಿ ನಿಂತು ಬಸ್ ಕಾಯುವಂತಾಗಿದೆ.
ಸ್ಥಳೀಯರು

ಈ ಕುರಿತು ಸುದ್ದಿ ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಸಂಪರ್ಕಿಸಿದಾಗ
ಬಸ್ ನಿಲ್ದಾಣ ನಿರ್ಮಾಣ ಮಾಡಲು ಸ್ಥಳ ಗುರುತು ಆದ ಜಾಗ ಅರಣ್ಯ ಇಲಾಖೆಗೆ ಸಂಬಂಧಿಸಿದ ಕಾರಣ ಅಲ್ಲಿ ಮರಗಳು ಕೂಡ ಇವೆ. ಹಾಗಾಗಿ ಅವುಗಳನ್ನು ಕಡೆಯಲು ಸಾಧ್ಯವಿಲ್ಲ.
ಇತ್ತೀಚೆಗೆ ನಡೆದ ಜಾಲ್ಸೂರು ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿದೆ. ಹಾಗಾಗಿ ಸಭೆಯಲ್ಲಿ ನಿರ್ಣಯವಾದಂತೆ ಸದ್ಯದಲ್ಲಿ ಅದೇ ಜಾಗದಲ್ಲಿ ಪ್ರಯಾಣಿಕರ ಕಷ್ಟವನ್ನು ಅರಿತು ಹೊಸ ಬಸ್ ತಂಗುದಾಣವನ್ನು ಸುಮಾರು ೪೦,೦೦೦ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಿದ್ದೇವೆ ಎಂದು
ಜಾಲ್ಸೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ತಿರುಮಲೇಶ್ವರಿ ಡಿ.
ತಿಳಿಸಿದ್ದಾರೆ.