ಜು.19 ಹೈಕೋರ್ಟ್ ನ್ಯಾಯವಾದಿ ಸುಳ್ಯದ ವಿಘ್ನೇಶ್ವರ ಯು ನಿರ್ಮಾಣದ ಚೊಚ್ಚಲ ಚಲನಚಿತ್ರ ಹಿರಣ್ಯ ಬಿಡುಗಡೆ

0

ಸಿನಿಮಾ ರಂಗದಲ್ಲಿ ಭರವಸೆ ಮೂಡಿಸಿದ ನಟ ರಾಜವರ್ಧನ್‌ ಅಭಿನಯದ ಮತ್ತೊಂದು ಚಿತ್ರ ಹಿರಣ್ಯ ಜು. 19ರಂದು ಅದ್ದೂರಿಯಾಗಿ ತೆರೆ ಕಾಣಲಿದೆ. ವಿಭಿನ್ನ ಕಥಾಹಂದರ ಹೊಂದಿದ ಹಿರಣ್ಯ, ಗಜರಾಮ, ಕ್ಯಾಪ್ಚರ್ ಸಿನಿಮಾಗಳು ಒಂದರ ಹಿಂದೊಂದರಂತೆ
ಬಿಡುಗಡೆಗೆ ಸಿದ್ದಗೊಂಡಿದ್ದು, ಈ ಸಿನಿಮಾಗಳ ಪೈಕಿ ‘ಹಿರಣ್ಯ’ ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿದ ಚಿತ್ರವಾಗಿದೆ. ಪ್ರವೀಣ್ ಅವ್ಯುಕ್ತ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಹಲವು ಕಿರು ಚಿತ್ರಗಳನ್ನು ನಿರ್ದೇಶನ ಮಾಡಿದ ಅನುಭವ ಇರುವ ಪ್ರವೀಣ್ ಅವ್ಯಕ್ತ್ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಸ್ಯಾಂಡಲ್ ವುಡ್‌ಗೆ ಪರಿಚಯವಾಗುತ್ತಿದ್ದಾರೆ. ವೇದಾಸ್ ಇನ್ಫಿನಿಟಿ ಪಿಕ್ಚರ್ ಬ್ಯಾನರ್ ಅಡಿ ಮೂಲತಃ ಸುಳ್ಯದ ಉಬ್ರಾಳದವರಾಗಿದ್ದು, ಬೆಂಗಳೂರಿನಲ್ಲಿ ಯುವ ಉದ್ಯಮಿ, ಹೈಕೋರ್ಟ್ ನ್ಯಾಯವಾದಿ ಆಗಿರುವ ವಿಘ್ನೇಶ್ವರ ಯು. ಹಾಗೂ ವಿಜಯ್ ಕುಮಾರ್ ಬಿ.ವಿ.ಯವರು ಹಿರಣ್ಯ ಸಿನಿಮಾಗೆ ಬಂಡವಾಳ ಹೂಡಿ ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಹಿರಿಯನಟ ಡಿಂಗ್ರಿ ನಾಗರಾಜ್ ಅವರ ಪುತ್ರನೂ ಆದ ರಾಜವರ್ಧನ್ ನಾಯಕನಾಗಿ ನಟಿಸಿರುವ ಎರಡನೇ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ನಾಯಕ ರಾಜವರ್ಧನ್ ಜೋಡಿಯಾಗಿ ಮಾಡೆಲ್ ರಿಹಾನಾ ಕಾಣಿಸಿಕೊಂಡಿದ್ದು, ಈ ಚಿತ್ರದ ಮೂಲಕ ರಿಹಾನಾ ಚಂದನವನ ಪ್ರವೇಶಿಸಿದ್ದಾರೆ. ಈ ಹಿಂದೆ ಬಿಡುಗಡೆಯಾದ ತನ್ನ ಟೀಸರ್ ಮೂಲಕವೇ ಭರವಸೆ ಹುಟ್ಟಿಸಿರೋ ಈ ಚಿತ್ರದ ತಾಯಿಯ ಪ್ರೀತಿಯನ್ನು ಸಾರುವ ಹೃದಯ ಮೀಟುವ
ಹಾಡೊಂದು ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆದಿದೆ. ಪ್ರಮೋದ್ ಮರವಂತೆಯವರ ಸಾಹಿತ್ಯದ ಈ ಹಾಡಿಗೆ ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡಿದ್ದಾರೆ.


ರಾಜವರ್ಧನ್ ನಟನೆಯ ಹಿರಣ್ಯ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡು ಬಿಡುಗಡೆಗೆ ಸಿದ್ಧವಾಗಿದೆ.
ಸಂಪೂರ್ಣ ಆಕ್ಷನ್, ಥ್ರಿಲ್ಲರ್ ಜೊತೆಗೆ ತಾಯಿ ಸೆಂಟಿಮೆಂಟ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಬಿಗ್‌ ಬಾಸ್ ಖ್ಯಾತಿಯ ದಿವ್ಯಾ ಸುರೇಶ್‌ ವಿಶೇಷ ಪಾತ್ರವೊಂದರಲ್ಲಿ
ಕಾಣಿಸಿಕೊಂಡಿದ್ದಾರೆ. ಹುಲಿ
ಕಾರ್ತಿಕ್, ಅರವಿಂದ್‌ ರಾವ್, ದಿಲೀಪ್ ಶೆಟ್ಟಿ ಮುಂತಾದವರು
ಈ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಯೋಗೇಶ್ವರನ್
ಆರ್. ರವರ ಛಾಯಾಗ್ರಹಣವಿದೆ.
ಈ ಚಿತ್ರದ ಐದು ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಅವರ ಸಂಗೀತ ಸಂಯೋಜನೆಯಿದೆ.
ಈಗಾಗಲೇ ತನ್ನ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಕೆಲಸ
ಮುಗಿಸಿಕೊಂಡು ಜು. 19ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.