ರಾಜ್ಯದಲ್ಲಿನ ವಿವಿಗಳಲ್ಲಿ ಶೈಕ್ಷಣಿಕ ಹಾಗೂ ಮೂಲಭೂತ ಸಮಸ್ಯೆಗಳ ಪರಿಹರಾಕ್ಕೆ ಆಗ್ರಹ

0

ಎ.ಬಿ.ವಿ.ಪಿ. ಯಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ

ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಹಾಗೂ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಇತರ ಶಿಕ್ಷಣ ಸಂಸ್ಥೆಗಳಲ್ಲಿ ಖಾಯಂ ಉಪನ್ಯಾಸಕರ ಸಮಸ್ಯೆ ಹಾಗೂ ಇತರ ಮೂಲಭೂತ ಸೌಕರ್ಯದ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿ ಎಬಿವಿಪಿ ವತಿಯಿಂದ ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ಎ.ಬಿ.ವಿ. ಪಿ.‌ ನಗರಾಧ್ಯಕ್ಷ ಕುಲದೀಪ್ ಪೆಲತಡ್ಕ ಹಾಗೂ ತಾಲೂಕು ಎ.ಬಿ.ವಿ.ಪಿ. ಸಂಚಾಲಕ ನಂದನ್ ಐವರ್ನಾಡು ಪ್ರತಿಭಟನೆಯ ಉದ್ದೇಶ ವಿವರಿಸಿದರು.

ಬಳಿಕ ತಹಶೀಲ್ದಾರ್ ಅರವಿಂದರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಮನವಿ : ಕರ್ನಾಟಕ ರಾಜ್ಯದಲ್ಲಿನ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಹಾಗೂ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿನ ಸರ್ಕಾರಿ ಪ್ರಧಮ ದರ್ಜೆ ಕಾಲೇಜುಗಳಲ್ಲಿ ಸಮರ್ಪಕ ಬೋಧಕ ವರ್ಗವಿಲ್ಲದೆ ವಿದ್ಯಾರ್ಥಿಗಳ ಪಾಲಿಗೆ ಮೌಲ್ಯಯುತ ಶಿಕ್ಷಣವೆಂಬುದು ಮರಿಚಿಕೆಯಾಗಿದೆ. ರಾಜ್ಯದಲ್ಲಿನ 460ಕ್ಕೂ ಹೆಚ್ಚಿನ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ವ್ಯಾಪಕ ಕೊರತೆ ಇರುವುದು. ಇದರ ಪರಿಣಾಮ ವಿದ್ಯಾರ್ಥಿಗಳಿಗೆ ಸಮರ್ಪಕ ತರಗತಿ ನಡೆಯದಿರುವುದು ಕಳೆದ ಹಲವಾರು ವರ್ಷಗಳಿಂದ ಇರುವ ಗಂಭೀರ ಸಮಸ್ಯೆಯಾಗಿದೆ.

ಈ ಸಮಸ್ಯೆಗೆ ಪರಿಹಾರವಾಗಿ ಕಾಯಂ ಉಪನ್ಯಾಸಕರ ಬದಲು ಸರ್ಕಾರ ಪ್ರತಿ ವರ್ಷ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಿ ಸಮಾಧಾನ ಪಟ್ಟಿಕೊಳ್ಳುತ್ತಿತ್ತು. ಆದರೆ ಅತಿಥಿ ಉಪನ್ಯಾಸಕರ ನೇಮಕದಲ್ಲಿಯೂ ಕೂಡ ವಿಳಂಬ ನೀತಿ ಅನುಸರಿಸುವುದು ನಡೆದು ಬಂದಂತಹ ಪ್ರತಿತಿಯಂತೆ ಇತ್ತೀಚೆಗೆ ನೇಮಕಾತಿ ಆದೇಶ ಹೊರ ಬಿದ್ದಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿಯೂ ಕೂಡ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ತರಗತಿಗಳು ಶುರುವಾಗಿ 50 ದಿನಗಳು ಕಳೆದ ನಂತರ ನೇಮಕಾತಿ ಮಾಡಿರುವುದು ಸರ್ಕಾರ, ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಂತಿದೆ. ರಾಜ್ಯದ ವಿದ್ಯಾರ್ಥಿಗಳ ಸಮಯ ಹಾಗೂ ತರಗತಿಗಳ ನಷ್ಟಕ್ಕೆ ಹೊಣೆ ಯಾರು? ಆದ್ದರಿಂದ ಸರ್ಕಾರ ಕಾಯಂ ಉಪನ್ಯಾನಕರ ನೇಮಕಾತಿಗೆ ಆದ್ಯತೆ ನೀಡಬೇಕೆಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ.

UUCMS ತಂತ್ರಾಂಶದ ಬಳಕೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಮತ್ತು ವಿಶ್ವವಿದ್ಯಾಲಯಗಳ ನಡುವೆ ಸಮನ್ವಯದ ಜೊತೆಗೆ ತಾಂತ್ರಿಕ ಪರಿಣಿತರ ಕೊರತೆಯಿಂದಾಗಿ ತಂತ್ರಾಂಶದ ಸುಲಭ ಬಳಕೆ ಅಸಾಧ್ಯವಾಗಿದೆ ಆದ್ದರಿಂದ ಅಧಿಕಾರಿಗಳು ಸಮಜಾಯಿಷಿ ನೀಡಿ ಹೊಣೆಗಾರಿಕೆಯಿಂದ ನುಣಚಿಕೊಳ್ಳದೆ ಜವಾಬ್ದಾರಿಯುತವಾಗಿ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಬೇಕೆಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ.

ಪದವಿ ಹಾಗೂ ಸ್ನಾತಕೋತರ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡುವ ವಿಚಾರದ ಕುರಿತಾಗಿ ಸರ್ಕಾರ ಹಾಗೂ ವಿಶ್ವವಿದ್ಯಾಲಯಗಳು ಸ್ಪಷ್ಟ ನಿಲುವಿನ ತೆಗೆದುಕೊಳ್ಳಬೇಕೆಂದು ಹಾಗೂ ವಿದ್ಯಾರ್ಥಿಗಳಿಗೆ ಉಂಟಾಗುವ ಇನ್ನಿತರ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕು. ಅದರೊಂದಿಗೆ ಖಾಯಂ ಉಪನ್ಯಾಸಕರ ನೇಮಕಾತಿಗೆ ಅತಿ ಹೆಚ್ಚಿನ ಆದ್ಯತೆ ನೀಡಿ ಸರ್ಕಾರಿ ಕಾಲೇಜುಗಳಲ್ಲಿನ ಮೌಲ್ಯಯುತ ಶಿಕ್ಷಣದ ಕೊರತೆಯನ್ನು ನೀಗಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನವನ್ನು ಮಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿನ ಸವಾರ್‌ಂಗೀಣ ಅಭಿವೃದ್ಧಿಗೆ ತನ್ನ ಬದ್ಧತೆಯನ್ನು ಖಚಿತಪಡಿಸಬೇಕು.

ಕರ್ನಾಟಕದ ಸಾಂಪ್ರದಾಯಿಕ ಪದವಿ ನೀಡುವ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರ ಕೊರತೆ ಅಷ್ಟೇ ಅಲ್ಲದೆ ಅನುದಾನ ಸಮಸ್ಯೆ ಮೂಲಭೂತ ಸೌಕರ್ಯಗಳ ಸಮಸ್ಯೆ ಪೀಠೋಪಕರಣಗಳ ಕೊರತೆ, ಪ್ರಾಯೋಗಿಕ ಉವಕರಣಗಳ ಕೊರತೆ ಹೀಗೆ ಸಾಲು ಸಾಲು ಸಮಸ್ಯೆಗಳು ಇದೆ. ಒಂದು ವೇಳೆ ಸರ್ಕಾರ ಈ ಸಮಸ್ಯೆಗಳ ಗಂಭೀರತೆಯನ್ನು ಪರಿಗಣಿಸದೆ ಹೋದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯಾದ್ಯಂತ ತೀವ್ರ ಹೋರಾಟವನ್ನು ಹಮ್ಮಿಕೊಳ್ಳುವ ಎಚ್ಚರಿಕೆಯನ್ನು ನೀಡುತ್ತದೆ ಎಂದು ಉಲ್ಲೇಖಿಸಲಾಗಿದೆ.

ಈ ಸಂದರ್ಭದಲ್ಲಿ ಎನ್ನೆಂಸಿ ಎಬಿವಿಪಿ ಅಧ್ಯಕ್ಷ ಪುನೀತ್ ಹುಲಿಮನೆ, ಉಪಾಧ್ಯಕ್ಷ ಜಶ್ವಂತ್, ಪ್ರೀತೇಶ್ ಕಣೆಮರಡ್ಕ, ಆದಿತ್ಯನ್ ಕದಿಕಡ್ಕ , ಭರತ್ ಅಡ್ಕಾರು, ಆಕಾಶ್ ಗರುಗುಂಜ, ದೇವಿಪ್ರಸಾದ್ ಚೆಂಬು, ರೊಹನ್ ಗುತ್ತಿಗಾರು, ಚರಣ್ ರಾಜ್ ದೊಡ್ಡತೋಟ, ಮಿಥುನ್ ತೊಡಿಕಾನ, ಸುದರ್ಶನ ಕಲ್ಲುಗುಂಡಿ, ಮೋನೀಶ್ ಪೆರಾಜೆ, ಶಬರೀಶ್ ಸುಳ್ಯ, ಸರ್ವೇಶ್ ಮೊದಲಾದವರಿದ್ದರು.