ಶ್ರೀ ಶಾರದಾಂಬ ದಸರಾ ಉತ್ಸವ -2024

0

ಸುಳ್ಯದ ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿಯ ವತಿಯಿಂದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆಯುತ್ತಿರುವ 53ನೇ ವರ್ಷದ ಶ್ರೀ ಶಾರದಾಂಬ ಉತ್ಸವ ಸುಳ್ಯ ದಸರಾ ಕಾರ್ಯಕ್ರಮದ ಏಳನೇ ದಿನವಾದ ಅ.15ರಂದು ರಾತ್ರಿ ಶ್ರೀ ಮಹಾಗಣಪತಿ ಹವನ ಸಹಿತ ಶ್ರೀ ಚಂಡಿಕಾ ಮಹಾಯಾಗ ಮತ್ತು ಅಷ್ಟಾವಧಾನ ಸೇವೆ ಮತ್ತು ಮಾತೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು.

ಬ್ರಹ್ಮಶ್ರೀ ವೇದಮೂರ್ತಿ ಪುರೋಹಿತ ನಾಗರಾಜ ಭಟ್ ಅವರ ನೇತೃತ್ವದಲ್ಲಿ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಸಹಕಾರದೊಂದಿಗೆ ಶ್ರೀ ಮಹಾಗಣಪತಿ ಹವನ ಸಹಿತ ಚಂಡಿಕಾ ಮಹಾಯಾಗ ಮತ್ತು ಅಷ್ಟಾವಧಾನ ಸೇವೆಯು ಜರುಗಿತು.

ಶ್ರೀ ಚಂಡಿಕಾ ಮಹಾಹವನದಲ್ಲಿ ದೇವಿ ಮಹಾತ್ಮೆಯ ಏಳುನೂರು ಶ್ಲೋಕಗಳಿಂದ ಅನ್ನಪಾಯಸ ದ್ರವ್ಯದ ಆಹುತಿ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀದೇವಿಯ ಮುಂಭಾಗದಲ್ಲಿ ಮಂಡಲಾರಾಧನೆ ಮಾಡಿ ಶ್ರೀ ಶಾರದಾಂಬ ಕಲಾವೇದಿಕೆಯಲ್ಲಿ ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ಅಂತರ್ಗತ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ಕಲ್ಪೋಕ್ತ ಪೂಜೆ ನಡೆಯಿತು. ವಿಶೇಷವಾಗಿ ಅಷ್ಟಾವಧಾನ ಸೇವೆ ನಡೆಯಿತು.
ಅಷ್ಟಾವಧಾನ ಸೇವೆಯಲ್ಲಿ ಚತುರ್ವೇದ ಪಂಚಾಂಗ ಶಾಸ್ತ್ರ ಪುರಾಣ, ಶಂಕನಾದ, ಯಕ್ಷಗಾನ, ರುದ್ರವಾದ್ಯ, ಭರತನಾಟ್ಯ ಇತ್ಯಾದಿ ಸೇವೆಗಳು ನಡೆದವು‌. ಈ ವೇಳೆ ಸೇರಿದ್ದ ಮಾತೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು.

ರಾತ್ರಿ ಶ್ರೀದೇವಿಗೆ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು.
ಈ ಸಂದರ್ಭದಲ್ಲಿ ಶ್ರೀ ಶಾರದಾಂಬ ದಸರಾ ಸಮೂಹ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ದಸರಾ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ ಅವರು ಕಾರ್ಯಕ್ರಮ ನಿರೂಪಿಸಿದರು.

ಚಂಡಿಕಾ ಮಹಾಯಾಗ , ಅಷ್ಟಾವಧಾನ ಸೇವೆ ಹಾಗೂ ಕಲ್ಪೋಕ್ತ ಪೂಜೆಯು ಸುದ್ದಿ ಚಾನೆಲ್ ನಲ್ಲಿ ನೇರಪ್ರಸಾರಗೊಂಡಿತು.