ಆಕರ್ಷಕ ಬೆಡಿ : ಸಾಂಪ್ರದಾಯಿಕ ಉಡುಗೆಯೊಂದಿಗೆ ರಥ ಎಳೆದ ಭಕ್ತರು
10 ಸಾವಿರಕ್ಕೂ ಅಧಿಕ ಭಕ್ತರಿಂದ ಅನ್ನಪ್ರಸಾದ ಸ್ವೀಕಾರ : ದಶ ದಿಕ್ಕಿನಿಂದ ಹರಿದು ಬಂದ ಭಕ್ತ ಸಾಗರ
ರಥ ಬೀದಿಯಲ್ಲಿ 650 ಕ್ಕೂ ಅಧಿಕ ಭಜಕರಿಂದ ಏಕಕಾಲದಲ್ಲಿ ಕುಣಿತ ಭಜನೆ
ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ಬ್ರಹ್ಮರಥೋತ್ಸವವು ಜ.19 ರಂದು ರಾತ್ರಿ ಭಕ್ತ ಸಮೂಹದ ಪಾಲ್ಗೊಳ್ಳುವಿಕೆಯಲ್ಲಿ ವೈಭವದಿಂದ ನಡೆಯಿತು.

ಸಂಜೆ ಕ್ಷೇತ್ರದ ತಂತ್ರಿ ನಾಗೇಶ್ ತಂತ್ರಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು. ರಾತ್ರಿ ಶ್ರೀ ದೇವರ ಬಲಿ ಹೊರಟು ಉತ್ಸವ ನಡೆದು ವಸಂತಕಟ್ಟೆ ಪೂಜೆ ನೆರವೇರಿತು.

ದೈವ- ದೇವರ
ಮುಖಾಮುಖಿ
ವ್ಯಾಘ್ರಚಾಮುಂಡಿ ದೈವ(ಪಿಲಿಭೂತ)ದ ಭಂಡಾರ ಆಗಮಿಸಿತ್ತು. ಅಲ್ಲಿಂದ ದೈವದ ಭಂಡಾರ ಸಹಿತವಾಗಿ ದೇವರ ಬಲಿ ದೇವಾಲಯದ ರಥ ಬೀದಿಯ ಬಳಿಯಲ್ಲಿನ ಅಲಂಕೃತ ಬ್ರಹ್ಮರಥದ ಬಳಿ ಆಗಮಿಸಿತ್ತು. ಈ ವೇಳೆ ದೈವ-ದೇವರ ಮುಖಾಮುಖಿ ನಡೆದ ಅಪೂರ್ವ ದೃಶ್ಯವನ್ನು ಭಕ್ತರು ಕಣ್ತುಂಬಿಸಿಕೊಂಡರು. ದೈವದ ಅಭಯದ ನುಡಿಯೊಂದಿಗೆ ಜಲದುರ್ಗಾದೇವಿ ರಥವನ್ನೇರಿ ತಂತ್ರಿಗಳ ನೇತೃತ್ವದಲ್ಲಿ ಪೂಜೆ ನಡೆಯಿತು.









ಬ್ರಹ್ಮರಥೋತ್ಸವ
ರಥಬೀದಿಯಲ್ಲಿ ವ್ಯಾಘ್ರಚಾಮುಂಡಿ ದೈವ ಅದರ ಹಿಂದೆ ಬ್ರಹ್ಮರಥ ತೆರಳಿತು. ಸುಮಾರು 250 ಮೀಟರ್ ದೂರ ಬ್ರಹ್ಮರಥ ಸಂಚರಿಸಿತ್ತು. ರಥ ಸಂಚರಿಸಿ ಮೂಲಸ್ಥಾನದ ತನಕ ಬರುವ ತನಕವು ವ್ಯಾಘ್ರಚಾಮುಂಡಿ ದೈವ ಬ್ರಹ್ಮರಥದ ಜತೆಗೆ ಹೆಜ್ಜೆ ಹಾಕಿತ್ತು. ರಥವು ರಥ ಬೀದಿಯಲ್ಲಿ ಸಂಚರಿಸಿ ಮರಳಿ ಬಂದು ದೈವ-ದೇವರು ಮುಖಾಮುಖಿಗೊಡು ರಥೋತ್ಸವ ಸಂಪನ್ನಗೊಂಡ ಬಳಿಕ ದೇವರ ಬಲಿ ಮಹಾಪೂಜೆ, ಶಯನೋತ್ಸವ, ಕವಾಟ ಬಂಧನ ನಡೆಯಿತು.
ರಥ ಎಳೆಯಲು ಸಾಂಪ್ರದಾಯಿಕ ಉಡುಗೆ
ಬ್ರಹ್ಮರಥ ಎಳೆಯುವ ಭಕ್ತಾ„ಗಳಿಗೆ ಸಾಂಪ್ರದಾಯಿಕ ಉಡುಗೆಯೊಂದಿಗೆ ಪಾಲ್ಗೊಳ್ಳಲು ಮಾತ್ರ ಅವಕಾಶ ನೀಡಲಾಗಿತ್ತು. ರಥ ಶಿಲ್ಪಿ ಹರೀಶ್ ಆಚಾರ್ಯ ಬೋಳಿಯಾರು ನೇತೃತ್ವದ ರಥ ನಿರ್ಮಾಣದ ಶಿಲ್ಪಿಗಳ ತಂಡ ಬ್ರಹ್ಮರಥ ಸಂಚಾರದ ನಿರ್ವಹಣಾ ಜವಾಬ್ದಾರಿ ವಹಿಸಿತ್ತು. ನೂರಾರು ಭಕ್ತರು ರಥ ಎಳೆದರು.
10 ಸಾವಿರಕ್ಕೂ ಮಿಕ್ಕಿ
ಭಕ್ತರಿಗೆ ಅನ್ನಪ್ರಸಾದ
22 ಗ್ರಾಮಗಳಿಗೆ ಸೇರಿದ ಮಾಗಣೆ ಕ್ಷೇತ್ರದಲ್ಲಿ ನಡೆದ ಬ್ರಹ್ಮರಥೋತ್ಸವಕ್ಕೆ ದಶ ದಿಕ್ಕಿನಿಂದ ಭಕ್ತರ ದಂಡೇ ಹರಿದು ಬಂತು. ಸರಿ ಸುಮಾರು 12 ಸಾವಿರಕ್ಕೂ ಅಧಿಕ ಮಂದಿ ಬ್ರಹ್ಮರಥೋತ್ಸವವನ್ನು ಕಣ್ತುಂಬಿಸಿಕೊಂಡರು. 10 ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು.

ಸುಡುಮದ್ದು ಪ್ರದರ್ಶನ
ಶ್ರೀ ದೇವರು ಬ್ರಹ್ಮರಥಕ್ಕೆ ಏರಿದ ಸಂದರ್ಭದಲ್ಲಿ ಪೆರುವಾಜೆ ಬೆಡಿ ಪ್ರದರ್ಶನ ನಡೆಯಿತು. ಚಿತ್ರಾಕರ್ಷಕ ದೃಶ್ಯಗಳೊಂದಿಗೆ ಬೆಡಿ ಪ್ರದರ್ಶನ ಭಕ್ತರ ಗಮನ ಸೆಳೆಯಿತು. ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಗೃಹ ರಕ್ಷಕ ದಳ ಭದ್ರತೆಯ ಜವಾಬ್ದಾರಿ ನಿರ್ವಹಿಸಿತ್ತು.
650 ಕ್ಕೂ ಅಧಿಕ
ಭಜಕರಿಂದ ಕುಣಿತ ಭಜನೆ
.ಬ್ರಹ್ಮರಥೋತ್ಸವ ಆರಂಭಗೊಳ್ಳುವ ಮೊದಲು ರಥಬೀದಿಯಲ್ಲಿ ಸುಮಾರು ಒಂದು ತಾಸು ನಡೆದ ಕುಣಿತ ಭಜನೆಯ ದೃಶ್ಯವನ್ನು ಭಕ್ತ ಸಮೂಹ ಕಣ್ತುಂಬಿಸಿಕೊಂಡಿತ್ತು.
ರಮೇಶ್ ಮೆಟ್ಟಿನಡ್ಕ ಅವರ ತಂಡದ ಭಜನೆಗೆ ರಥ ಬೀದಿಯ 50 ಕ್ಕೂ ಅಧಿಕ ವೃತ್ತಗಳಲ್ಲಿ ಒಟ್ಟು 650 ಮಂದಿ ಭಜಕರು ಹೆಜ್ಜೆ ಹಾಕಿದರು. ಕಾಸರಗೋಡು, ಪುತ್ತೂರು, ಸುಳ್ಯ, ಕಡಬ ತಾಲೂಕಿನ 31 ಕ್ಕೂ ಅಧಿಕ ಭಜನ ತಂಡಗಳು ಸೇವಾರೂಪದಲ್ಲಿ ಕುಣಿತ ಭಜನಯಲ್ಲಿ ಪಾಲ್ಗೊಗೊಂಡಿತ್ತು.
ಈ ಸಂದರ್ಭ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕಿ ಭಾಗೀರಥಿ ಮುರುಳ್ಯ, ದೇವಸ್ಥಾನದ ಆಡಳಿತಾಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿ, ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಮಾಜಿ ಅದ್ಯಕ್ಷರು, ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು









