ಅಡ್ಕಾರು : ಅಂಜನಾದ್ರಿಯಲ್ಲಿ ಕಾಲಾವಧಿ ಜಾತ್ರಾ ಮಹೋತ್ಸವ ಸಂಪನ್ನ

0

ಹನುಮ ನೇಮೋತ್ಸವ – ಗುಳಿಗರಾಜ ದೈವದ ಕೋಲ – ದೈವ -ದೇವರ ಭೇಟಿ

ಜಾಲ್ಸೂರು ಗ್ರಾಮದ ಅಡ್ಕಾರಿನ ಅಂಜನಾದ್ರಿ ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರದಲ್ಲಿ ಕಾಲಾವಧಿ ಜಾತ್ರಾಮಹೋತ್ಸವವು ಫೆ.26ರಿಂದ 28ರವರೆಗೆ ಬ್ರಹ್ಮಶ್ರೀ ಪುರೋಹಿತ ನಾಗರಾಜ ಭಟ್ ಅವರ ಮಾರ್ಗದರ್ಶನದಲ್ಲಿ ನಡೆಯಿತು.

ಫೆ.26ರಂದು ಬೆಳಿಗ್ಗೆ ಸ್ಥಳಶುದ್ಧಿ, ಶುದ್ಧಿಕಲಶ, ಗಣಪತಿ ಹವನ, ಶ್ರೀ ನಾಗಸಾನಿಧ್ಯದಲ್ಲಿ ನಾಗತಂಬಿಲ ನಡೆದ ಬಳಿಕ ಹಸಿರುವಾಣಿ ಮೆರವಣಿಗೆಯು ಸಾಗಿ ಬಂದು ಉಗ್ರಾಣ ತುಂಬಿಸಲಾಯಿತು. ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀ ಪ್ರಸನ್ನಾಂಜನೇಯ ಭಜನಾ ಮಂಡಳಿಯವರಿಂದ ಭಜನೆ, ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರು ಮಂಜೇಶ್ವರ ಅಭಿನಯಿಸುವ ತುಳು ಪೌರಾಣಿಕ ಭಕ್ತಿಪ್ರಧಾನ ಸಾಮಾಜಿಕ ನಾಟಕ ಕಲ್ಜಿಗದ ಮಾಯ್ಕಾರೆ ಪಂಜುರ್ಲಿ ನಡೆಯಿತು.

ಫೆ.27ರಂದು ಬೆಳಿಗ್ಗೆ ಶ್ರೀ ದೇವರಿಗೆ ಸೀಯಾಳ ಅಭಿಷೇಕ, ಪಂಚಾಮೃತ ಅಭಿಷೇಕ, ಪವಮಾನ ಅಭಿಷೇಕ ನಡೆದ ಬಳಿಕ ದೀಪಪ್ರತಿಷ್ಠೆಯೊಂದಿಗೆ ಆಹ್ವಾನಿತ ಭಜನಾ ತಂಡಗಳಿಂದ ಅಹ:ಪೂರ್ಣ ಭಜನಾ ಕಾರ್ಯಕ್ರಮ ನಡೆಯಿತು. ಶ್ರೀ ಗುಳಿಗರಾಜ ಸನ್ನಿಧಿಯಲ್ಲಿ ದೇವಕ್ರಿಯಾ ತಂಬಿಲ, ಮಧ್ಯಾಹ್ನ ಶ್ರೀ ಪ್ರಸನ್ನಾಂಜನೇಯ ಸ್ವಾಮಿಗೆ ಮಹಾಪೂಜೆ, ಬ್ರಹ್ಮಸಂತರ್ಪಣೆ, ಅನ್ನದಾನ ನಡೆಯಿತು.

ಅಪರಾಹ್ನ ಇಳಂತಾಜೆ ತರವಾಡು ಮನೆಯಲ್ಲಿ ವೀಳ್ಯ ನೀಡಿ ಶ್ರೀ ಹನುಮ ದೈವದ ಭಂಡಾರ ತರಲಾಯಿತು. ಸಂಜೆ ಭಜನಾ ಕಾರ್ಯಕ್ರಮದ ಮಂಗಳಂ, ಮಂಗಳವಾದ್ಯ, ವಾದನ ಸೇವೆ ನಡೆದ ಬಳಿಕ ರಾತ್ರಿ ಶ್ರೀ ಗುಳಿಗರಾಜ ದೈವದ ಭಂಡಾರ ತೆಗೆದು ಬಳಿಕ ಶ್ರೀ ಆಂಜನೇಯ ಸ್ವಾಮಿಯ ಅಂಗಣ ಪ್ರವೇಶ, ನೇಮೋತ್ಸವ, ಪ್ರಸಾದ ವಿತರಣೆ, ಶ್ರೀ ಗುಳಿಗರಾಜ ದೈವದ ಕೋಲ, ಅನ್ನಸಂತರ್ಪಣೆ ನಡೆಯಿತು.

ರಾತ್ರಿ ಶ್ರೀ ಪ್ರಸನ್ನಾಂಜನೇಯ ಸ್ವಾಮಿಗೆ ಅಲಂಕಾರ ಪೂಜೆ ನಡೆದು, ಶ್ರೀ ದೇವರ ಉತ್ಸವ ಬಲಿ ಹೊರಟು ಉತ್ಸವ, ಶ್ರೀ ಭೂತಬಲಿ , ಕಟ್ಟೆಪೂಜೆ, ದರ್ಶನಬಲಿ, ದೈವ -ದೇವರ ಭೇಟಿ, ಬಟ್ಟಲುಕಾಣಿಕೆ, ಶ್ರೀಮುಡಿ ಗಂಧ ಪ್ರಸಾದ ನಡೆಯಿತು.

ಫೆ.28ರಂದು ಬೆಳಿಗ್ಗೆ ಶ್ರೀ ದೇವರಿಗೆ ನವಕ ಕಲಶಾಭಿಷೇಕ, ಎಳನೀರು ಅಭಿಷೇಕ, ಭಜನಾ ಕಾರ್ಯಕ್ರಮ, ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ, ಸಂಪ್ರೋಕ್ಷಣೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಶಿವರಾಮ ರೈ ಕುರಿಯ, ಸೇವಾ ಸಮಿತಿ ಅಧ್ಯಕ್ಷ ವಿವೇಕ್ ರೈ ಡಿಂಬ್ರಿಗುತ್ತು ಸೇರಿದಂತೆ ಆಡಳಿತ ಸಮಿತಿಯ ಪದಾಧಿಕಾರಿಗಳು, ಸೇವಾ ಸಮಿತಿಯ ಪದಾಧಿಕಾರಿಗಳು, ಮಹಿಳಾ ಸಮಿತಿಯ ಪದಾಧಿಕಾರಿಗಳು, ಭಜನಾ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.