ಪಾಲು ಬಂಡವಾಳ ಪ್ರಮಾಣಪತ್ರ ವಿತರಣೆ

ಮಾಜಿ ಶಾಸಕ ಹಾಗೂ ಮಾಜಿ ಸಚಿವ ಎಸ್.ಅಂಗಾರರ ಅಧ್ಯಕ್ಷತೆಯ ದೀನದಯಾಳ್ ಸಹಕಾರ ಸಂಘದ ಪಾಲು ಬಂಡವಾಳ ಪ್ರಮಾಣಪತ್ರ ವಿತರಣೆ, ಸಹಕಾರ ಸಂಘದ ಅಡಿಯಲ್ಲಿ ಕೇಂದ್ರ ಸರಕಾರದ ಭಾರತ್ ವನ್ ಜನಸಂಪರ್ಕ ಕೇಂದ್ರದ ಉದ್ಘಾಟನೆ ಹಾಗೂ ಸ್ವಸಹಾಯ ಸಂಘಗಳ ಉದ್ಘಾಟನೆ ಇಂದು ಸುಳ್ಯ ಸಿ.ಎ. ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.

ಸ್ವಸಹಾಯ ಸಂಘಗಳನ್ನು ನ.ಪಂ.ಅಧ್ಯಕ್ಷೆ ಶ್ರೀಮತಿ ಶಶಿಕಲಾ ಎ. ನೀರಬಿದಿರೆ ಉದ್ಘಾಟಿಸಿ ಶುಭಹಾರೈಸಿದರು.

ಭಾರತ್ ವನ್ ಜನಸಂಪರ್ಕ ಕೇಂದ್ರವನ್ನು ಉದ್ಘಾಟಿಸಿದ ತಹಶೀಲ್ದಾರ್ ಕು.ಮಂಜುಳಾರವರು ಮಾತನಾಡಿ ” ಸಹಕಾರ ಕ್ಷೇತ್ರವೆಂದ ಕೂಡಲೇ ಮೊದಲು ನೆನಪಿಗೆ ಬರುವ ಜಿಲ್ಲೆಯೆಂದರೆ ಅದು ದ.ಕ. ಜಿಲ್ಲೆ. ಸಹಕಾರ ಪದ್ಧತಿಯಿಂದ ಕುಟುಂಬದ, ಊರಿನ ರಾಷ್ಟ್ರದ ಏಳಿಗೆಯಾಗುತ್ತದೆ. ಜನರಿಗೆ ಅಗತ್ಯವಿರುವ ನಾಗರಿಕ ಸೇವಾ ಕೇಂದ್ರದ ಉದ್ಘಾಟನೆ ಇವತ್ತು ನಡೆದಿರುವುದು ಜನರಿಗೆ ಅನುಕೂಲವಾಗುತ್ತದೆ” ಎಂದರು.
ಸುಳ್ಯ ಟಿ.ಎ.ಪಿ.ಸಿ.ಎಂ.ಎಸ್. ಕಟ್ಟಡದ ಎರಡನೇ ಮಹಡಿಯಲ್ಲಿ ಜನಸಂಪರ್ಕ ಕೇಂದ್ರ ತೆರೆಯಲಾಗಿದೆ.
ಇಡೀ ಜಿಲ್ಲೆಗೆ ಸಂಘದ ವಿಸ್ತರಣೆ : ಎಸ್.ಅಂಗಾರ















ಪ್ರಾಸ್ತಾವಿಕ ಮಾತುಗಳನ್ನಾಡಿದ ಸಹಕಾರ ಸಂಘದ ಅಧ್ಯಕ್ಷ ಎಸ್.ಅಂಗಾರರು, ” ಅಂಬೇಡ್ಕರ್ ರವರ ಗುಣಗಾನ ಮಾಡಿದರೆ ಪ್ರಯೋಜನವಾಗುವುದಿಲ್ಲ. ಬದಲಾಗಿ ಅಂಬೇಡ್ಕರ್ ರವರ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದುವರಿದರೆ ಮಾತ್ರ ಸಾಧನೆಯಾಗುತ್ತದೆ. ನಮ್ಮ ಸಹಕಾರಿ ಸಂಘ ಆರಂಭವಾಗಿ ನೂರ ಒಂಭತ್ತು ದಿನಗಳಲ್ಲೆ ಹತ್ತು ಲಕ್ಷ ರೂ. ಡೆಪಾಸಿಟ್ ಬಂದಿದೆ. ನಮ್ಮ ಸಂಘದಲ್ಲಿ ಜಾತಿಗೆ ಒತ್ತು ನೀಡುತ್ತೇವೆ ಎಂಬ ಭಾವನೆ ಕೆಲವರಲ್ಲಿದೆ.

ಜಾತಿಯ ವ್ಯಕ್ತಿಯೊಬ್ಬ ಒಳ್ಳೆಯ ಕೆಲಸ ಮಾಡಲು ಹೊರಟಾಗ ಜಾತಿಯವರೆಲ್ಲ ಬೆಂಬಲ ಮಾಡುವುದು ಸಹಜವಾಗಿದೆ. ಆಡಳಿತ ಮಂಡಳಿ ಮಾತ್ರ ಪರಿಶಿಷ್ಟ ಜಾತಿಯವರದಾಗಿರುತ್ತದೆ. ಆದರೆ ಸೊಸೈಟಿ ಎಲ್ಲ ವರ್ಗದವರಿಗೂ ಸೇವೆ ನೀಡಲಿದೆ” ಎಂದರು. “ದೀನದಯಾಳ್ ನಗದು ಪತ್ರ ಯೋಜನೆಯನ್ನು ಜಾರಿಗೆ ತರುತ್ತೇವೆ. ಎಂಟು ವರ್ಷಗಳಲ್ಲಿ ಸದಸ್ಯರು ಇರಿಸಿದ ಹಣ ಡಬ್ಬಲ್ ಆಗುವಂತಹ ಯೋಜನೆ ಇದು. ಕಮರ್ಷಿಯಲ್ ಕಟ್ಟಡ ನಿರ್ಮಿಸಿಕೊಡುತ್ತೇವೆ. ತಲಾ ಐದು ಜನ ಸದಸ್ಯರಾಗಿರುವ ಸ್ವಸಹಾಯ ಸಂಘ ರಚಿಸುತ್ತೇವೆ. ಅದರ ಮೂಲಕ ಪಡೆಯುವ ಸಾಲ ಉದ್ದೇಶಿತ ಕಾರ್ಯಕ್ಕೇ ವಿನಿಯೋಗವಾಗುವಂತೆ ನೋಡಿಕೊಳ್ಳಬೇಕು. ಬಡ್ಡಿ ಕೇವಲ ಹತ್ತು ಪರ್ಸೆಂಟ್ ಇರುವಂತಹ ಯೋಜನೆ ಇದು. ಸರಕಾರದಿಂದ ಬರುವ ಸೌಲಭ್ಯಗಳನ್ನು ಸೊಸೈಟಿಯ ಮೂಲಕ ಉಚಿತವಾಗಿ ಒದಗಿಸಿಕೊಡುತ್ತೇವೆ. ಇಡೀ ದ.ಕ.ಜಿಲ್ಲೆಗೆ ಸಂಘ ವಿಸ್ತರಣೆಯಾಗಲಿದೆ” ಎಂದು ಅಂಗಾರರು ಹೇಳಿದರು.

ನ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್ ಶುಭ ಹಾರೈಸಿದರು. ನೆಲ್ಲೂರು ಕೆಮ್ರಾಜೆ ಗ್ರಾಮದ ಚಿಗುರು ಸ್ವಸಹಾಯ ಸಂಘ, ಅಮರಮುಡ್ನೂರು ಚಿಕ್ಕಿನಡ್ಕದ ದೀಪಾ ಸ್ವಸಹಾಯ ಸಂಘ ಮತ್ತು ಅಶ್ವಿನಿ ಸ್ವಸಹಾಯ ಸಂಘದ ಸದಸ್ಯರಿಗೆ ನ.ಪಂ. ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಹೂಗುಚ್ಛ ನೀಡಿ ಶುಭಹಾರೈಸಿದರು.

ಸಂಘದ ನಿರ್ದೇಶಕರುಗಳಾದ ಶ್ರೀಮತಿ ವೇದಾವತಿ ಅಂಗಾರ, ಹರಿಶ್ಚಂದ್ರ ಹಾಸನಡ್ಕ, ಶುಭಲತಾ ಮಾತ್ರಮಜಲು, ಮಹಾಬಲ ಪಡುಬೆಟ್ಟು, ಕುಂಞ ಕಮಿತ್ತಿಲು, ಬಾಳಪ್ಪ ಕಳಂಜ, ರವಿ ಕೆಳಗಿನಬೀಡು ಉಪಸ್ಥಿತರಿದ್ದರು. ನಿರ್ದೇಶಕ ಜಗನ್ನಾಥ ಜಯನಗರ ಪ್ರಾರ್ಥಿಸಿದರು. ನಿರ್ದೇಶಕ ಸಂದೀಪ್ ಪಂಜೋಡಿ ವಂದಿಸಿದರು. ಸವಿತಾ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು.










