ಪಂಜ ಪರಿಸರದ 19 ವಿವಿಧ ಸಂಘ ಸಂಸ್ಥೆಗಳಿಂದ ಗೌರವಾರ್ಪಣೆ
ಸರಳ ಸಜ್ಜನಿಕೆಯಿಂದ ಜನಮನ್ನಣೆ ಗಳಿಸಿದ ದಕ್ಷ ಅಧಿಕಾರಿ:ಲಕ್ಷ್ಮೀಶ ಗಬ್ಲಡ್ಕ
ದಕ್ಷ ಅಧಿಕಾರಿಗಳನ್ನು ದೇವರು ಎಂದೂ ಕೈ ಬಿಡುವುದಿಲ್ಲ: ಆನಂದ ಗೌಡ ಕಂಬಳ
ಜನರ ಪ್ರೀತಿಗಳಿಸಲು ಪ್ರತಿಯೊಬ್ಬ ಅಧಿಕಾರಿಗಳ ಕನಸು.ಅದು ನನಸಾಗಿದೆ: ಸಂತೋಷ್ ಕುಮಾರ್ ರೈ

ಪಂಜ ವಲಯ ಅರಣ್ಯ ಇಲಾಖೆಯಲ್ಲಿ ಉಪವಲಯ ಅರಣ್ಯ ಅಧಿಕಾರಿಯಾಗಿ ಕರ್ತವ್ಯದಲ್ಲಿದ್ದ ಸಂತೋಷ್ ಕುಮಾರ್ ರೈ ರವರು ವಲಯ ಅರಣ್ಯ ಅಧಿಕಾರಿಗಳಾಗಿ ಭಡ್ತಿ ಗೊಂಡು ಮಂಗಳೂರು ಅರಣ್ಯ ಸಂಚಾರಿ ದಳಕ್ಕೆ ವರ್ಗಾವಣೆ ಗೊಂಡಿದ್ದು ಅವರಿಗೆ ಪಂಜ ಪರಿಸರದ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಗೌರವಾರ್ಪಣೆ ಕಾರ್ಯಕ್ರಮ ಜೂ.1 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ ಅಭಿನಂದನಾ ಭಾಷಣ ಮಾಡಿ ಸಂತೋಷ್ ಕುಮಾರ್ ರೈ ಯವರು ಸಮಾಜದ ಕಟ್ಟ ಕಡೆ ವ್ಯಕ್ತಿಗಳಿಗೂ ಒಂದೇ ರೀತಿಯಿಂದ ಸದಾ ಸಂತೋಷದಿಂದ ಸೇವೆ ನೀಡಿ ಮತ್ತು ಅನೇಕರಿಗೆ ನೆರವಾದ ಅಧಿಕಾರಿ. ಸರಳ ಸಜ್ಜನಿಕೆಯಿಂದ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದ ದಕ್ಷ ಮಾದರಿ ಅಧಿಕಾರಿಯಾಗಿ ಜನಮನ್ನಣೆ ಗಳಿಸಿದ್ದಾರೆ”. ಎಂದು ಹೇಳಿದರು.

ದೇವಳದ ಗೌರವ ಸಲಹೆಗಾರ ಆನಂದ ಗೌಡ ಕಂಬಳ ಅಭಿನಂದನಾ ಭಾಷಣ ಮಾಡಿ. “ಸಂತೋಷ್ ಕುಮಾರ್ ರೈ ಯವರು ಒಬ್ಬ ಪ್ರಾಮಾಣಿಕ ಮತ್ತು ಸಾಮಾಜಿಕ ಸೇವೆ ಸಲ್ಲಿಸಿದ ಅಧಿಕಾರಿ. ದಕ್ಷ ಅಧಿಕಾರಿಗಳನ್ನು ದೇವರು ಎಂದೂ ಕೈ ಬಿಡುವುದಿಲ್ಲ. ಆ ಕಾರಣದಿಂದ ಅವರು ವಲಯ ಅರಣ್ಯಾಧಿಕಾರಿಯಾಗಿ ಮುಂಬಡ್ತಿ ಹೊಂದಿದ್ದಾರೆ.”ಎಂದು ಹೇಳಿದರು.

ಗೌರವಾರ್ಪಣೆ ಸ್ವೀಕರಿಸಿದ ವಲಯ ಅರಣ್ಯಾಧಿಕಾರಿ ಸಂತೋಷ್ ಕುಮಾರ್ ರೈ ಮಾತನಾಡಿ “ನನ್ನನ್ನು ನನಗಿಂತ ಹೆಚ್ಚಾಗಿ ನೀವೇ ಅರ್ಥಮಾಡಿಕೊಂಡಿದ್ದೀರಿ. ಪಂಜ ,ಬಳ್ಪದ ಪ್ರತಿ ಮನೆಯವರ ಪ್ರೀತಿ ಗಳಿಸಿಕೊಂಡು ಹೋಗುತ್ತಿದ್ದೇನೆ. ಜನರ ಪ್ರೀತಿಗಳಿಸ ಬೇಕೆಂಬುದು ಪ್ರತಿಯೊಬ್ಬ ಅಧಿಕಾರಿಗಳ ಕನಸು. ಅದು ನಿಮ್ಮಿಂದಾಗಿ ನನಗೆ ನನಸಾಗಿದೆ”. ಎಂದು ಕೃತಜ್ಞತೆ ಸಲ್ಲಿಸಿದರು.
















ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್ ಸಭಾಧ್ಯಕ್ಷತೆ ವಹಿಸಿ ಮಾತನಾಡಿ “ಮುಂಬಡ್ತಿ ಹೊಂದಿ ವರ್ಗಾವಣೆ ಆಗಿ ಹೋಗುತ್ತಿರುವ ಅಧಿಕಾರಿಗೆ 19 ಸಂಘ ಸಂಸ್ಥೆಗಳು ಸೇರಿ ಮಾಡಿರುವ ಗೌರವಾರ್ಪಣೆ ಕಾರ್ಯಕ್ರಮ ಪಂಜದಲ್ಲಿ ಇದೇ ಮೊದಲು. ಇಂತಹ ಜನಸ್ನೇಹಿ ಅಧಿಕಾರಿಗಳು ಬಂದಾಗ ಮುಂದೆಯೂ ನಾವೆಲ್ಲರೂ ಒಟ್ಟಾಗಿ ಗೌರವಿಸುವ.” ಎಂದು ಹೇಳಿದರು.




ಮುಖ್ಯ ಅತಿಥಿಗಳಾಗಿ ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ, ಪಂಜ ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಗೌಡ ಕುದ್ದ, ನಿಡ್ವಾಳ ಶ್ರೀ ಮಹಾವಿಷ್ಣು ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ್ ಪಲ್ಲೋಡಿ, ಅಳ್ಪೆ ಚಿಂಗಾಣಿಗುಡ್ಡೆ ಶ್ರೀ ಉಳ್ಳಾಕುಲು ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕುಸುಮಾಧರ ಕರಿಮಜಲು, ವನಿತಾ ಸಮಾಜ ಅಧ್ಯಕ್ಷೆ ಸುಮಾ ಕುದ್ದ, ಗ್ರಾಮ ಪಂಚಾಯತ್ ಸದಸ್ಯ ಲಕ್ಷ್ಮಣ ಬೊಳ್ಳಾಜೆ, ಪಂಜ ಲಯನ್ಸ್ ಕ್ಲಬ್ ನಿಯೋಜಿತ ಅಧ್ಯಕ್ಷ ನಾಗೇಶ್ ಕಿನ್ನಿಕುಮೇರಿ, ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹಿತೇಶ್ ಪಂಜದಬೈಲು, ನಿಕಟಪೂರ್ವಾಧ್ಯ ಪವನ್ ಪಲ್ಲತ್ತಡ್ಕ,ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ವಾಚಣ್ಣ ಕೆರೆಮೂಲೆ, ಶ್ರೀ ಶಾರದಾಂಬಾ ಭಜನಾ ಮಂಡಳಿ ಅಧ್ಯಕ್ಷ ನಾಗಪ್ಪ ಗೌಡ ಪಂಜದಬೈಲು, ಪಂಜ ರಿಕ್ಷಾ ಚಾಲಕ ಸಂಘದ ಅಧ್ಯಕ್ಷ ಬಾಲಕೃಷ್ಣ ಆಚಾರ್ಯ ಸಂಪ್ಯಾಡಿ, ಪಲ್ಲೋಡಿ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಅಧ್ಯಕ್ಷೆ ನಿರ್ಮಲ ಕೆ.ಎಸ್.ಪಲ್ಲೋಡಿ, ಪಂಜ ಪರಿಸರದ ಆರಾಧನಾ ಸಮಿತಿ ಖಜಾಂಜಿ ಆನಂದ ಗೌಡ ಜಳಕದಹೊಳೆ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಇದೇ ವೇಳೆ ವೈಯಕ್ತಿಕವಾಗಿ ಗೌರವಾರ್ಪಣೆ ನಡೆಯಿತು.

ಗೌರವಾರ್ಪಣೆ ವೇಳೆ ವಲಯ ಅರಣ್ಯಾಧಿಕಾರಿ ಸಂತೋಷ್ ಕುಮಾರ್ ರೈ ರವರ ಪತ್ನಿ ವಿತಿಶ್ರೀ ರೈ, ಮಗಳು ಸಾನ್ವಿ ಎಸ್ ರೈ, ಮಗ ತನಿಶ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹೇಮಲತಾ ಜನಾರ್ದನ ಪ್ರಾರ್ಥಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಸ್ವಾಗತಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಪವಿತ್ರ ಮಲ್ಲೆಟ್ಟಿ ನಿರೂಪಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಸಂತೋಷ್ ರೈ ಪಲ್ಲತ್ತಡ್ಕ ವಂದಿಸಿದರು.










