ಇತಿಹಾಸ ಪ್ರಸಿದ್ದ ಗುಹೆ ಪ್ರವೇಶ-ಮೃತ್ತಿಕಾ ಪ್ರಸಾದ ವಿತರಣೆ

ಸುಳ್ಯ ಮತ್ತು ಕಾಸರಗೋಡು ತಾಲೂಕಿನ ಗಡಿ ಪ್ರದೇಶವಾದ ಬಂದಡ್ಕದ ಇತಿಹಾಸ ಪ್ರಸಿದ್ಧ ಶ್ರೀ ಸುಬ್ರಮಣ್ಯ ದೇವಸ್ಥಾನ ಬಂದಡ್ಕದಲ್ಲಿ ಷಷ್ಠಿ ಉತ್ಸವ ಇಂದು (ನ. 26) ನಡೆಯಿತು.

ಇಲ್ಲಿ ಷಷ್ಠಿ ದಿನದಂದು ನಡೆಯುವ ಗುಹಾ ಪ್ರವೇಶ ವಿಶೇಷವಾಗಿದ್ದು ಸುಮಾರು 75ಕ್ಕೂ ಹೆಚ್ಚು ಮಂದಿ ಭಕ್ತರು ವೃತಧಾರಿಗಳಾಗಿ ಗುಹಾ ಪ್ರವೇಶ ಮಾಡಿ ಮೃತ್ತಿಕಾ ಪ್ರಸಾದ ತಂದು ಭಕ್ತರಿಗೆ ಹಂಚಿದರು.
















ಹಿನ್ನೆಲೆ : ಬಂದಡ್ಕ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯನ್ನು ತಂದು ಪ್ರತಿಷ್ಟಾಪಿಸಿದ ಅರ್ಚಕರು ಇಲ್ಲಿಯೇ ಬಳಿ ಇದ್ದ ಗುಹೆಯೊಂದಕ್ಕೆ ಪ್ರವೇಶಿಸಿ ಅಪ್ರತ್ಯಕ್ಷರಾದರು. ಅವರು ಮಾಯವಾದ ಗುಹೆಯ ಸ್ಥಳದ ದರ್ಶನ ಪಡೆದು ಪ್ರಸಾದ ಪಡೆಯಲು ಅದೇ ಗುಹೆಗೆ ಪ್ರವೇಶಿಸಿ ಆರಂಭವಾಯಿತೆಂಬುದು ಇಲ್ಲಿಯ ಪ್ರತೀತಿ. ಅದೇ ಪ್ರಕಾರ ಈಗಲೂ ವೃತಚಾರಣೆಯಲ್ಲಿದ್ದವರು ಈಗಲೂ ಗುಹೆ ಪ್ರವೇಶಿಸಿ ಅಲ್ಲಿಂದ ಮೃತ್ತಿಕಾ ಪ್ರಸಾದವನ್ನು ತಂದು ಭಕ್ತರಿಗೆ ವಿತರಿಸುತ್ತಿರುವುದು ವಿಜೃಂಭಣೆಯಿಂದ ನಡೆದು ಕೊಂಡು ಬರುತ್ತಿದೆ.

ಕಾರ್ಯಕ್ರಮ: ಇಂದು ಮುಂಜಾನೆ 4 ಗಂಟೆಗೆ ನಡೆ ತೆರೆಯುವುದು, ನಂತರ ಮಹಾಗಣಪತಿ ಹೋಮ, ಉಷಾಪೂಜೆ, ರಾಶಿ ಪೂಜೆ, ಬೆಳಿಗ್ಗೆ 8 ರಿಂದ ತುಲಾಭಾರ ಸೇವೆ, ಬೆ. 9ರಿಂದ ಗುಹೆ ಪ್ರವೇಶ, ಬೆ. 11ರಿಂದ ನವಕಾಭಿಷೇಕ, ಬೆ. 10.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಬೆ. 11 ಗಂಟೆಗೆ ಮಹಾಪೂಜೆ, ನಂತರ ಶ್ರೀ ಭೂತಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಂಗಣ ಪ್ರಸಾದ ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಮೊಕ್ತೇಸರ ಬಿ. ಸದಾನಂದ ರೈ ಹಾಗೂ ಆಡಳಿತ ಮಂಡಳಿ ಅಧ್ಯಕ್ಷರಾದ ಶುಭಾಶ್ಚಂದ್ರ ರೈ ತೋಟ, ಪ್ರಧಾನ ಕಾರ್ಯದರ್ಶಿ ಭೋಜಪ್ಪ ಗೌಡ ಪಾಲಾರು ಮೂಲೆ, ಖಜಾಂಜಿ ನಿತ್ಯಾನಂದ ಸೇರಿದಂತೆ ಉಪಾಧ್ಯಕ್ಷರುಗಳು, ಸದಸ್ಯರು ಹಾಗೂ ನೂರಾರು ಭಕ್ತರು ಶ್ರೀ ದೇವರ ಪ್ರಾಸದ ಸ್ವೀಕರಿಸಿದರು.











