65 ವರ್ಷ ಮೇಲ್ಪಟ್ಟವರು ಇನ್ನು ಮುಂದೆ ದೇವಸ್ಥಾನಗಳಲ್ಲಿ ಕ್ಯೂ ನಿಲ್ಲಬೇಕಿಲ್ಲ!

0

ನೇರ ದರ್ಶನಕ್ಕೆ ಅವಕಾಶ: ಧಾರ್ಮಿಕ ದತ್ತಿ‌ ಇಲಾಖೆ ಆದೇಶ

ಕುಕ್ಕೆ ಸುಬ್ರಹ್ಮಣ್ಯ ಸಹಿತ ರಾಜ್ಯದ ಎ ಮತ್ತು ಬಿ ಪ್ರವರ್ಗದ ದೇಗುಲಗಳಿಗೆ ಅನ್ವಯ

ಇನ್ನು ಮುಂದೆ ರಾಜ್ಯದ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆಂದು ಹಿರಿಯ ನಾಗರಿಕರು ಸರತಿಯಲ್ಲಿ ನಿಂತು ಕಷ್ಟಪಡುವ ಅವಶ್ಯಕತೆ ಇಲ್ಲ. 65 ವರ್ಷ ಮೇಲ್ಪಟ್ಟವರಿಗೆ ನೇರವಾಗಿ ದೇವರ ದರ್ಶನ ಸೌಲಭ್ಯ ಕಲ್ಪಿಸುವಂತೆ ಧಾರ್ಮಿಕ ದತ್ತಿ ಇಲಾಖೆಯು ಆದೇಶ ಹೊರಡಿಸಿದೆ.

ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ದೇವಾಲಯಗಳಾದ ‘ಎ’ ವರ್ಗ ಹಾಗೂ ‘ಬಿ’ ವರ್ಗ ದೇವಸ್ಥಾನಗಳಲ್ಲಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ನೇರವಾಗಿ ದೇವರ ದರ್ಶನ ಸೌಲಭ್ಯ ಒದಗಿಸುವ ಬಗ್ಗೆ ಬೆಂಗಳೂರಿನ ಚಾಮರಾಜಪೇಟೆಯ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ಉಪಾಧವಂತರ ಒಕ್ಕೂಟ ಮನವಿ ಮಾಡಿತ್ತು.

65 ವರ್ಷ ಮೇಲ್ಪಟ್ಟ ಇರುವ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತುಕೊಳ್ಳುವುದಕ್ಕೆ ತುಂಬಾ ತೊಂದರೆಯಾಗುತ್ತಿರುವುದರಿಂದ ವಯಸ್ಸಿನ ಆಧಾರದ ಮೇಲೆ ಸರತಿಯ ಸಾಲಿನಲ್ಲಿ ನಿಲ್ಲದಂತೆ ನೇರವಾಗಿ ದೇವರ ದರ್ಶನಕ್ಕೆ ಅನುವು ಮಾಡಿಕೊಡಬೇಕೆಂದು ಒಕ್ಕೂಟವು ಮನವಿ ಪತ್ರದಲ್ಲಿ ಉಲ್ಲೇಖಿಸಿತ್ತು. ಸದ್ಯ ಈ ಬಗ್ಗೆ ಪರಿಶೀಲನೆ ನಡೆಸಿದ ಧಾರ್ಮಿಕ ದತ್ತಿ ಇಲಾಖೆಯು ದೇವಸ್ಥಾನಗಳಲ್ಲಿ ಹಿರಿಯರಿಗೆ ನೇರ ದರ್ಶನ ಸೌಲಭ್ಯಕ್ಕೆ ಸೂಚನೆ ನೀಡಿದೆ.

ಯಾವ ಯಾವ ದೇವಸ್ಥಾನಗಳಲ್ಲಿ ಅನ್ವಯ?

ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ‘ಎ’ ಮತ್ತು ‘ಬಿ’ ವರ್ಗದ ದೇವಾಲಯಗಳಲ್ಲಿ ಈ ಸೌಲಭ್ಯ ಸಿಗಲಿದೆ. ಸದ್ಯ ಕುಕ್ಕೆ ಸುಬ್ರಮಣ್ಯ, ಚಾಮುಂಡಿಬೆಟ್ಟ, ಸಿಗಂದೂರು, ಕೊಲ್ಲೂರು ಸೇರಿದಂತೆ ನಾಡಿನ ಎಲ್ಲಾ ಪ್ರಮುಖ ದೇವಸ್ಥಾನಗಳೂ ಕೂಡಾ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿವೆ.

ಪ್ರತ್ಯೇಕ ವ್ಯವಸ್ಥೆಗೆ ಸೌಲಭ್ಯ ನೀಡಿ

ಇತ್ತೀಚಿನ ದಿನಗಳಲ್ಲಿ ಇಲಾಖೆ ವ್ಯಾಪ್ತಿಗೆ ಒಳಗಡುವ ದೇವಾಲಯಗಳಿಗೆ ಆಗಮಿಸುತ್ತಿರುವ ಭಕ್ತಾಧಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಹಿರಿಯ ನಾಗರಿಕರಿಗೆ ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತುಕೊಳ್ಳುವುದು ಕಷ್ಟಕರವಾಗಿದೆ.ದೇವಾಲಯದಲ್ಲಿ ಸ್ಥಳಾವಕಾಶ ಇದ್ದಲ್ಲಿ ಹಿರಿಯ ನಾಗರೀಕರಿಗೆಂದು ಪ್ರತ್ಯೇಕ ಸ್ಥಳ ಕಾಯ್ದಿರಿಸಲು ಧಾರ್ಮಿಕ ದತ್ತಿ ಇಲಾಖೆ ಸೂಚಿಸಿದೆ.

ಹಿರಿಯ ನಾಗರೀಕರ ಸಹಾಯ ಕೇಂದ್ರ ಸ್ಥಾಪಿಸಿ

ದೇವಾಲಯಗಳಲ್ಲಿ ಹಿರಿಯ ನಾಗರಿಕರ ಸಹಾಯ ಕೇಂದ್ರವನ್ನು ಸ್ಥಾಪಿಸಬೇಕು. ಹಿರಿಯ ನಾಗರೀಕರಿಗೆ ಸಹಕರಿಸಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವುದು, ಸದರಿ ಸಹಾಯ ಕೇಂದ್ರಕ್ಕೆ ಜವಾಬ್ದಾರಿಯುತ ಸಿಬ್ಬಂದಿಗಳನ್ನು ನಿಯೋಜಿಸಿ ಹಿರಿಯ ನಾಗರೀಕರಿಗೆ ಅರಿತ ದರ್ಶನ ಏರ್ಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಇಲಾಖೆ ಆದೇಶದಲ್ಲಿ ತಿಳಿಸಿದೆ.

ವಯಸ್ಸಿನ ದಾಖಲೆ ನೀಡಬೇಕು

ಹಿರಿಯ ನಾಗರಿಕರು ಅವರ ವಯಸ್ಸಿನ ದಾಖಲೆ/ ಆಧಾರ ಕಾರ್ಡ್ ತೋರಿಸಿದಲ್ಲಿ ಅವರಿಗೆ ಶೀಘ್ರ ದರ್ಶನಕ್ಕೆ ಅನುಕೂಲವಾಗುವಂತ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎಂದು ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.