ಗೂಡ್ಸ್ ಟೆಂಪೊ ಚಾಲಕರನ್ನು ಯಾಮಾರಿಸಿ ಹಣ ವಸೂಲಿ ಮಾಡಿ ಪರಾರಿಯಾದ ಖದೀಮ

0

ಕನಕಪುರಕ್ಕೆ ಬಾಡಿಗೆಗೆ ಗೊತ್ತುಪಡಿಸಿ ನಂಬಿಸಿ ವಂಚಿಸಿದ ಅಪರಿಚಿತ ವ್ಯಕ್ತಿ
ವಂಚಕನ ಮಾತು ನಂಬಿ ಮೋಸ ಹೋದ ಸುಳ್ಯದ ಗೂಡ್ಸ್ ಟೆಂಪೋ ಚಾಲಕ


ಸುಳ್ಯದ ಗಾಂಧಿನಗರ ಪಾರ್ಕಿಂಗ್ ನಲ್ಲಿರುವ ಗೂಡ್ಸ್ ಟೆಂಪೊ ಚಾಲಕರೊಬ್ಬರಲ್ಲಿ ಅಪರಿಚಿತ ವ್ಯಕ್ತಿ ಯೊಬ್ಬನು ಬೆಂಗಳೂರಿನ ಕನಕಪುರಕ್ಕೆ ಬಾಡಿಗೆ ಇದೆ ಮೂರು ಗೂಡ್ಸ್ ಗಾಡಿ ಬೇಕು ಎಂದು ನಂಬಿಸಿ ಡೀಸೆಲ್ ಹಾಕಿಸಿ ಚಾಲಕರಿಂದಲೇ ಹಣ ಪಡೆದು ಯಾಮಾರಿಸಿ ಪರಾರಿಯಾದ ಘಟನೆ ಜು. 15 ರಂದು ಸುಳ್ಯದಲ್ಲಿ ವರದಿಯಾಗಿದೆ.


ಸುಳ್ಯದ ಗಾಂಧಿನಗರ ಪಾರ್ಕಿಂಗ್ ನಲ್ಲಿ ಇರುವ ಗೂಡ್ಸ್ ಟೆಂಪೊ ಚಾಲಕರೊಬ್ಬರಲ್ಲಿ ಅಪರಿಚಿತ ವ್ಯಕ್ತಿ ಯೊಬ್ಬರು ಬಂದು ಬೆಂಗಳೂರಿನ ಕನಕಪುರಕ್ಕೆ ಬಾಡಿಗೆ ಇದೆಯೆಂದು ಮೂರು ಗೂಡ್ಸ್ ವಾಹನ ಬೇಕು ಎಂದು ಹೇಳಿ ಗೊತ್ತುಪಡಿಸಿರುತ್ತಾನೆ.


ನಾನು ಮೆಸ್ಕಾಂ ಇಲಾಖೆಗೆ ಸಂಬಂಧಿಸಿದ ವಿದ್ಯುತ್ ಉಪಕರಣಗಳನ್ನು ಸಾಗಿಸಬೇಕಾಗಿದೆ. ಮಡಿಕೇರಿಯಿಂದ ಕನಕಪುರ ಹೋಗಿ ಪುನ: ಹಿಂತಿರುಗಿ ಬರುವಾಗ ವಿದ್ಯುತ್ ಟ್ರಾನ್ಸ್ ಫರ್ ಪೆಟ್ಟಿಗೆ ತರಲಿದೆ. ಅದಕ್ಕೆ (407) ಗೂಡ್ಸ್ ಟೆಂಪೊ ಬೇಕು ಎಂದು ಹೇಳಿ ನಂಬಿಸಿದ ಅಪರಿಚಿತ ವ್ಯಕ್ತಿ ಯು ನನ್ನಲ್ಲಿ ಸೆಂಟ್ರಲ್ ಗವರ್ನಮೆಂಟ್ ಕಾರ್ಡ್ ಇದೆ ಇದರಲ್ಲಿ ಸಬ್ಸಿಡಿ ಯಲ್ಲಿ ಡೀಸೆಲ್ ಸಿಗುತ್ತದೆ ನೀವು 1 ಲೀಟರ್ ಡೀಸಲ್ ಗೆ ರೂ. 55 /- ರಂತೆ ಪಾವತಿಸಿದರಾಯಿತು. ಉಳಿದ ಬಾಡಿಗೆ ಹಣವನ್ನು ನಿಮಗೆ ಅಲ್ಲಿಗೆ ತಲುಪಿದ ಮೇಲೆ ಕೊಡುತ್ತೇನೆ ಎಂದು ಹೇಳಿ ನಂಬಿಸಿದ್ದಾನೆ.
ಅಲ್ಲದೆ ಮೂರು ವಾಹನಗಳಿಗೆ ಡೀಸಲ್ ತುಂಬಿಸುವಂತೆ ಹೇಳಿ ಬಸ್ ನಿಲ್ದಾಣದ ಎದುರಿನ ಪೆಟ್ರೋಲ್ ಬಂಕಿನಲ್ಲಿ ಡೀಸಲ್ ತುಂಬಲು ಆರ್ಡರ್ ಮಾಡುತ್ತಾನೆ.


ಚಾಲಕರ ಕೈಯಿಂದ ರೂ.55 ರಂತೆ ಮುಂಗಡ ರೂ. 76೦೦ ಸಾವಿರ ಹಣವನ್ನು ಪಡೆದುಕೊಂಡಿರುತ್ತಾನೆ. ಡೀಸೆಲ್ ಹಾಕಿದ ಹಣವನ್ನು ಕಾರ್ಡಿನ ಮುಖಾಂತರ ಪಾವತಿ ಮಾಡುತ್ತೇನೆಂದು ಹೇಳಿ ನನ್ನ ಬಾಸ್ ಮೆಸ್ಕಾಂ ಇಲಾಖೆಯ ಬಳಿ ಇದ್ದಾರೆ. ಅವರನ್ನು ಕರೆದುಕೊಂಡು ಬಂದು ಪೇ ಮಾಡ್ತೇನೆ ಎಂದು ಹೇಳಿ ಅಟೋ ರಿಕ್ಷಾದಲ್ಲಿ ತೆರಳುತ್ತಾನೆ. ಮೂರು ವ್ಯಾನ್ ಗಳಿಗೆ ಡೀಸಲ್ ತುಂಬಿಸಿ ಎಂದು ಹೇಳಿ ಅಟೋ ಹತ್ತಿ ಹೋದ ವ್ಯಕ್ತಿಯು ಗಂಟೆ ಒಂದು ಕಳೆದರು ಬರಲಿಲ್ಲ.


ಸುಮಾರು 12600 ಸಾವಿರ ಮೌಲ್ಯದ ಡೀಸಲ್ ಮೂರು ವಾಹನಗಳಿಗೆ ತುಂಬಿಸಿ ಗಂಟೆ ಕಳೆದರೂ ಕಾರ್ಡ್ ತರುವುದಾಗಿ ಹೋದ ವ್ಯಕ್ತಿ ಬಾರದೇ ಇದ್ದಾಗ ಸಂಶಯ ಗೊಂಡ ಚಾಲಕರು ಪುನ: ಹಿಂತಿರುಗಿ ಬಂದು ಅಪರಿಚಿತ ವ್ಯಕ್ತಿಯನ್ನು ಹುಡುಕಾಡುತ್ತಾರೆ. ಎಲ್ಲಾ ಕಡೆಗಳಲ್ಲಿ ಹುಡುಕಿದರೂ ಸಿಗದೇ ಇದ್ದಾಗ ಸಂಶಯಗೊಂಡು ಆತ ಹೋದ ಅಟೋ ಚಾಲಕರಲ್ಲಿ ವಿಚಾರಿಸಿದಾಗ ಪರಾರಿಯಾಗಿರುವ ಬಗ್ಗೆ ಖಾತ್ರಿಯಾಯಿತು. ಪೆಟ್ರೋಲ್ ಬಂಕ್‌ನ ಸಿಸಿ ಕ್ಯಾಮರಾದಲ್ಲಿ ಪರಿಶೀಲಿಸಿದಾಗ ಅಪರಿಚಿತ ವ್ಯಕ್ತಿಯು ಕಾಣುವುದಿಲ್ಲ.


ಮೂರು ಗೂಡ್ಸ್ ವಾಹನ


ಚಾಲಕರಿಂದ ಯಾಮಾರಿಸಿದ 7600 ಸಾವಿರ ಹಾಗೂ ಡೀಸಲ್ ಹಣವನ್ನು ನೀಡದೆ ಪರಾರಿಯಾದ ವ್ಯಕ್ತಿಯ ಕುರಿತು ಚಾಲಕರು ತಕ್ಷಣ ಸುಳ್ಯ ಪೋಲಿಸ್ ಠಾಣೆಗೆ ದೂರು ನೀಡಿದರು. ಪೋಲಿಸರು ಪ್ರಕರಣ ದಾಖಲಿಸಿಕೊಂಡು ಸಿ.ಸಿ.ಕ್ಯಾಮೆರಾವನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ.


ಬಾಡಿಗೆ ಮಾಡಲೆಂದು ಜಾತಕ ಪಕ್ಷಿಯಂತೆ ಕಾದು ಕುಳಿತಿರುವ ಬಡ ಚಾಲಕರು ಇಂತಹ ಮೋಸಗಾರರ ಬಲೆಗೆ ಬಹಳ ಸುಲಭವಾಗಿ ಬೀಳುತ್ತಾರೆ. ಅತ್ಯಂತ ಚಾಕ ಚಕ್ಯತೆಯಿಂದ ಮುಗ್ಧ ಮಂದಿಯನ್ನು ಯಾಮಾರಿಸುವ ಅಪರಿಚಿತರ ಬಗ್ಗೆ ನಿಗಾ ವಹಿಸಬೇಕು. ಜೀವನೋಪಾಯಕ್ಕಾಗಿ ಬಾಡಿಗೆಗೆ ಗೊತ್ತು ಪಡಿಸುವ ಗ್ರಾಹಕರು ಬರುವ ಹಾದಿಯನ್ನು ಇಡೀ ದಿನ ಕಾದು ಕುಳಿತಿರುವ ಚಾಲಕರು ವಿಶ್ವಾಸದ ಮಾತಿಗೆ ಬೇಗನೆ ಮರುಳಾಗಿ ಮೋಸ ಹೋಗುತ್ತಲೇ ಇರುತ್ತಾರೆ. ಇನ್ನಾದರೂ ವಾಹನ ಚಾಲಕರು ಅಪರಿಚಿತ ವ್ಯಕ್ತಿಗಳ ಮೇಲೆ ನಿಗಾವಹಿಸಿ ಅಂತಹ ವ್ಯಕ್ತಿಗಳ ಚಲನ ವಲನಗಳ ಬಗ್ಗೆ ಎಚ್ಚರ ವಹಿಸಿ ಜಾಗೃತರಾಗಿರಬೇಕು. ಇಲ್ಲವಾದಲ್ಲಿ ಅಮಾಯಕ ದುಡಿಯುವ ಕೈಗಳಿಗೆ ವಂಚಕರಿಂದ ಅನ್ಯಾಯ ಮೋಸ ನಡೆಯುತ್ತಲೆ ಇರುತ್ತದೆ. ಸುಳ್ಯ ಆಸುಪಾಸಿನಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳತನ, ದರೋಡೆ, ವಂಚನೆಯ ಪ್ರಕರಣ ಕಂಡು ಬರುತ್ತಿದೆ ಇದಕ್ಕೆ ಕಡಿವಾಣ ಹಾಕುವ ಕಠಿಣ ಕ್ರಮ ಇಲಾಖೆ ವತಿಯಿಂದ ಜರುಗಿಸಬೇಕೆಂಬುದು ನಾಗರಿಕರ ಆಗ್ರಹವಾಗಿದೆ.