ಶ್ರದ್ಧಾ ಭಕ್ತಿಯಿಂದ ನೆರವೇರಿದ ಕುಮಾರಯಾತ್ರೆ : ಕುಮಾರಪಾದಕ್ಕೆ ಪೂಜೆ

0

150 ಕ್ಕೂ ಅಧಿಕ ಮಂದಿ ಭಾಗಿ

ಕುಕ್ಕೆ ಸುಬ್ರಹ್ಮಣ್ಯ ದ ಕುಮಾರಪರ್ವತದ ತುತ್ತ ತುದಿಯಲ್ಲಿರುವ ಕುಮಾರನ ಪಾದಕ್ಕೆ ಮತ್ತು ಸಮೀಪದಲ್ಲಿರುವ ವಾಸುಕಿಗೆ ಕುಮಾರ
ಯಾತ್ರೆ ನಡೆಸಿ ಜ.2 ರಂದು ಪೂಜೆ ನೆರವೇರಿಸಲಾಯಿತು.

ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಮಾರ್ಗಶಿರ ಬಹುಳ ಷಷ್ಠಿಯ ದಿನದಂದು ಪೂಜೆ ನೆರವೇರಿಸಿದರು.

ಮದ್ಯಾಹ್ನ ಸುಮಾರು ೧೨ಗಂಟೆಯ ಸುಮುಹೂರ್ತದಲ್ಲಿ ಕುಮಾರಪರ್ವತದ ತುತ್ತ ತುದಿಯಲ್ಲಿರುವ ಕುಮಾರನ ಪಾದಗಳಿಗೆ ಪ್ರಧಾನ ಅರ್ಚಕರು ವಿವಿಧ ವೈಧಿಕ ವಿದಿ ವಿಧಾನಗಳ ಮೂಲಕ ಪೂಜೆ ಸಲ್ಲಿಸಿದರು.ಅಲ್ಲದೆ ಪಾದದ ಬಳಿಯಿರುವ ವಾಸುಕಿಗೆ ಪೂಜೆ ನೆರವೇರಿಸಿದರು. ಆರಂಭದಲ್ಲಿ ಪ್ರಧಾನ ಅರ್ಚಕರು ಕುಮಾರನ ಪಾದಗಳಿಗೆ ಮತ್ತು ಪಕ್ಕದಲ್ಲಿನ ವಾಸಕಿಗೆ ಅಭಿಷೇಕ ನೆರವೇರಿಸಿದರು. ನಂತರ ಪುಷ್ಪಾಲಂಕಾರ ಮಾಡಿ ಫಲಸಮರ್ಪಣೆ ಮಾಡಿ, ನೈವೇದ್ಯ ಸಮರ್ಪಿಸಿದರು. ಬಳಿಕ ವೈಧಿಕರ ಮಂತ್ರೋಚ್ಚರಣೆಯ ನಡುವೆ ಪ್ರಧಾನ ಅರ್ಚಕರು ಪೂಜೆ ನೆರವೇರಿಸಿದರು.ಪುರೋಹಿತರು ಸಹಕರಿಸಿದರು. ಬಳಿಕ ಪ್ರಸಾದ ವಿತರಣೆ ನೆರವೇರಿತು.

   ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಶ್ರೀವತ್ಸ ಬೆಂಗಳೂರು, ಲೋಕೇಶ್ ಮುಂಡೋಕಜೆ, ಶೋಭಾ ಗಿರಿಧರ್, ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಮಾಜಿ ಸದಸ್ಯ ಶಿವರಾಮ ರೈ, ಅನುಗ್ರಹ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಗಣೇಶ್ ಪ್ರಸಾದ್ ಎನ್, ಬಸವನಮೂಲೆ ಶ್ರೀ ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸ್ಕಂಧ, ದೇವಳದ ಸಿಬಂಧಿಗಳಾದ ನಂದೀಶ್ ಕಟ್ರಮನೆ, ಸುಬ್ಬಪ್ಪ ಎನ್.ಸಿ, ಬಾಲಕೃಷ್ಣ.ಆರ್, ಮಹೇಶ್‌ಕುಮಾರ್ ಎಸ್, ಪುರುಷೋತ್ತಮ, ಪೂರ್ಣಿಮಾ ಮಹೇಶ್ಚಂದ್ರ, ಸುಜಾತಾ, ಪವಿತ್ರಾ, ಭಾಗ್ಯಶ್ರೀ, ಸ್ಪರ್ಶಾ ಸೇರಿದಂತೆ ಭಕ್ತರು, ಶ್ರೀ ದೇವಳದ ಇತರ ಸಿಬ್ಬಂದಿಗಳು, ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ಸುಮಾರು ೧೫೦ಕ್ಕೂ ಅಧಿಕ ಭಕ್ತರು ಕುಕ್ಕೆಯಿಂದ ೧೮ ಕಿ.ಮಿ ದೂರವಿರುವ ಎತ್ತರದ ಪರ್ವತ ಏರಿ ಪೂಜೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

ಒಂದು ದಿನ ಮುಂಚಿತ ಯಾತ್ರೆ
ಕೆಲವು ಭಕ್ತರು ಜ.1 ರಂದೇ ಯಾತ್ರೆ ಆರಂಭಿಸಿ ಗಿರಿಗದ್ದೆ ಮೂಲಕ ಪ್ರಯಾಣಿಸಿ ಕುಮಾರಪರ್ವತಕ್ಕೆ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು. ಶ್ರೀ ದೇವಳದ ಆಡಳಿತ ಮಂಡಳಿ, ಶ್ರೀ ದೇವಳದ ಸಿಬ್ಬಂಧಿಗಳು ಮತ್ತು ಭಕ್ತರು ಜ.2 ರಂದು ಮುಂಜಾನೆ ಕುಕ್ಕೆ ದೇವಳದಿಂದ ವಾಹನಗಳಲ್ಲಿ ಬಿಸಿಲೆ, ಶಾಂತಳ್ಳಿ ಮೂಲಕ ಕುಮಾರಪರ್ವತ ಯಾತ್ರೆಗೆ ತೆರಳಿದರು. ಶಾಂತಳ್ಳಿಯ ದೇವಳದ ಬಳಿ ವಾಹನ ನಿಲ್ಲಿಸಿ ಸುಮಾರು ೮ ಕಿ.ಮೀ ದೂರವಿರುವ ಕಡಿದಾದ ಹಾದಿಯಲ್ಲಿ ಪರ್ವತವೇರಿ ಪೂಜೆಯಲ್ಲಿ ಪಾಲ್ಗೊಂಡರು.