ಪಿಲಿಕಜೆಯಲ್ಲಿ ಎನ್.ಎಂ.ಸಿ. ಎನ್.ಎಸ್.ಎಸ್. ವಿಶೇಷ ಶಿಬಿರ ಸಮಾರೋಪ

0

ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ಸಮಯ ಪ್ರಜ್ಞೆಯನ್ನು ಎನ್.ಎಸ್.ಎಸ್‌. ಬೋಧಿಸುತ್ತದೆ – ಡಾ. ಕೆ.ವಿ. ಚಿದಾನಂದ

ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರ ವಿದ್ಯಾರ್ಥಿಗಳಲ್ಲಿ ಹೊಸ ಜೀವನವನ್ನು ರೂಪಿಸುತ್ತದೆ. ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ಸಮಯ ಪ್ರಜ್ಞೆಯನ್ನು ಶಿಬಿರಾರ್ಥಿಗಳು ಬೆಳೆಸುತ್ತಾರೆ. ಪ್ರಪಂಚದ ನಾನಾ ದೇಶಗಳಲ್ಲಿ ಸುಳ್ಯ ಎನ್.ಎಂ.ಸಿ. ಮತ್ತು ಇತರ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿದವರು ಬೇರೆಬೇರೆ ಉದ್ಯೋಗಗಳಲ್ಲಿ ದುಡಿಯುತ್ತಿದ್ದು, ಸುಳ್ಯದ ಹೆಸರು ಪಸರಿಸುತ್ತಿದ್ದಾರೆ. ಈ ಭಾಗದಲ್ಲಿ ಇಂತಹ ಶಿಬಿರ ಇನ್ನೂ ನಡೆಯಲಿ ಎಂಬ ಅಭಿಪ್ರಾಯವನ್ನು ಊರವರು ಹೇಳಿದಾಗ ಶಿಬಿರಾರ್ಥಿಗಳು, ಶಿಬಿರಾಧಿಕಾರಿಗಳು ಉತ್ತಮ ರೀತಿಯಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಯುತ್ತದೆ ಎಂದು ಎ.ಒ.ಎಲ್.ಇ. ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಹೇಳಿದರು. ಅವರು ಮಾ. 16ರಂದು ಅಮರ ಮುಡ್ನೂರು ಗ್ರಾಮದ ಪಿಲಿಕಜೆಯಲ್ಲಿ ನಡೆದ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸುಳ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲ್ ಸಮಾರೋಪ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ, ಕುಕ್ಕುಜಡ್ಕ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಕೇಶವ ಗೌಡ ಕರ್ಮಜೆ, ಪ್ರಗತಿಪರ ಕೃಷಿಕರಾದ ಆನೆಕಾರ ಗಣಪಯ್ಯ, ಅಮರ ಮುಡ್ನೂರು ಗ್ರಾ.ಪಂ‌. ಸದಸ್ಯೆ ಶ್ರೀಮತಿ ದಿವ್ಯಾ ಕೆ, ಚೊಕ್ಕಾಡಿ ಗರುಡ ಯುವಕ ಮಂಡಲದ ಮಾಜಿ ಅಧ್ಯಕ್ಷ ನಿತಿನ್ ಕುಮಾರ್ ಪಡ್ಪು, ಸುಳ್ಯ ಯುವಜನ ಸಂಯುಕ್ತ ಮಂಡಳಿ ಗೌರವಾಧ್ಯಕ್ಷ ತೇಜಸ್ವಿ ಕಡಪಳ, ಯುವಜನ ಸಂಯುಕ್ತ ಮಂಡಳಿ ಪೂರ್ವಾಧ್ಯಕ್ಷ ಅನಿಲ್ ಪೂಜಾರಿಮನೆ ಮತ್ತು ಪ್ರಗತಿಪರ ಕೃಷಿಕರಾದ ಶಿವಸಾಯಿ ಭಟ್ ಪಿಲಿಕಜೆ ಅತಿಥಿಗಳಾಗಿ ಭಾಗವಹಿಸಿದ್ದರು. ಕೆ.ವಿ.ಜಿ. ಪಾಲಿಟೆಕ್ನಿಕ್ ನಿವೃತ್ತ ಪ್ರಾಂಶುಪಾಲರಾದ ಬಾಲಕೃಷ್ಣ ಬೊಳ್ಳೂರು, ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ ಕಾರ್ಯಾಧ್ಯಕ್ಷ ಗಣೇಶ್ ಪಿಲಿಕಜೆ, ಡಿ.ಸಿ.ಸಿ. ಬ್ಯಾಂಕ್ ಮಂಗಳೂರು ಮಾರಾಟಾಧಿಕಾರಿ ಆದರ್ಶ ಬೊಳ್ಳೂರು, ಯುವಜನ ಸಂಯುಕ್ತ ಮಂಡಳಿ ನಿರ್ದೇಶಕ ಪ್ರವೀಣ್ ಜಯನಗರ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಶಿಬಿರಾಧಿಕಾರಿಗಳಾದ ಶ್ರೀಮತಿ ಚಿತ್ರಲೇಖ ಕೆ.ಎಸ್. ಸ್ವಾಗತಿಸಿ, ಶಿಬಿರದ ನಾಯಕ ಪ್ರಸಾದ್ ವಂದಿಸಿದರು. ಕು. ಚೈತನ್ಯ ಎಂ. ಕಾರ್ಯಕ್ರಮ ನಿರೂಪಿಸಿದರು. ಶಿಬಿರದ ನಾಯಕರುಗಳಾದ ಕೀರ್ತನ್ ಡಿ, ದೀಪ್ತಿ ಎ.ಎನ್, ಪ್ರಸಾದ್ ಕೆ.ಎನ್ ಮತ್ತು ರಕ್ಷಿತಾ ಕೆ ವೇದಿಕೆಯಲ್ಲಿ ಆಸೀನರಾಗಿದ್ದರು. ಕು. ರಕ್ಷಿತಾ ಕೆ ಶಿಬಿರದ ವರದಿ ವಾಚಿಸಿದರು. ಶಿಬಿರಾರ್ಥಿ ಚೇತಸ್ ಉಗ್ರಾಣಿ ವರದಿ ವಾಚಿಸಿದರು. ಗಣೇಶ್ ಪಿಲಿಕಜೆ, ಶಿಬಿರಾರ್ಥಿ ಆಶಿತಾ, ಕೀರ್ತನ್ ಶಿಬಿರದ ಅನುಭವಗಳನ್ನು ಹಂಚಿಕೊಂಡರು. ದೀಪ್ತಿ ಎನ್. ಸ್ಪರ್ಧೆಗಳಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಊರಿನ 15 ಸಂಘಟನೆಗಳ ಪರವಾಗಿ,
ಶ್ರೀ ಗಣೇಶೋತ್ಸವ ಸಮಿತಿ ಕುಕ್ಕುಜಡ್ಕ, ಶ್ರೀ ಧರ್ಮಶಾಸ್ತಾ ಭಜನಾ ಮಂದಿರ ಪಿಲಿಕಜೆ ಮತ್ತು ಕೆ.ವಿ.ಜಿ. ಆಡಳಿತ ಮಂಡಳಿ ಪರವಾಗಿ ಯುವಜನ ಸಂಯುಕ್ತ ಮಂಡಳಿ ಗೌರವಾಧ್ಯಕ್ಷ ತೇಜಸ್ವಿ ಕಡಪಳರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮುರಳಿ ನಳಿಯಾರು ತೇಜಸ್ವಿ ಕಡಪಾಲರ ಸನ್ಮಾನ ಪತ್ರ ವಾಚಿಸಿದರು. ಘಟಕದ ಶಿಬಿರಾಧಿಕಾರಿ ಸಂಜೀವ ಕುದ್ಪಾಜೆಯವರನ್ನು ಕೆ.ವಿ.ಜಿ. ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.

ಶಿಬಿರದಲ್ಲಿ ಭಾಗವಹಿದ ವಿದ್ಯಾರ್ಥಿಗಳು ಎಷ್ಟು ಚುರುಕಾಗ್ತಾರೆ ಅಂದರೆ ಒಂದು ಕಾರ್ಯಕ್ರಮವನ್ನು ನಿರೂಪಣೆ ಮಾಡಲು ನಾಲ್ಕು ಜನ ಮುಂದೆ ಬರುತ್ತಿದ್ದರು. ಶಿಬಿರಾರ್ಥಿಗಳು ಮತ್ತು ಶಿಬಿರಾಧಿಕಾರಿಗಳ ಬಾಂಧವ್ಯ, ಪ್ರೀತಿ ಅದು ಸ್ಮರಿಸಿಕೊಳ್ಳುವಂತದ್ದು. ಕಾಲೇಜಿನ 46ನೇ ಶಿಬಿರ ನನ್ನ 26ನೇ ಶಿಬಿರ ಮತ್ತು ನನ್ನ ಕೊನೆಯ ಶಿಬಿರ. ಸಂಸ್ಥೆಯ ಆಡಳಿತ ಮಂಡಳಿಯ ಪ್ರೋತ್ಸಾಹದಿಂದ ಎನ್.ಎಸ್.ಎಸ್. ಇಷ್ಟು ಒಳ್ಳೆಯ ರೀತಿಯಲ್ಲಿ ನಡೆದುಬಂದಿದೆ. ಮುಂದೊಂದು ಜನ್ಮ ಇದೆ ಎಂದಾದರೆ ನಾನು ಎನ್.ಎಂ.ಸಿ.ಯ ಎನ್.ಎಸ್.ಎಸ್. ಅಧಿಕಾರಿಯಾಗಿ ಸೇವೆ ಸಲ್ಲಿಸುವ ಅವಕಾಶವನ್ನು ಬೇಡುತ್ತೇನೆ – ಸಂಜೀವ ಕುದ್ಪಾಜೆ

ಶ್ರಮಕ್ಕೆ ಪ್ರಾಧ್ಯಾನ್ಯತೆ ನೀಡಿದರೆ ವ್ಯಕ್ತಿಯಾಗಲೀ ಸಂಸ್ಥೆಯಾಗಲೀ ಏಳಿಗೆಯನ್ನು ಪಡೆಯಲು ಸಾಧ್ಯ. ಸತ್ಯಮೇವ ಜಯತೇ ಎಂಬ ವೇದವಾಕ್ಯದೊಂದಿಗೆ ಬೆಳೆದು ಬಂದಿರುವುದು ಎನ್.ಎಸ್.ಎಸ್. ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಶ್ರಮದ ಮಹತ್ವವನ್ನು ಪಡೆದುಕೊಂಡಿದ್ದೀರಿ. ಅದನ್ನು ತಾವು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ – ಚಂದ್ರಶೇಖರ ಪೇರಾಲ್