ಆಲೆಟ್ಟಿ: ಬಿಸಿ ನೀರು ಮೈಮೇಲೆ ಬಿದ್ದು ಚಿಕಿತ್ಸೆ ಪಡೆಯುತ್ತಿದ್ದ ಅವಿವಾಹಿತ ಯುವತಿ ಆಸ್ಪತ್ರೆಯಲ್ಲಿ ನಿಧನ

0

ಆಲೆಟ್ಟಿ ಗ್ರಾಮದ ಕುದ್ಕುಳಿ ಎಂಬಲ್ಲಿ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವೇಳೆಯಲ್ಲಿ ಆಕಸ್ಮತ್ತಾಗಿ ಜಾರಿ ಬಿದ್ದು ಮೈ ಮೇಲೆ ಬಿಸಿ ನೀರು ಚೆಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಯುವತಿಯೋರ್ವಳು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಜೂ.17 ರಂದು ಮೃತ ಪಟ್ಟಿರುವ ಘಟನೆ ವರದಿಯಾಗಿದೆ.

ಮೃತಪಟ್ಟ ಯುವತಿ ಆಲೆಟ್ಟಿಯ ಕುದ್ಕುಳಿ ದಿ.ಸುಬ್ರಾಯ ರವರ ಪುತ್ರಿ ಕು.ರೇಖಾ (35)ಎಂದು ತಿಳಿದು ಬಂದಿದೆ.

ಕಳೆದ ಒಂದು ವಾರದ ಹಿಂದೆ ಮನೆಯಲ್ಲಿ ಅಡುಗೆ ಮಾಡಿ ಬಿಸಿ ನೀರಿನ ಪಾತ್ರೆಯನ್ನು ಒಲೆಯಿಂದ ತೆಗೆಯುತ್ತಿರುವ ಸಂದರ್ಭದಲ್ಲಿ ಆಕಸ್ಮತ್ತಾಗಿ ಕಾಲು ಜಾರಿ ಬಿದ್ದಾಗ ಪಾತ್ರೆಯಲ್ಲಿದ್ದ ಬಿಸಿ ನೀರು ಮೈಮೇಲೆ ಬಿತ್ತು.

ಆ ಸಂದರ್ಭದಲ್ಲಿ ಮನೆಯಲ್ಲಿ ಯುವತಿಯ ತಾಯಿ ಮತ್ತು ಅಕ್ಕ ಮಾತ್ರ ಇದ್ದರು. ಸ್ಥಳೀಯರು ವಿಷಯ ತಿಳಿದು ತಕ್ಷಣ ಸುಳ್ಯದ ಸರಕಾರಿ ಆಸ್ಪತ್ರೆಗೆ ಯುವತಿಯನ್ನು ಕರೆ ತಂದು ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ದಿನ ಕಳೆದಂತೆ ಬಿಸಿ ನೀರು ಬಿದ್ದು ಗುಳ್ಳೆ ಬಂದ ಭಾಗಗಳಲ್ಲಿ ಒಡೆದು ರಕ್ತಸೋರಲಾರಂಭಿಸಿದ್ದರಿಂದಾಗಿ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು.

ವೈದ್ಯರ ಸಲಹೆ ಮೇರೆಗೆ ಜೂ.15 ರಂದು ಯುವತಿಯನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಗುಳ್ಳೆಗಳು ಬಂದ ಭಾಗದಿಂದ ಮತ್ತಷ್ಟು ವಿಪರೀತ ರಕ್ತ ಸೋರಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.

ಬಳಿಕ ಸುಳ್ಯ ಪೋಲಿಸರು ಮಂಗಳೂರಿನ ಆಸ್ಪತ್ರೆಗೆ ತೆರಳಿ ಮೃತ ದೇಹವನ್ನು ಪೋಸ್ಟ್ ಮಾರ್ಟಂ ನಡೆಸಿ ವಾರಸುದಾರರಿಗೆ ಬಿಟ್ಟು ಕೊಟ್ಟರು. ಅದೇ ದಿನ ರಾತ್ರಿ ಸುಳ್ಯದ ಕೊಡಿಯಾಲಬೈಲು ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.

ಮೃತ ಯುವತಿ ತಾಯಿ ಶ್ರೀಮತಿ ಸವಿತಾ, ಸಹೋದರ ಭವಿತ್ ಕುದ್ಕುಳಿ, ಸಹೋದರಿ ಶ್ರೀಮತಿ ಗೀತಾ ಗಿರೀಶ್ ಹಾಗೂ ಕುಟುಂಬಸ್ಥರನ್ನು, ಬಂಧು ವರ್ಗದವರನ್ನು ಅಗಲಿದ್ದಾರೆ.
ಮೃತ ಯುವತಿಗೆ ವಿವಾಹ ನಡೆಸುವ ಬಗ್ಗೆ ಮಾತುಕತೆಯೂ ನಡೆದಿತ್ತು ಎನ್ನಲಾಗಿದೆ.