ಆರೋಗ್ಯಕರ ಜೀವನಕ್ಕೆ ಯೋಗ ಸಹಕಾರಿ : ಜೆ.ಪಿ.ರೈ

0


ಸುಳ್ಯ ಬಂಟರ ಭವನದಲ್ಲಿ ಉಚಿತ ಯೋಗ ಶಿಕ್ಷಣ ಆರಂಭ

“ಆರೋಗ್ಯಕರ ಜೀವನ ನಡೆಸಲು ಯೋಗ ಸಹಕಾರಿಯಾಗುತ್ತದೆ” ಎಂದು ಸುಳ್ಯ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಹೇಳಿದ್ದಾರೆ.


ಸುಳ್ಯದ ಕೇರ್ಪಳದಲ್ಲಿರುವ ಬಂಟರ ಭವನದಲ್ಲಿ ಜೂ.೨೫ರಂದು ಆರಂಭಗೊಂಡ ಎಸ್.ಪಿ.ವೈಎಸ್‌ಎಸ್ ಕರ್ನಾಟಕ ಸಂಸ್ಥೆಯವರು ಬಂಟರ ಸಂಘದ ಸಹಯೋಗದೊಂದಿಗೆ ನಡೆಸುತ್ತಿರುವ ಉಚಿತ ಯೋಗ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಪ್ರತಿಯೊಬ್ಬರು ಒತ್ತಡದಲ್ಲಿ ಜೀವನ ನಡೆಸುವ ಈ ದಿನದಲ್ಲಿ ಆರೋಗ್ಯವನ್ನು ಹೇಗೆ ಸಮತೋಲನದಲ್ಲಿ ಇರಿಸಿಕೊಳ್ಳಬಹುದೆಂದು ಯೋಗ ಕಲಿಸುತ್ತದೆ. ಮನುಷ್ಯನಿಗೆ ದೊಡ್ಡ ಶ್ರೀಮಂತಿಕೆಯೇ ಆರೋಗ್ಯ. ಅದಕ್ಕಾಗಿ ಯೋಗ ಕಲಿಯೋಣ ಎಂದು ಅವರು ಹೇಳಿದರು.


ಶಿಕ್ಷಕಿ ಶ್ರೀಮತಿ ಸುನಂದ ಸುಳ್ಯ ಅಧ್ಯಕ್ಷತೆ ವಹಿಸಿದ್ದರು. ಎಸ್.ಪಿ.ವೈಎಸ್‌ಎಸ್ ಸಂಸ್ಥೆಯ ಜಿಲ್ಲಾ ಸಂಚಾಲಕ ಜಯರಾಮ ಪ್ರಾಸ್ತಾವಿಕ ಮಾತನಾಡಿದರು. ಸುಮಲತ ಸ್ವಾಗತಿಸಿ, ಉಮಾ ಪಾರ್ವತಿ ವಂದಿಸಿದರು. ಮಮತಾ ಕಾಯ್ಕ್ರಮ ನಿರೂಪಿಸಿದರು.
ಜೂ.೨೬ರಿಂದ ಬೆಳಗ್ಗೆ ೫.೩೦ರಿಂದ ೬.೩೦ರವರೆಗೆ ಉಚಿತ ಯೋಗ ತರಬೇತಿ ನಡೆಯಲಿದೆ. ಆಸಕ್ತರು ಭಾಗವಹಿಸಬಹುದು.