ಆಲೆಟ್ಟಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

0

ಆಲೆಟ್ಟಿ ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆಯು ಪಂಚಾಯತ್ ಅಧ್ಯಕ್ಷೆ ವೀಣಾಕುಮಾರಿ ಆಲೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಆ.28 ರಂದು ನಡೆಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಕೆ ಕಮಲಾ ನಾಗಪಟ್ಟಣ, ಪ್ರಭಾರ ಪಿ.ಡಿ.ಒ ಸೃಜನ್ ಎ.ಜಿ ಉಪಸ್ಥಿತರಿದ್ದರು.
ಕೋಲ್ಚಾರಿನ ಮಾಣಿಮರ್ದು ಭಾಗದ ಕೋಡಂಬಾರೆ ಎಂಬಲ್ಲಿಗೆ ಮಂಜೂರಾದ ಸೇತುವೆ ಬದಲಾವಣೆ ಕುರಿತು ಸದಸ್ಯ ಧರ್ಮಪಾಲ ಕೊಯಿಂಗಾಜೆ ಪ್ರಸ್ತಾಪಿಸಿದರು. ಸದಸ್ಯರ ಗಮನಕ್ಕೆ ತಾರದೆ ಅಧ್ಯಕ್ಷ ರು ಪತ್ರಕ್ಕೆ ಸಹಿ ಹಾಕಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ವಾರ್ಡಿನಲ್ಲಿ ಯಾವುದೇ ಕೆಲಸ ಕಾಮಗಾರಿ ಮಾಡುವ ಸಂದರ್ಭದಲ್ಲಿ ಸದಸ್ಯರ ಗಮನಕ್ಕೆ ತರಬೇಕು ಎಂದು ವೇದಾವತಿ ನೆಡ್ಚಿಲು ತಿಳಿಸಿದರು.
ಪಿ.ಡಿ.ಒ ಮತ್ತು ಸಿಬ್ಬಂದಿಗಳು ಮುತುವರ್ಜಿಯಿಂದ ಕೆಲಸ ನಿರ್ವಹಿಸಬೇಕು. ಕುಡೆಕಲ್ಲು ಎಂಬಲ್ಲಿ ಪ.ಜಾತಿಯ ಕುಟುಂಬ ಗಳಿಗೆ ಸರಕಾರದಿಂದ ಮಂಜೂರಾದ ನಿವೇಶನಗಳು ಖಾಲಿ ಇದೆ.


ಮನೆ ಕಟ್ಟದೆ ಇರುವ ಖಾಲಿ ಸೈಟಿನಲ್ಲಿ ಅವಶ್ಯಕತೆ ಇರುವ ಕುಟುಂಬದವರಿಗೆ
ಮನೆ ನಿರ್ಮಿಸಲು ಅವಕಾಶ ನೀಡುವಂತೆ ತಹಶಿಲ್ದಾರಿಗೆ ಮತ್ತು ಜಿಲ್ಲಾಧಿಕಾರಿಯವರಿಗೆ ಪಂಚಾಯತ್ ನಿಂದ ಪತ್ರ ಬರೆದು ಕಳುಹಿಸುವಂತೆ ಮುತ್ತಪ್ಪ ಪೂಜಾರಿ ಮೊರಂಗಲ್ಲು ಪ್ರಸ್ತಾಪಿಸಿದರು. ಅರಂಬೂರು ರಾಜ್ಯ ಹೆದ್ದಾರಿ ರಸ್ತೆಯ ಬದಿ ಕಸ ಎಸೆದವರ ಬಗ್ಗೆ ಪಂಚಾಯತ್ ಗೆ ದೂರು ನೀಡಿದರೂ ಕ್ರಮ ಕೈಗೊಳ್ಳದಿರುವುದಕ್ಕೆ ಸುದೇಶ್ ಅರಂಬೂರು ಅಸಮಾಧಾನ ವ್ಯಕ್ತಪಡಿಸಿದರು. ನಮ್ಮ ವಾರ್ಡಿನಲ್ಲಿ ಬೀದಿ ದೀಪದ ಅಳವಡಿಕೆಯನ್ನು ಗ್ರಾಮ ಸಭೆಯ ಮುಂಚಿತವಾಗಿ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಸಭೆಗೆ ಹಾಜರಾಗುವುದಿಲ್ಲ ಎಂದು ಚಂದ್ರಕಾಂತ ನಾರ್ಕೋಡು ಆಗ್ರಹಿಸಿದರು.


ಗ್ರಾಮ ಸಭೆಯ ದಿನ ನಿಗದಿ ಪಡಿಸಿ ಅಧಿಕಾರಿಗಳಿಗೆ ತಿಳಿಸಬೇಕು.
ದೊಡ್ಡ ಗ್ರಾಮವಾಗಿರುವ ಇಲ್ಲಿಗೆ ಖಾಯಂ ಪಿ.ಡಿ.ಒ ಹಾಗೂ ಗ್ರಾಮ ಆಡಳಿತಾಧಿಕಾರಿ ಯವರನ್ನು ನೇಮಕ ಮಾಡುವಂತೆ ಪತ್ರ ಬರೆದು ನಿರ್ಣಯಿಸುವಂತೆ ಸತ್ಯಕುಮಾರ್ ಆಡಿಂಜ ಒತ್ತಾಯಿಸಿದರು.
ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಧ್ವನಿಗೂಡಿಸಿದರು.


ಜೆ.ಜೆ.ಎಂ ಯೋಜನೆಯ ಅನುಷ್ಠಾನ ಸಮರ್ಪಕವಾಗಿ ನಡೆಯುತ್ತಿಲ್ಲ. ನಮ್ಮ ವಾರ್ಡಿನಲ್ಲಿ ಯಾವುದೇ ಕಾಮಗಾರಿ ಕೆಲಸ ನಡೆದಿಲ್ಲ. ಇಂಜಿನಿಯರ್ ಮತ್ತು ಗುತ್ತಿಗೆದಾರರನ್ನು ಕರೆಸಿ ಚರ್ಚಿಸಬೇಕು ಎಂದು ರತೀಶನ್ ಸಲಹೆ ನೀಡಿದರು.


ಬಾರ್ಪಣೆ ಅಂಗನವಾಡಿ ಕೇಂದ್ರದ ವಿದ್ಯುತ್ ಸಂಪರ್ಕದ ಲೈನ್ ದುರಸ್ತಿ ಪಡಿಸುವಂತೆ ಕಳೆದ ಮೂರು ತಿಂಗಳ ಹಿಂದೆ ಪ್ರಸ್ತಾಪಿಸಲಾಗಿದೆ. ಹಿಂದಿನ ಪಿ.ಡಿ.ಒ ಹಾರಿಕೆಯ ಉತ್ತರ ನೀಡಿರುವುದಲ್ಲದೆ ಯಾವುದೇ ಕೆಲಸ ಕಾರ್ಯಗತ ಮಾಡಿರುವುದಿಲ್ಲ ಎಂದು ಸತ್ಯಪ್ರಸಾದ್ ಗಬ್ಬಲ್ಕಜೆ ನೇರವಾಗಿ ಆರೋಪಿಸಿದರು.
ಗ್ರಾಮ ಸಭೆ ದಿನ ನಿಗದಿ ಪಡಿಸಿ ಅಧಿಕಾರಿಗಳು ಬರುವಂತೆ ತಿಳಿಸುತ್ತೇವೆ. ಜೆ.ಜೆ.ಎಂ. ಇಂಜಿನಿಯರ್ ಮತ್ತು ಗುತ್ತಿಗೆದಾರ ವರನ್ನು ಕರೆಸಿ ಸಭೆ ನಡೆಸುವುದಾಗಿ ತಿಳಿಸಿದರು. ಸಭೆಗೆ ಮೊದಲು ಅವಶ್ಯಕತೆ ಇರುವಲ್ಲಿ ಬೀದಿ ದೀಪ ಅಳವಡಿಸುವ ವ್ಯವಸ್ಥೆ ಮಾಡಲಾಗುವುದು. ಅರಂಬೂರಿನಲ್ಲಿ ರಸ್ತೆ ಸಮಸ್ಯೆಯನ್ನು ಸದಸ್ಯರ ಸಮ್ಮುಖದಲ್ಲಿ ಬಗೆ ಹರಿಸುವ ಪ್ರಯತ್ನ ಮಾಡಲಾಗಿದೆ ಎಂದು ನೂತನ ಅಧ್ಯಕ್ಷೆ ವೀಣಾಕುಮಾರಿ ಆಲೆಟ್ಟಿ ತಿಳಿಸಿದರು.
ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಸಿಬ್ಬಂದಿ ವರ್ಗದವರು ಸಹಕರಿಸಿದರು.