ಯುವಜನತೆ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸುವ ಸಾಮರ್ಥ್ಯ ಪಡೆದುಕೊಳ್ಳಬೇಕು: ಪ್ರೊ. ದಾಮೋದರ ಕಣಜಾಲು

0

ಎನ್.ಎಂ.ಸಿ: ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ವಿದ್ಯಾರ್ಥಿ ವೇತನ ವಿತರಣೆ

ನ.04, ಶನಿವಾರ; ಯುವಜನತೆ ಹೊಸ ಆಲೋಚನೆಗಳೊಂದಿಗೆ ಮುನ್ನಡೆಯುವ ಅವಶ್ಯಕತೆಯಿದೆ. ದೇಶದ ಯುವ ಸಂಪತ್ತು ಸಕಾರಾತ್ಮಕ ರೀತಿಯಲ್ಲಿ ವಿನಿಯೋಗವಾದರೆ ಭಾರತ ಮುಂದೆ ಸದೃಢ ದೇಶವಾಗಿ ನಿಲ್ಲುವ ಸಾಧ್ಯತೆಯಿದೆ. ಯುವಕರು ಉದಾಸೀನತೆ ಬಿಟ್ಟು, ಬರುವ ಅಡೆತಡೆಗಳನ್ನು ಮೆಟ್ಟಿ ನಿಂತಾಗ ಸಾಧನೆ ಮಾಡಲು ಸಾಧ್ಯ. ಸಮಾಜಕ್ಕಾಗಿ, ದೇಶಕ್ಕಾಗಿ ಎದ್ದು ನಿಲ್ಲುವ ಮನಸ್ಥಿತಿ ಬೆಳೆಯಬೇಕು. ಸ್ವಾರ್ಥವನ್ನು ತೊರೆದು ಬದುಕಬೇಕು. ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸುವ ಸಾಮರ್ಥ್ಯ ಬರಬೇಕು ಎಂದು ನೆಹರೂ ಮೆಮೋರಿಯಲ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಮತ್ತು ಪ್ರಸ್ತುತ ಡಾ. ಕೆ ಶಿವರಾಮ ಕಾರಂತ ಸರಕಾರಿ ಪದವಿ ಕಾಲೇಜು ಪೆರುವಾಜೆಯ ಪ್ರಾಂಶುಪಾಲರಾಗಿರುವ ಪ್ರೊ. ದಾಮೋದರ ಕಣಜಾಲು ಹೇಳಿದರು. ಇವರು ನೆಹರು ಮೆಮೊರಿಯಲ್ ಪದವಿ ಕಾಲೇಜು, ಸುಳ್ಯ ಇಲ್ಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆಗೈದು ಮಾತನಾಡಿದರು.


ಕಾಲೇಜಿನ ಮುಖ್ಯ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಇದರ ಅಧ್ಯಕ್ಷ ಡಾ. ಕೆ.ವಿ ಚಿದಾನಂದ ಇವರು ವಹಿಸಿ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಶ್ರೀಮತಿ ರತ್ನಾವತಿ ಡಿ. ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಟಿ ವಿಶ್ವನಾಥ್ ಮಾತನಾಡಿ ಉತ್ತಮ ನಾಯಕನಾಗಲು ಹಣದ ಅವಶ್ಯಕತೆಯಿಲ್ಲ, ಗುಣ ಅವಶ್ಯ ಎಂದರು. ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ನೀಡಿರುವ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ರುದ್ರಕುಮಾರ್ ಎಂ.ಎಂ ಪ್ರಾಸ್ತಾವಿಕ ಮಾತುಗಳ್ನಾಡಿದರು. ವೇದಿಕೆಯಲ್ಲಿ ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಪ್ರೊ. ಬಾಲಚಂದ್ರ ಗೌಡ ಎಂ, ಕಾಲೇಜು ಆಂತರಿಕ ಗುಣಮಟ್ಟ ಖಾತ್ರಿ ಕೋಶದ ಸಂಯೋಜಕಿ ಡಾ. ಮಮತಾ ಕೆ. ಮತ್ತು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕು. ರತ್ನ ಸಿಂಚನ ಮತ್ತು ತಂಡದವರು ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೋಸ್ಪಿನ್ ಬಾಬು ಸ್ವಾಗತಿಸಿ, ಉಪಾಧ್ಯಕ್ಷೆ ಕು. ನಿರೀಕ್ಷಾ ಜೆ ಅತಿಥಿಗಳನ್ನು ಪರಿಚಯಿಸಿ, ಕಾರ್ಯದರ್ಶಿ ಕೃಷ್ಣರಾಜ ಕೆ ಎಸ್ ವಂದಿಸಿದರು. ಕು. ಗಾನ ಬಿ ಡಿ ಮತ್ತು ಕು. ಅನ್ವಯ ಕಾರ್ಯಕ್ರಮ ನಿರೂಪಿಸಿದರು. ಕಾಲೇಜು ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಮತ್ತು ಎಲ್ಲಾ ತರಗತಿ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಸಹಕರಿಸಿದರು.