2024 ರ ಜನವರಿ 6 ರಂದು‌ ವಳಲಂಬೆಯಲ್ಲಿ ರಾಜ್ಯಮಟ್ಟದ ಜನಪದ ರೂಪಕಗಳ ಸ್ಪರ್ಧೆ – ಜನಪದ ವೈಭವ

0

ಜ.4 ಮತ್ತು 5 ರಂದು ರಾಜ್ಯಮಟ್ಟದ ನಾಯಕತ್ವ ಶಿಬಿರ

ಸುಳ್ಯದ ಕೆ.ವಿ.ಜಿ. ಪಾಲಿಟೆಕ್ನಿಕ್ ನ ಎನ್.ಎಸ್.ಎಸ್. ಹಿರಿಯ‌ ವಿದ್ಯಾರ್ಥಿಗಳ ಸಂಘ, ಎನ್.ಎಸ್.ಎಸ್. ಸೇವಾ ಸಂಗಮ ಟ್ರಸ್ಟ್ ಇದರ ನೇತ್ರತ್ವದಲ್ಲಿ 2024 ರ ಜನವರಿ 6 ರಂದು ರಾಜ್ಯಮಟ್ಟದ ಜನಪದ ರೂಪಕಗಳ ಸ್ಪರ್ಧೆ ‘ಜನಪದ ವೈಭವ -2024’ ಗುತ್ತಿಗಾರು ವಳಲಂಬೆ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಲಿದೆ ಎಂದು ಸುಳ್ಯದ ಎನ್.ಎಸ್.ಎಸ್. ಸೇವಾ ಸಂಘದ ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ.

ಡಿ.1 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿವರ ನೀಡಿದ ಟ್ರಸ್ಟ್ ಸಂಘಟನಾ ಕಾರ್ಯದರ್ಶಿ ಸುಜಿತ್ ಎಂ.ಎಸ್. ಮೊಗ್ರ ರವರು “ಕಳೆದ 8 ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತಿದ್ದು ಅದರಲ್ಲಿ ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸವನ್ನು ಡಿಜಿಟಲೀಕರಣಗೊಳಿಸಲು‌ ಸ್ಮಾರ್ಟ್ ಕ್ಲಾಸ್ ಅಳವಡಿಕೆ, ಡಿಜಿಟಲ್ ಲೈಬ್ರರಿ ಅಳವಡಿಕೆ, ಗಾಂಧಿಜಯಂತಿ ಕಾರ್ಯಕ್ರಮ ಆಯೋಜಿಸಿ ಶಾಲೆ ಮತ್ತು ಸಾರ್ವಜನಿಕರಲ್ಲಿ ಸರಕಾರಿ ಶಾಲೆಗಳ‌ ಮಹತ್ವದ ಅರಿವು ಮೂಡಿಸುವ ಕಾರ್ಯಕ್ರಮ ಹೀಗೆ ಯೋಜನೆಗಳನ್ನು‌ ಹಮ್ಮಿಕೊಂಡಿದ್ದೇವೆ.
ಕಳೆದ 2 ವರ್ಷದಿಂದ‌ ಜನಪದ‌ ಕಲೆಗಳನ್ನು‌ ಉಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಈ ಬಾರಿ ರಾಜ್ಯಮಟ್ಟದ ಜನಪದ ರೂಪಕಗಳ ಸ್ಪರ್ಧೆ ಜನಪದ ವೈಭವ ಜ.6ರಂದು ನಡೆಯುವುದು.
ಒಂದಕ್ಕಿಂತ ಹೆಚ್ಚು ಮೂಲ ಜನಪದ ಪ್ರಕಾರಗಳನ್ನು ಪ್ರಸ್ತುತ ಪಡಿಸಲು ಅವಕಾಶ ಕಲ್ಪಿಸಲಾಗಿದ್ದು, ಒಂದು ತಂಡಕ್ಕೆ 30 ನಿಮಿಷ ಸ್ಪರ್ಧೆ ಗೆ ಅವಕಾಶ ವಿದೆ. ತಂಡದಲ್ಲಿ ಕನಿಷ್ಟ 8 ಕಲಾವಿದರು ಇರಬೇಕು. ಯುವಕ – ಯುವತಿಯರು ಒಗ್ಗೂಡಿ ಸ್ಪರ್ಧೆ ನೀಡಬಹುದು. ವಯಸ್ಸಿನ ಮಿತಿ ಇಲ್ಲ. ಮೊದಲು ನೋಂದಾಯಿಸಿದ 15 ತಂಡಗಳಿಗೆ ಅವಕಾಶ. ಡಿ.25 ನೋಂದಾವಣೆಗೆ ಕೊನೆಯ ದಿನ. ಸ್ಪರ್ಧಾ ವಿಜೇತರಿಗೆ ಪ್ರಥಮ ರೂ.30 ಸಾವಿರ ನಗದು ಹಾಗೂ ದ್ವಿತೀಯ ರೂ.20 ಸಾವಿರ ನಗದು ಜತೆಗೆ ಶಾಶ್ವತ ಫಲಕ ಇದೆ. ಹಾಗೂ ವಿವಿಧ ಪ್ರೋತ್ಸಾಹಕ ನಗದು ಬಹುಮಾನವೂ ಇದೆ ಎಂದು ಅವರು ವಿವರ ನೀಡಿದರು.

ನಾಯಕತ್ವ ಶಿಬಿರ : ಜಾನಪದ ವೈಭವ ಕಾರ್ಯಕ್ರಮ ಮುನ್ನಾ ದಿನವಾದ ಜನವರಿ 4 ಮತ್ತು 5 ರಂದು ರಾಜ್ಯ ಮಟ್ಟದ ನಾಯಕತ್ವ ಶಿಬಿರ ನಡೆಯಲಿದೆ. ಸುಮಾರು 200 ಮಂದಿಗೆ ಅವಕಾಶ ಕಲ್ಪುಸಲಾಗುವುದು ಎಂದವರು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಅಧ್ಯಕ್ಷ ರಕ್ಷಿತ್ ಬೊಳ್ಳೂರು, ಕೋಶಾಧಿಕಾರಿ ಹೇಮನಾಥ್ ಜಯನಗರ, ಸಂಚಾಲಕ ಮಧುಕಿರಣ್ ಕೊಡಿಯಾಲಬೈಲು, ಆಕಾಶ್ ಕುದ್ಕುಳಿ, ಅಪೇಕ್ಷ್ ಮಣಿಯಾನ ಇದ್ದರು.