ಮುಚ್ಚಿಲ: ಕ್ಲಾಸಿಕ್ ಸ್ಪೋಟ್ಸ್ ಕ್ಲಬ್‌ನಿಂದ ಕೆಪಿಎಲ್ ಟ್ರೋಫಿ, ಸನ್ಮಾನ

0


ಕ್ಲಾಸಿಕ್ ಸ್ಪೋರ್ಟ್ಸ್ ಕ್ಲಬ್ ಮುಚ್ಚಿಲ ಇದರ ವತಿಯಿಂದ 3ನೇ ವರ್ಷದ ಕೆಪಿಎಲ್ ಟ್ರೋಫಿ ‘ಕ್ರಿಕೆಟ್ ಹಬ್ಬ’ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಪತ್ರಕರ್ತ ‘ವಾರ್ತಾಭಾರತಿ’ಯ ಸಂಶುದ್ದೀನ್ ಎಣ್ಮೂರು ಅವರಿಗೆ ಸನ್ಮಾನ ಕಾರ್ಯಕ್ರಮವು ರವಿವಾರ ಕರಿಕ್ಕಳ ಶಾಲಾ ಮೈದಾನದಲ್ಲಿ ನಡೆಯಿತು.


ಸಮಾರಂಭವನ್ನು ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ ಉದ್ಘಾಟಿಸಿ ಶುಭ ಹಾರೈಸಿದರು. ಕ್ಲಾಸಿಕ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ನಝೀರ್ ಮುಚ್ಚಿಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಂಜ ಗ್ರಾಪಂ ಸದಸ್ಯ ಜಗದೀಶ್ ಪುರಿಯ, ಪಂಜ ಗ್ರಾಪಂ ಮಾಜಿ ಅಧ್ಯಕ್ಷ ಸಿ.ಎಂ.ರಫೀಕ್ ಐವತ್ತೊಕ್ಲು, ಎಸ್.ಆರ್.ಗ್ರೂಪ್ಸ್‌ನ ಮಾಲಕ ರಫೀಕ್ ಟಿ.ಎಸ್., ಕ್ಲಾಸಿಕ್ ಸ್ಪೋರ್ಟ್ಸ್ ಕ್ಲಬ್‌ನ ಸಲಹಾ ಸಮಿತಿ ಸದಸ್ಯ ಹಮೀದ್ ಮರಕ್ಕಡ ಮತ್ತು ಪಡ್ಪಿನಂಗಡಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ದಾವೂದ್ ಮುಚ್ಚಿಲ ಭಾಗವಹಿಸಿದ್ದರು.


ಸನ್ಮಾನ: ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ ನೀಡಲ್ಪಡುವ ರಾಜ್ಯ ಪ್ರಶಸ್ತಿ ಪುರಸ್ಕೃತ ವಾರ್ತಾಭಾರತಿಯ ಪತ್ರಕರ್ತ ಸಂಶುದ್ದೀನ್ ಎಣ್ಮೂರು ಅವರನ್ನು ಸನ್ಮಾನಿಸಲಾಯಿತು.


ಸಮಾರೋಪ ಸಮಾರಂಭ: ಕ್ಲಾಸಿಕ್ ಸ್ಪೋರ್ಟ್ಸ್ ಕ್ಲಬ್‌ನ ಉಪಾಧ್ಯಕ್ಷ ಶಕೀಲ್ ಮುಚ್ಚಿಲ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಸುಳ್ಯ ತಾಲೂಕು ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ಗಫೂರ್, ನಿಂತಿಕಲ್ಲು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಶರೀಫ್ ನಿಂತಿಕಲ್ಲು, ಉದ್ಯಮಿ ನಾಸಿರ್ ನಿಡ್ವಳ, ಕ್ಲಾಸಿಕ್ ಸ್ಪೋಟ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷ ಅಶ್ರಫ್ ಮರಕ್ಕಡ ಉಪಸ್ಥಿತರಿದ್ದರು.


ಪ್ರಶಸ್ತಿ ಪ್ರದಾನ: ಕ್ಲಾಸಿಕ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಮೋನು ಮಂಚಿ ಮಾಲಕತ್ವದ ಜಝಾ ಎವೇಂಜರ್ಸ್‌ ಮಂಚಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಅಶ್ರಫ್ ಮರಕ್ಕಡ ಮಾಲಕತ್ವದ ಗ್ರೀನ್ ಗೈಸ್ ಮರಕ್ಕಡ ರನ್ನರ್ಸ್‌ಗೆ ತೃಪ್ತಿಪಟ್ಟರೆ ಜಲೀಲ್ ಮುಚ್ಚಿಲ ಮಾಲಕತ್ವದ ಮುಚ್ಚಿಲ ವಾರಿಯರ್ಸ್ ತೃತೀಯ ಮತ್ತು ಕಲಂದರ್, ಹಮೀದ್, ಕಬೀರ್ ಅಡಿಬೈ ಮಾಲಕತ್ವದ ಗಲ್ಫ್ ಬಾಯ್ಸ್ ಅಡಿಬೈ ಚತುರ್ಥ ಸ್ಥಾನವನ್ನು ಪಡೆದುಕೊಂಡಿತ್ತು.


ಅಬ್ದುರ್ರಝಾಕ್ ಎಣ್ಮೂರು ಸ್ವಾಗತಿಸಿದರು. ಪ್ರದೀಪ್ ಎಣ್ಮೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.