ಎನ್ನೆಂಸಿಯ ಕನ್ನಡ ಭಾಷಾ ವಿದ್ಯಾರ್ಥಿಗಳಿಂದ ಬಂಟ್ವಾಳ ಕಂಬಳಕ್ಕೆ ಅಧ್ಯಯನ ಭೇಟಿ

0

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಭಾಷೆಯನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಬಂಟ್ವಾಳ ಕಂಬಳಕ್ಕೆ ಅಧ್ಯಯನ ಭೇಟಿಗೆ ತೆರಳಿದ್ದರು.

ದ್ವಿತೀಯ ಬಿ ಎ ಮತ್ತು ಬಿ ಎಸ್ ಡಬ್ಲ್ಯೂ ವಿದ್ಯಾರ್ಥಿಗಳಿಗೆ ಕೋಟ ಶಿವರಾಮ ಕಾರಂತರ “ಕಂಬಳ”ದ ಕುರಿತಾದ ಪಠ್ಯವನ್ನು ಅಧ್ಯಯನ ಮಾಡಲು ಇರುವುದರಿಂದ ಅದನ್ನು ಪ್ರಾಯೋಗಿಕವಾಗಿ ವೀಕ್ಷಿಸುವ ಸಲುವಾಗಿ ಬಂಟ್ವಾಳದಲ್ಲಿ ಮಾರ್ಚ್ 2 ರಂದು ನಡೆದ ಹದಿಮೂರನೇ ವರ್ಷದ ಹೊನಲು ಬೆಳಕಿನ “ಮೂಡೂರು- ಪಡೂರು” ಜೋಡುಕರೆ ಬಯಲು ಕಂಬಳವನ್ನು ವೀಕ್ಷಿಸಲು ಕಾಲೇಜಿನ ಪ್ರಥಮ ಬಿ ಎ, ಬಿ ಎಸ್ ಡಬ್ಲ್ಯೂ ಮತ್ತು ದ್ವಿತೀಯ ಬಿ ಎ, ಬಿ ಎಸ್ ಡಬ್ಲ್ಯೂ ವಿನ ಕನ್ನಡ ಭಾಷೆಯನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಕನ್ನಡ ಸಂಘದ ವತಿಯಿಂದ ಕನ್ನಡ ಸಹಾಯಕ ಪ್ರಾಧ್ಯಾಪಕಿ ಹಾಗೂ ಕನ್ನಡ ಸಂಘದ ಸಂಚಾಲಕಿಯಾದ ಡಾ. ಅನುರಾಧಾ ಕುರುಂಜಿಯವರ ಮಾರ್ಗದರ್ಶನದಲ್ಲಿ ತೆರಳಿದ್ದರು.

ಈ ಸಂದರ್ಭದಲ್ಲಿ ಕರ್ನಾಟಕದ ಘನತೆವೆತ್ತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಸಚಿವರಾದ ಮಾನ್ಯ ರಮಾನಾಥ್ ರೈಯವರು, ಕಂಬಳದ ಸಂಘಟಕರು ಹಾಗೂ ಸುಳ್ಯದ ಕೆಲವು ಮಹನೀಯರು ಉಪಸ್ಥಿತರಿದ್ದರು.

ಕಂಬಳದ ಸಂಘಟಕರು ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಬಹಳ ಆತ್ಮೀಯವಾಗಿ ಬರಮಾಡಿಕೊಂಡರು. ಅದೇ ರೀತಿ ಕಂಬಳದ ಸ್ಪರ್ಧೆಯಲ್ಲಿ ಈ ಹಿಂದೆ ಸ್ಪರ್ಧಿಸಿ ವಿಜೇತರಾದ ಕೋಣಗಳ ಮಾಲೀಕರು ಹಾಗೂ ಆ ಕೋಣಗಳನ್ನು ಓಡಿಸುವವರ ಜೊತೆಗೆ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳುವ ಮೂಲಕ ತಮ್ಮ ಸಂಶಯಗಳನ್ನು ಪರಿಹರಿಸಿಕೊಳ್ಳುವುದರ ಜೊತೆಗೆ ಪುರಾತನವಾದ ಕೃಷಿ ಸಂಬಂಧಿ ಆಚರಣೆಯಾದ ಕಂಬಳ ಕ್ರೀಡೆಗೆ ಇರುವ ಮಹತ್ವವನ್ನು ಕೇಳಿ ತಿಳಿದುಕೊಂಡರು.

ಕಾಂತಾರ ಸಿನೇಮಾದ ರಿಷಬ್ ಶೆಟ್ಟಿಯವರಿಗೆ ಕೋಣಗಳನ್ನು ಓಡಿಸುವ ತರಬೇತಿಯನ್ನು ನೀಡಿದವರು ಕೋಣಗಳನ್ನು ಓಡಿಸಲು ಈ ಕಂಬಳದಲ್ಲಿ ಇದ್ದುದು ಗಮನಾರ್ಹವಾಗಿತ್ತು.