ಅರಂತೋಡು: ಗುದ್ದಲಿಪೂಜೆಯ ಮರುದಿನವೇ ಅಂಗಡಿಮಜಲು – ಬಾಜಿನಡ್ಕ ರೆಂಜಾಳ ಸಂಪರ್ಕ ರಸ್ತೆಯ ಕಾಮಗಾರಿ ಪ್ರಾರಂಭ

0

ಅರಂತೋಡಿನಿಂದ ಅಂಗಡಿಮಜಲು – ಬಾಜಿನಡ್ಕ – ಅಡ್ಕಬಳೆ ಮೂಲಕ ಮರ್ಕಂಜ ಗ್ರಾಮದ ರೆಂಜಾಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಗುದ್ದಲಿಪೂಜೆ ನಡೆದ ಮರುದಿನವೇ ಅದೇ ಕಾಮಗಾರಿ ಪ್ರಾರಂಭಗೊಂಡಿದೆ.

ಅರಂತೋಡು ಗ್ರಾಮದ ಅಂಗಡಿಮಜಲು – ಅಡ್ಕಬಳೆ – ಬಾಜಿನಡ್ಕ ಮೂಲಕ ಮರ್ಕಂಜ ಗ್ರಾಮದ ರೆಂಜಾಳಕ್ಕೆ ತೆರಳುವ ರಸ್ತೆಯು ಕಳೆದ ಹಲವಾರು ವರ್ಷಗಳಿಂದ ತೀರಾ ಹದಗೆಟ್ಟಿದ್ದು, ಈ ಬಗ್ಗೆ ಈ ಭಾಗದ ನಿವಾಸಿಗಳು ರಸ್ತೆ ಅಭಿವೃದ್ಧಿಗೊಳ್ಳದ ಕುರಿತು ಬೇಸತ್ತು ಕಳೆದ ಎರಡು ತಿಂಗಳ ಹಿಂದೆ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದರು.

ಈ ಬಗ್ಗೆ ಕಳೆದ ಮಾ.7ರಂದು ನಡೆದ ಅರಂತೋಡು ಗ್ರಾಮಸಭೆಯಲ್ಲಿ ಚರ್ಚೆಯಾಗಿದ್ದು, ಮಾ.8ರಂದು ಸಂಜೆ ಶಾಸಕಿ ಭಾಗೀರಥಿ ಮುರುಳ್ಯ ಅವರು ಆಗಮಿಸಿ ಗುದ್ದಲಿಪೂಜೆ ನೆರವೇರಿಸಿದ್ದರು. ಇದೀಗ ಗುದ್ದಲಿಪೂಜೆ ನಡೆದ ಮರುದಿನವೇ ಅಂದರೆ ಮಾ.9ರಂದು ಕುಕ್ಕುಂಬಳ ಕ್ರಾಸ್ ಬಳಿಯಿಂದ ರಸ್ತೆ ಕಾಮಗಾರಿಯು ಆರಂಭಗೊಂಡಿರುವುದಾಗಿ ತಿಳಿದುಬಂದಿದೆ.